ನಾಗರಿಕ ಮಸೂದೆ ತಿದ್ದುಪಡಿ ವಿರೋಧಿಸಿ ಪದ್ಮಶ್ರೀ ಗೌರವ ವಾಪಸ್
ಇಂಫಾಲ್ (ಮಣಿಪುರ), ಫೆಬ್ರವರಿ 3: ನಾಗರಿಕ (ತಿದ್ದುಪಡಿ) ಮಸೂದೆ 2016 ವಿರೋಧಿಸಿ ನಡೆಯುತ್ತಿರುವ ಸಾರ್ವಜನಿಕ ಪ್ರತಿಭಟನೆಯನ್ನು ಬೆಂಬಲಿಸಿ, ಅಂತರರಾಷ್ಟ್ರೀಯ ಖ್ಯಾತಿಯ, ಮಣಿಪುರದ ಹೆಸರಾಂತ ಸಿನಿಮಾ ನಿರ್ದೇಶಕ ಹಾಗೂ ರಚನಕಾರ ಅರಿಬಮ್ ಶ್ಯಾಮ್ ಶರ್ಮಾ ಅವರು ಪದ್ಮಶ್ರೀ ಗೌರವವನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಭಾನುವಾರ ಅವರು ಘೋಷಣೆ ಮಾಡಿದ್ದಾರೆ.
ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿ ಇರುವ ತಮ್ಮ ಮನೆಯಲ್ಲಿ ಮಧ್ಯಾಹ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರದಲ್ಲಿ ಇರುವ ಜನರಿಗೆ ಭದ್ರತೆ ಬೇಕಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಂದು ಅಥವಾ ಎರಡು ಸಂಸತ್ ಸ್ಥಾನವಿದೆ. ಐನೂರಕ್ಕೂ ಹೆಚ್ಚು ಸದಸ್ಯ ಬಲದ ಸಂಸತ್ ನಲ್ಲಿ ಈಶಾನ್ಯ ಭಾಗದಿಂದ ಯಾವ ಧ್ವನಿ ಇರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಸಣ್ಣದೋ ಅಥವಾ ದೊಡ್ಡದೋ ರಾಜ್ಯವಾಗಿ ಅವರು ನಮ್ಮನ್ನು ಗೌರವಿಸಬೇಕು. ಜನಸಂಖ್ಯೆ ಆಧಾರದಲ್ಲಿ ಲೆಕ್ಕ ಹಾಕಬಾರದು. ನಾನೇಕೆ ಇದನ್ನು ಹೇಳುತ್ತಿದ್ದೇನೆ ಅಂದರೆ, ದೇಶ ಎಂದಾಗಿರುವುದೇ ರಾಜ್ಯಗಳೆಲ್ಲ ಸೇರಿ. ಯಾವಾಗಲಾದರೂ ಈಶಾನ್ಯ ಭಾಗದ ರಾಜ್ಯಗಳೆಲ್ಲ ಸೇರಿ ಸರಕಾರದಲ್ಲಿ ಮಂಡನೆ ಮಾಡುವಾಗ ಅವರು ಅದನ್ನು ಮಾನ್ಯ ಮಾಡಬೇಕು. ಒಂದು ವೇಳೆ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದರೆ ಸಹಜವಾಗಿಯೇ ನಾನು ವಿರೋಧಿಸಲೇಬೇಕು.

ನಮ್ಮ ಒಗ್ಗಟ್ಟನ್ನು ತೋರುವ ಉದ್ದೇಶದಿಂದಲೇ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿದ್ದೇನೆ ಎಂದು ಎಂಬತ್ಮೂರು ವರ್ಷದ ಅರಿಬಮ್ ಶ್ಯಾಮ್ ಶರ್ಮಾ ಹೇಳಿದ್ದಾರೆ. ಅವರು ನಟರಾಗಿ ಮೊದಲು ಕಾಣಿಸಿಕೊಂಡಿದ್ದು ಮಣಿಪುರಿಯ ಮೊದಲ ಸಿನಿಮಾ ಮತಾಮ್ಗಿ ಮಣಿಪುರ್, 1972ರಲ್ಲಿ. ಮಣಿಪುರಿ ಸಿನಿಮಾ ಹಾಗೂ ಸಿನಿಮಾ ಜಗತ್ತಿಗೆ ಶರ್ಮಾ ಅವರು ನೀಡಿದ ಕೊಡುಗೆ ಪರಿಗಣಿಸಿ 2006ರಲ್ಲಿ ಆಗಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಪದ್ಮಶ್ರೀ ಗೌರವ ನೀಡಿದ್ದರು.
ನಾಗರಿಕ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಜನವರಿ ಎಂಟರಂದು ಒಪ್ಪಿಗೆ ಸೂಚಿಸಿದ ನಂತರ ಸಾರ್ವಜನಿಕರ ಹೋರಾಟ ನಿರಂತರವಾಗಿ ನಡೆಯುತ್ತಿದೆ.












Click it and Unblock the Notifications