ಅಪಹೃತ ಕೋಬ್ರಾ ಕಮಾಂಡೋ ಭಾವಚಿತ್ರ ಬಿಡುಗಡೆಗೊಳಿಸಿದ ನಕ್ಸಲರು
ರಾಯ್ಪುರ, ಏಪ್ರಿಲ್ 7: ಅಪಹರಣ ಮಾಡಿದ್ದ ಕೋಬ್ರಾ ಕಮಾಂಡೋ ಒಬ್ಬರ ಭಾವಚಿತ್ರವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ.
ಛತ್ತೀಸ್ಗಢದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕೋಬ್ರಾ ಕಮಾಂಡೋ ಒಬ್ಬರನ್ನು ಮಾವೋವಾದಿಗಳು ಅಪಹರಣ ಮಾಡಿದ್ದರು. ಬಳಿಕ ಈ ಕುರಿತು ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಯೋಧನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮಧ್ಯವರ್ತಿಯೊಬ್ಬರನ್ನು ಸರ್ಕಾರ ನೇಮಕ ಮಾಡಬೇಕೆಂದು ಹೇಳಿದ್ದರು.
ಛತ್ತೀಸ್ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯ ಜೊನಗುಡ ಮತ್ತು ಟೆಕಲ್ಗುಡದ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಯ ಮೇಲೆ ನಕ್ಸಲರ ಗುಂಪು ಗುಂಡಿನ ದಾಳಿ ನಡೆಸಿದ ಪರಿಣಾಮ 22 ಯೋಧರು ಹುತಾತ್ಮರಾಗಿದ್ದರು.

ಇದೀಗ ಯೋಧನ ಫೋಟೋವನ್ನು ಬಿಡುಗಡೆ ಮಾಡಿರುವ ಮಾವೋವಾದಿಗಳು ಯೋಧ ಸುರಕ್ಷಿತವಾಗಿದ್ದು, ನಾವು ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ತರೆಮ್, ಉಸೂರ್, ಪಮೇಡ್, ಸುಕ್ಮಾ ಜಿಲ್ಲೆಯ ಮಿನ್ಪಾ ಹಾಗೂ ನರ್ಸಾಪುರಂ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು.
2,000 ಸಿಬ್ಬಂದಿ ಭಾಗಿಯಾಗಿದ್ದರು. ಅಧಿಕಾರಿಯೊಬ್ಬರ ಪ್ರಕಾರ, ಗುಂಡಿನ ದಾಳಿ ಕೃತ್ಯದಲ್ಲಿ ಸುಮಾರು 400 ಮಾವೋವಾದಿಗಳು ಭಾಗಿಯಾಗಿದ್ದರು. ಪಿಎಲ್ಜಿಎ ಸಂಘಟನೆ 1ನೇ ಬೆಟಾಲಿಯನ್ನ ಹಿದ್ಮಾ ಮತ್ತು ಆತನ ಸಹಚರರಾದ ಸುಜಾತಾ ಈ ದಾಳಿಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. ಕೋಬ್ರಾ ಯೋಧರು ತೀವ್ರ ಪ್ರತಿರೋಧ ತೋರಿದ್ದರಿಂದ ನಕ್ಸಲರು ಇನ್ನಷ್ಟು ದಾಳಿ ಮುಂದುವರಿಸಲಾಗಲಿಲ್ಲ.
ನಕ್ಸಲರು ಅಡಗಿದ್ದಾರೆ ಎಂದು ನಮಗೆ ಬಂದಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ತೆರಳಿದ್ದೆವು, ಆದರೆ ಆ ಜಾಗದಲ್ಲಿ ಉಆರೂ ಇರಲಿಲ್ಲ, ಕೆಂಪು ಬಾವುಟವಿತ್ತು. ನಾವು ವಾಪಸ್ ತೆರಳುವುದಕ್ಕೆ ಮುಂದಾದಾಗ ಹೇಗೆ ನಕ್ಸಲರು ದಾಳಿ ಮಾಡಿದರು ಎಂಬುದೇ ತಿಳಿಯಲಿಲ್ಲ ಎಂದು ಯೋಧರೊಬ್ಬರು ತಿಳಿಸಿ್ದರು.
ಮಾವೋವಾದಿಗಳ ಪ್ರಾಬಲ್ಯವಿರುವ ಗಡಿ ಜಿಲ್ಲೆಯ ಸುಕ್ಮಾದ ಅರಣ್ಯ ಭಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಸುತ್ತುವರಿದು ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಸುಮಾರು 4 ಗಂಟೆ ಗುಂಡಿನ ಚಕಮಕಿ ನಡೆದಿದೆ. ತಂಡವು ತರೆಮ್ನಿಂದ ಹೊರಟು ಜೋನಾಗುಡ ಅರಣ್ಯದ ಮೂಲಕ ಹೋಗುವಾಗ ದಾಳಿ ನಡೆದಿತ್ತು.












Click it and Unblock the Notifications