ಪಿಡಿಪಿ ಒಡೆದರೆ ಉಗ್ರರು ಹುಟ್ಟುತ್ತಾರೆ: ಮುಫ್ತಿ ಹೇಳಿಕೆಗೆ ವ್ಯಾಪಕ ಖಂಡನೆ
ಶ್ರೀನಗರ, ಜುಲೈ 13: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಅಪಾಯಕಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಿಡಿಪಿಯಲ್ಲಿ ಒಡಕು ಉಂಟು ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ಸಲಾಹುದ್ದೀನ್ ಮತ್ತು ಯಾಸೀನ್ ಮಲಿಕ್ ಅವರಂತಹ ಉಗ್ರರು ಹುಟ್ಟಿಕೊಳ್ಳುತ್ತಾರೆ ಎನ್ನುವ ಮೂಲಕ ಮುಫ್ತಿ ವಿವಾದ ಸೃಷ್ಟಿಸಿದ್ದಾರೆ.
1987ರಲ್ಲಿ ಮಾಡಿದಂತೆ ಜನರ ಮತದಾನದ ಹಕ್ಕುಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ಮತ್ತು ವಿಭಜನೆ ಮಾಡಿ ಅದರಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ, 1987ರಲ್ಲಿ ಒಬ್ಬ ಸಲಾಹುದ್ದೀನ್ ಮತ್ತು ಒಬ್ಬ ಯಾಸಿನ್ ಮಲಿಕ್ ಜನಿಸಿದಂತೆ ಅಪಾಯಕಾರಿ ಸಂದರ್ಭಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದ್ದಾರೆ.
ಮೆಹಬೂಬಾ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಸೇರಿಕೊಂಡು ನಿರ್ಮಿಸಿದ್ದ ಸಮ್ಮಿಶ್ರ ಸರ್ಕಾರ ಕಳೆದ ತಿಂಗಳು ಪತನಗೊಂಡಿತ್ತು.
ಈ ಮೈತ್ರಿಕೂಟ ಮುರಿದುಬಿದ್ದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ನಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
ನಮಗೆ ನೀಡಲಾಗುತ್ತಿರುವ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು (ಸಿಡಿಎಫ್) ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ ಸಂಬಳ ನೀಡುವುದೇತಕೆ?
ನಮಗೆ ನಮ್ಮ ಸಿಡಿಎಫ್ ನೀಡಿ. ವಿಧಾನಸಭೆಯನ್ನು ವಿಸರ್ಜಿಸಿ, ಕುದುರೆ ವ್ಯಾಪಾರವನ್ನು ನಿಲ್ಲಿಸಿ. ನೀವು ವಿಧಾನಸಭೆಯನ್ನು ವಿಸರ್ಜಿಸಿ, ಕುದುರೆ ವ್ಯಾಪಾರ ಸ್ಥಗಿತಗೊಳಿಸಿ, ಜನರನ್ನು ಕೊಲ್ಲುವುದನ್ನು ನಿಲ್ಲಿಸಿದ ಬಳಿಕ ನಾವು ಚುನಾವಣೆ ಬಗ್ಗೆ ಮಾತನಾಡುತ್ತೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಸರ್ಕಾರ ರಚನೆಗೆ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಕಳೆದ ತಿಂಗಳು ಹಿಂದಕ್ಕೆ ಪಡೆದುಕೊಂಡಿತ್ತು. ಇದರಿಂದ ಮುಖ್ಯಮಂತ್ರಿ ಸ್ಥಾನದಿಂದ ಮೆಹಮೂಬಾ ಮುಫ್ತಿ ಕೆಳಕ್ಕಿಳಿಯಬೇಕಾಗಿತ್ತು.
ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿದೆ.
1931ರ ಜುಲೈ 13ರಂದು ಮಹಾರಾಜ್ ಹರಿಸಿಂಗ್ ಅವರ ಆದೇಶದಂತೆ ಡೋಗ್ರಾ ತುಕುಡಿಯು ಶ್ರೀನಗರ ಸೆಂಟ್ರಲ್ ಜೈಲ್ನ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಘಟನೆಯಲ್ಲಿ 22 ಕಾಶ್ಮೀರಿ ಜನರು ಮೃತಪಟ್ಟಿದ್ದರು. ಈ ದಿನವನ್ನು ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ.
|
ಪಕ್ಷದ ಆಂತರಿಕ ಸಮಸ್ಯೆಗೆ ಕಾರಣ
1987ರ ಪುರಾತನ ಚಿತ್ರವಿದು. ಫಾರೂಕ್ ಅಬ್ದುಲ್ಲಾ ಜತೆ 'ದೆಹಲಿ'. ಚಿತ್ರದಲ್ಲಿ ಇರುವ ಇತರರನ್ನು ಸುಲಭವಾಗಿ ಗುರುತಿಸಬಹುದು. ಕಡೆಯ ಪಕ್ಷ ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳಿಗೆ ದೆಹಲಿಯನ್ನು ತಪ್ಪಾಗಿ ದೂಷಿಸುತ್ತಿರುವ ಮೆಹಬೂಬಾ ಅವರಾದರೂ ಗುರುತಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಲೇವಡಿ ಮಾಡಿದ್ದಾರೆ.
|
ಅಂತ್ಯವನ್ನು ಸಂಭ್ರಮಿಸುತ್ತಿದ್ದಾರೆ
ನೀವು ಮತ್ತು ನಿಮ್ಮ ಆಪ್ತ ಸ್ನೇಹಿತರು ಅಧಿಕಾರ ಕಳೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಜನರು ಗನ್ ಎತ್ತಿಕೊಳ್ಳುತ್ತಾರೆ ಎನ್ನುತ್ತಿದ್ದೀರಾ? ಇದು ದುರಾಡಳಿತಕ್ಕೆ ಅಂತ್ಯ. ಜನರು ಸಂಭ್ರಮಿಸುತ್ತಿದ್ದಾರೆ. ಎಚ್ಚೆತ್ತುಕೊಳ್ಳಿ ಎಂದು ಇಮ್ರಾನ್ ರೆಜಾ ಅನ್ಸಾರಿ ಟ್ವೀಟ್ ಮಾಡಿದ್ದಾರೆ.
|
ಬಂಧಿಸುವ ಧೈರ್ಯ ಪ್ರದರ್ಶಿಸಿ
ನಿಮ್ಮ ಧೈರ್ಯವನ್ನು ಪ್ರದರ್ಶಿಸಿ ಮೆಹಬೂಬ ಮುಫ್ತಿಯನ್ನು ಜೈಲಿಗೆ ಅಟ್ಟಿ ಎಂದು ನರೇಂದ್ರ ಮೋದಿ ಅವರಿಗೆ ಅತುಲ್ ಸುದಾನ್ ಸವಾಲು ಹಾಕಿದ್ದಾರೆ.
ಇಲ್ಲದಿದ್ದರೆ ಮೂರು ವರ್ಷ ಅವರೊಂದಿಗೆ ಮೈತ್ರಿಕೂಟ ರಚಿಸಿದ್ದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ. ಅವರು ಈಗ ತಮ್ಮ ನೈಜ ಮುಖವನ್ನು ಪ್ರದರ್ಶಿಸುತ್ತಿದ್ದಾರೆ. ಜಿಹಾದಿ ಹಾಗೂ ರಾಷ್ಟ್ರವಿರೋಧಿ ಮೆಹಬೂಬಾ ಜಮ್ಮುವಿನ ನಕ್ಷೆಯನ್ನು ಬದಲಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದ್ದಾರೆ.
|
ರಾಜಕೀಯ ಮೂರ್ಖತನದ ಪರಮಾವಧಿ
ಇಂತಹ ಕ್ಷುಲ್ಲಕ ಹೇಳಿಕೆಗಳ ಮೂಲಕ ಮೆಹಬೂಬಾ ಮುಫ್ತಿ ತಮ್ಮ ರಾಜಕೀಯದ ಮೂರ್ಖತನದ ಪರಮಾವಧಿ ತಲುಪಿದ್ದಾರೆ.
2016ಕ್ಕಿಂತ ತುಸು ಹಿಂದೆ ಹೋದರೂ ಸಾಕು. ಅವರ ವಂಶ ಜಕೀರ್ ಮೂಸಾ, ಸಬ್ಜಾರ್ ಅಹ್ಮದ್, ಸಮೀರ್ ಟೈಗರ್, ಮುಂತಾದವರ ರೂಪದಲ್ಲಿ ಈ ದಿನದ ಸಲಾಹುದ್ದೀನ್ಗಳನ್ನು ಸೃಷ್ಟಿಸಿದೆ ಎಂದು ಸಲ್ಮಾನ್ ಸಾಗರ್ ಎಂಬುವವರು ಟೀಕಿಸಿದ್ದಾರೆ.
|
ಮುಫ್ತಿ ಆದೇಶ ಪಾಲಿಸುತ್ತಾರೆ
ಮೆಹಬೂಬಾ ಮುಫ್ತಿ ಧಮಕಿ ಹಾಕಿದ ಗಂಟೆಗಳ ಒಳಗೇ ಕಾಶ್ಮೀರದಲ್ಲಿ ಸಿಆರ್ಪಿಎಫ್ನ ಇಬ್ಬರು ಯೋಧರು ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಇದು ಉಗ್ರರು ಅವರ ಆದೇಶವನ್ನು ಹೇಗೆ ಪಾಲಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಕಣಿವೆಯಲ್ಲಿ ಉಗ್ರರಿಗೆ ಅವರು ಬೆಂಬಲ ನೀಡುತ್ತಾರೆ ಎಂಬುದನ್ನು ನಾವು ಟ್ವಿಟ್ಟಿಗರು ಯಾವಾಗಲೂ ಹೇಳುತ್ತಿದ್ದೆವು ಎಂದು ನಂದಿನಿ ಇದ್ನಾನಿ ಎಂಬುವವರು ಹೇಳಿದ್ದಾರೆ.












Click it and Unblock the Notifications