ಬಡವರ ಆಯುಷ್ಮಾನ್ ಯೋಜನೆಯ ಪಟ್ಟಿಯಲ್ಲಿ ಸಚಿವರು, ಶಾಸಕರ ಹೆಸರು!
ಕಾನ್ಪುರ, ಅಕ್ಟೋಬರ್ 6: ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಪ್ರಯೋಜನವಾಗಲಿ ಎಂಬ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಆರಂಭವಾಗಿ ಎರಡು ವಾರವಾಗುವುದರೊಳಗೇ ಉಳ್ಳವರ ಪಾಲಾಗುವ ಲಕ್ಷಣಗಳು ಕಂಡುಬಂದಿವೆ.
ಅತ್ತ ಬಡವರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದರೆ, ಉತ್ತರ ಪ್ರದೇಶದ ಕಾನ್ಪುರದ ಅಧಿಕಾರಿಗಳು ಈ ಯೋಜನೆಯ ಫಲಾನುಭವಿಗಳಾಗಿ ಸಚಿವರು, ಮಾಜಿ ಶಾಸಕರು ಮತ್ತು ಪ್ರಸಿದ್ಧ ಉದ್ಯಮಿಗಳನ್ನು ಪಟ್ಟಿಯಲ್ಲಿ ಸೇರಿಸಿದ್ದಾರೆ.
ದೇಶದಾದ್ಯಂತ ಸುಮಾರು 50ಕೋಟಿ ಬಡಜನರಿಗೆ ಐದು ಲಕ್ಷದವರಿಗೆ ಆರೋಗ್ಯ ವಿಮೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಮಹತ್ವಾಕಾಂಕ್ಷಿ ಯೋಜನೆಯನ್ನೂ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುವ ಭೀತಿ ಎದುರಾಗಿದೆ.

ವೆಬ್ಸೈಟ್ನಲ್ಲಿ ಹೆಸರು
ಆಯುಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ವೆಬ್ಸೈಟ್ನಲ್ಲಿ ಸ್ವತಃ ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ಸತೀಶ್ ಮಹಾನ ಮತ್ತು ಅವರ ಕುಟುಂಬದವರ ಹೆಸರನ್ನು ನಮೂದಿಸಲಾಗಿದೆ. ಅಲ್ಲದೆ ಬಿಜೆಪಿಯ ಮಾಜಿ ಶಾಸಕ ಸಲೀಲ್ ವಿಶ್ಣೋಯಿ, ಕಾಂಗ್ರೆಸ್ನ ಮಾಜಿ ಶಾಸಕ ಅಜಯ್ ಕಪೂರ್, ಅವರ ಸಹೋದರರಾದ ವಿಜಯ್ ಕಪೂರ್ ಮತ್ತು ಸಂಜಯ್ ಕಪೂರ್ ಹಾಗೂ ನಗರದ ಕೆಲವು ಬಿಲ್ಡರ್ಗಳ ಹೆಸರೂ ವೆಬ್ಸೈಟ್ನಲ್ಲಿದೆ.

ತನಿಖೆಗೆ ಆದೇಶ
ಬಡವರಿಗಾಗಿ ಇರುವ ಈ ಯೋಜನೆಯಲ್ಲಿ ತಮ್ಮ ಹೆಸರು ಕಂಡು ಮುಜುಗರಕ್ಕೆ ಒಳಗಾಗಿರುವ ಸತೀಶ್ ಮಹಾನ ತಪ್ಪಿತಸ್ಥ ಅಧಿಕಾರಿಗಳ ಈ ನಿರ್ಲಕ್ಷ್ಯದ ಮತ್ತು ಬೇಜವಾಬ್ದಾರಿಯುತ ಕಾರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಿರುವುದಾಗಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಬಡವರಿಗೆ ಆಶಾಕಿರಣ
ಚಿಕಿತ್ಸೆಗೆ ಹಣವಿಲ್ಲದೆ ಯಾವ ರೋಗಿಯೂ ಪರದಾಡುವಂತಾಗಬಾರದು ಎಂಬ ಕಳಕಳಿಯಿಂದ ಆರಂಭಿಸಿರುವ ಆಯುಷ್ಮಾನ್ ಭಾರತ್ ಎಂಬ ಬೃಹತ್ ಆರೋಗ್ಯ ಯೋಜನೆಗೆ ಪ್ರಧಾನಿ ಮೋದಿ ಸೆ.23ರಂದು ಚಾಲನೆ ನೀಡಿದ್ದರು. 10 ಕೋಟಿ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ. ವರೆಗೆ ಆರೋಗ್ಯ ವಿಮೆಯನ್ನು ಈ ಯೋಜನೆ ಒದಗಿಸಲಿದೆ. ಕುಟುಂಬದ ಸದಸ್ಯರ ಮಿತಿಯಿಲ್ಲದೆ ಈ ಯೋಜನೆ ಪಡೆದುಕೊಳ್ಳಬಹುದು.

ಸರ್ಕಾರವೇ ಹಣ ಪಾವತಿಸಲಿದೆ
ಕುಟುಂಬದ ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ರೋಗಿಯ ಕುಟುಂಬ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದು ನಗದು ರಹಿತ (ಕ್ಯಾಶ್ ಲೆಸ್) ಯೋಜನೆಯಾಗಿದ್ದು, ಸರ್ಕಾರವೇ ನೇರವಾಗಿ ಆಸ್ಪತ್ರೆಗೆ ಹಣ ಪಾವತಿಸಲಿದೆ.
ಆಸ್ಪತ್ರೆಗೆ ದಾಖಲಾಗುವ ಮೊದಲ(ಸ್ಕ್ಯಾನಿಂಗ್, ಎಕ್ಸ್ ರೇ ಇತ್ಯಾದಿ ತಪಾಸಣೆ) ಮತ್ತು ದಾಖಲಾದ ನಂತರದ ಖರ್ಚು ವೆಚ್ಚಗಳೂ ಇದರಲ್ಲಿ ಸೇರಿವೆ. ಸರ್ಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿಯಿಂದ ಈ ಸೌಲಭ್ಯ ಪಡೆಯುವುದಕ್ಕೆ ಸಾಧ್ಯವಿರುವುದರಿಂದ, ಫಲಾನುಭವಿಗಳು ಪರಿತಪಿಸುವ ಅಗತ್ಯವಿರುವುದಿಲ್ಲ.












Click it and Unblock the Notifications