ಸಾವಿನ ಲೆಕ್ಕ ಇರುವುದೇ ಒಂದು, WHO ಹೇಳುವುದೇ ಮತ್ತೊಂದು ಎಂದ ಮಾಂಡವಿಯಾ
ನವದೆಹಲಿ, ಮೇ 24: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಅತಿಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎನ್ನುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ(WHO) ವರದಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಜಿನೇವಾ ಕೇಂದ್ರ ಕಚೇರಿಯಲ್ಲಿ ನಡೆದ ಜಾಗತಿಕ ಸಂಸ್ಥೆಯಲ್ಲಿ ನಡೆದ ವಿಶ್ವ ಆರೋಗ್ಯ ಅಸೆಂಬ್ಲಿಯ 75ನೇ ಅಧಿವೇಶನದಲ್ಲಿ ಅವರು ಮಾತನಾಡಿದ್ದಾರೆ. ಕಳೆದ ಮಾರ್ಚ್ನಲ್ಲಿ ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ಗೆ ಸಂಬಂಧಿಸಿದ ಹೆಚ್ಚಿನ ಮರಣದ ಅಂದಾಜುಗಳನ್ನು ಯೋಜಿಸಲು ವಿಶ್ವ ಆರೋಗ್ಯ ಸಂಸ್ಥೆ ಗಣಿತದ ಮಾದರಿಗಳನ್ನು ಬಳಸುವುದನ್ನು ಆಕ್ಷೇಪಿಸಿತ್ತು. ಅಲ್ಲದೇ ಹೀಗೆ ಬಳಸಿದ ಮಾದರಿಗಳ ಸಿಂಧುತ್ವ ಮತ್ತು ದೃಢತೆ ಮತ್ತು ಡೇಟಾ ಸಂಗ್ರಹಣೆಯ ವಿಧಾನಗಳು ಪ್ರಶ್ನಾರ್ಹವಾಗಿವೆ ಎಂದು ಹೇಳಿದರು.
"ಕಾನೂನುಬದ್ಧ ಪ್ರಾಧಿಕಾರವು ಪ್ರಕಟಿಸಿದ ನಮ್ಮ ದೇಶದ ನಿರ್ದಿಷ್ಟ ಅಧಿಕೃತ ದತ್ತಾಂಶವನ್ನು ಗಣನೆಗೆ ತೆಗೆದುಕೊಳ್ಳದೆ ಇರುವ ಎಲ್ಲಾ ಕಾರಣಗಳಿಂದ ಹೆಚ್ಚಿನ ಮರಣದ ಬಗ್ಗೆ WHO ಇತ್ತೀಚಿನ ಅಂಕಿ-ಅಂಶಗಳ ಕುರಿತು ಭಾರತವು ಕಳವಳದಿಂದ ಗಮನಿಸುತ್ತದೆ," ಎಂದು ಮಾಂಡವಿಯಾ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಭಾರತ ಆಕ್ಷೇಪ
ಇತ್ತೀಚೆಗೆ ಸ್ವಾತ್ಯ ಚಿಂತನ್ ಶಿವರ್ ವೇಳೆ ಕೌನ್ಸಿಲ್ ಆಫ್ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್(CCHFW)ನಲ್ಲಿ ದೇಶದ 23 ಆರೋಗ್ಯ ಸಚಿವರು ಭಾಗವಹಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಸಂಭವಿಸಿದ ಸಾವುಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ಮಾಡೆಲಿಂಗ್ ಅಂದಾಜಿನ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು. ಕೌನ್ಸಿಲ್ ಕೂಡ "ತೀವ್ರ ಸಂಕಷ್ಟದಲ್ಲಿದ್ದು, ಇದು ಭಾರತಕ್ಕೆ ಸ್ವೀಕಾರಾರ್ಹವಲ್ಲ" ಎಂದು ಹೇಳಿದೆ.
ಜಿನೀವಾದಲ್ಲಿ ತಮ್ಮ ಭಾಷಣದಲ್ಲಿ, ಕೇಂದ್ರ ಆರೋಗ್ಯ ಸಚಿವರು CCHFW ತೆಗೆದುಕೊಂಡ ಕ್ರಮದ ಬಗ್ಗೆ ಪ್ರಸ್ತಾಪಿಸಿದರು, "ಭಾರತದ ಸಂವಿಧಾನದ 263ನೇ ವಿಧಿಯ ಅಡಿಯಲ್ಲಿ ರಚಿಸಲಾದ ಭಾರತದೊಳಗಿನ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಪ್ರಾತಿನಿಧಿಕ ಸಂಸ್ಥೆಯಾದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯು ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಿಧಾನದ ಬಗ್ಗೆ ಸಾಮೂಹಿಕ ನಿರಾಶೆ ಮತ್ತು ಕಾಳಜಿಯನ್ನು ತಿಳಿಸಲು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು" ಎಂದರು.

ಜಾಗತಿಕ ಸಮುದಾಯದ ಸದಸ್ಯರಾಗಿ ಜವಾಬ್ದಾರಿ ಬಗ್ಗೆ ಮಾತು
ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಲಸಿಕೆಗಳು ಮತ್ತು ಔಷಧಿಗಳ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಗತ್ಯತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸಚಿವರು ಉಲ್ಲೇಖಿಸಿದರು. "ಜಾಗತಿಕ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ ಈ ಪ್ರಯತ್ನಗಳಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ" ಎಂದು ಹೇಳಿದರು.
"ಶಾಂತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಈ ವರ್ಷದ ಗುರಿಯು ಹೆಚ್ಚು ಸಮಯೋಚಿತ ಮತ್ತು ಪ್ರಸ್ತುತವಾಗಿದೆ ಎಂದು ಭಾರತ ನಂಬುತ್ತದೆ. ಏಕೆಂದರೆ ಶಾಂತಿಯಿಲ್ಲದೆ ಯಾವುದೇ ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವತ್ರಿಕ ಆರೋಗ್ಯ ಮತ್ತು ಯೋಗಕ್ಷೇಮ ಸಾಧ್ಯವಿಲ್ಲ," ಎಂದು ಹೇಳಿದರು.

ಕೊರೊನಾ ವೈರಸ್ ಸಾವಿನ ಅಂಕಿ-ಸಂಖ್ಯೆಗಳ ವಿವರಣೆ
ದೇಶದಲ್ಲಿ ವರದಿಯಾದ ಕೋವಿಡ್-19 ಸಂಖ್ಯೆ 481,000 ಮತ್ತು ಅಂದಾಜು 4.74 ಮಿಲಿಯನ್ ಆಗಿದೆ. ಆದ್ದರಿಂದ 481,000 ಕೋವಿಡ್-19 ಸಾವಿನ ಸಂಖ್ಯೆಗಳನ್ನು ವರದಿ ಮಾಡಲಾಗಿದ್ದು, ಉಳಿದಿರುವುದು ಅಂದಾಜು ಸರಾಸರಿ 4.7 ಮಿಲಿಯನ್ ಆಗಿದೆ. ಅದರ ಸುತ್ತಲಿನ ಅನಿಶ್ಚಿತತೆಯು 3.3 ಮಿಲಿಯನ್ನಿಂದ 6.5 ಮಿಲಿಯನ್ ಆಗಿದೆ. ಆದ್ದರಿಂದ ಅವು ಭಾರತಕ್ಕೆ ಅಂದಾಜು ಸಂಖ್ಯೆಗಳಾಗಿವೆ," ಎಂದು ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
"ಜಾಗತಿಕವಾಗಿ 2021ರ ಡಿಸೆಂಬರ್ 31ರ ವೇಳೆಗೆ COVID-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ 14.9 ಮಿಲಿಯನ್ ಹೆಚ್ಚುವರಿ ಸಾವುಗಳನ್ನು ನಾವು ಅಂದಾಜು ಮಾಡುತ್ತೇವೆ. ಆದ್ದರಿಂದ ಈ ಅಂದಾಜು 13.3 ಮಿಲಿಯನ್ನಿಂದ 16.6 ಮಿಲಿಯನ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ 4.4 ಮಿಲಿಯನ್ ಕೋವಿಡ್ -19 ಸಾವುಗಳ ಸಂಖ್ಯೆ ವರದಿಯಾಗಿವೆ. ಹೀಗಾಗಿ ಈ ಹೆಚ್ಚುವರಿ ಅಂದಾಜು 9.5 ಮಿಲಿಯನ್ ಹೆಚ್ಚು ಸಾವುಗಳನ್ನು ಅಥವಾ ವರದಿಗಿಂತ 2.75 ಪಟ್ಟು ಹೆಚ್ಚು ಸಾವುಗಳನ್ನು ಪ್ರತಿನಿಧಿಸುತ್ತದೆ," ಎಂದು ಉಲ್ಲೇಖಿಸಲಾಯಿತು.

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣದ ಏರಿಳಿತ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,022 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಕಳೆದೊಂದು ದಿನದಲ್ಲಿ ಕೊರೊ ನಾವೈರಸ್ ಮಹಾಮಾರಿಯಿಂದ 46 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 2,099 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 43,138,393ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಇದುವರೆಗೂ 42,599,102 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರ ಶೇಕಡಾವಾರು ಪ್ರಮಾಣ ಶೇ.98.75ರಷ್ಟಿದೆ. ಅದೇ ರೀತಿ ಮಹಾಮಾರಿ ಕೋವಿಡ್-19 ಸೋಂಕಿಗೆ ದೇಶದಲ್ಲಿ ಇದುವರೆಗೂ 5,24,459 ಮಂದಿ ಪ್ರಾಣ ಬಿಟ್ಟಿದ್ದು, ಮೃತರ ಪ್ರಮಾಣ ಶೇ.1.22ರಷ್ಟಿದೆ. ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 14,832 ಆಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03ರಷ್ಟಿದೆ.












Click it and Unblock the Notifications