ಮಣಿಪುರ ಚುನಾವಣೆ; ಬಿಜೆಪಿ ಮುಂದೆ ಹಲವಾರು ಸವಾಲು!

ಇಂಫಾಲ, ನವೆಂಬರ್ 30; 2022ರ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮಣಿಪುರ ಸಹ ಒಂದು. ರಾಜ್ಯದ 60 ಸೀಟುಗಳ ಪೈಕಿ 40ರಲ್ಲಿ ಗೆಲ್ಲಲು ಬಿಜೆಪಿ ತಯಾರಿ ನಡೆಸುತ್ತಿದೆ. ಆದರೆ ಪಕ್ಷದ ಮುಂದೆ ಸವಾಲುಗಳು ಸಹ ಹಲವಾರು ಇವೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯಲಿಲ್ಲ. ಆದ್ದರಿಂದ ಎನ್‌ಪಿಪಿ, ಎನ್‌ಪಿಎಫ್ ಮತ್ತು ಲೋಕಜನಶಕ್ತಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತು.

ಮೈತ್ರಿ ಸರ್ಕಾರ ರಚನೆಯಾದ ಕಾರಣ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿತು. 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎನ್. ಬಿರೇನ್ ಸಿಂಗ್ ಮಣಿಪುರದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾದರು.

ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ 21, ಎನ್‌ಪಿಪಿಯ 4, ಎನ್‌ಪಿಎಫ್‌ನ 4, ಎಲ್‌ಜೆಪಿಯ ಒಬ್ಬರು, ಒಬ್ಬರು ಪಕ್ಷೇತರ ಶಾಸಕರಿದ್ದರು. ಎನ್‌ಪಿಪಿಯ ಎಲ್ಲಾ ಶಾಸಕರು ಸಂಪುಟಕ್ಕೆ ಸೇರ್ಪಡೆಗೊಂಡರು. ಎನ್‌ಪಿಎಫ್‌ನ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದರೆ ಎಲ್‌ಜೆಪಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಸಿಗಲಿಲ್ಲ.

jp nadda

ಹೊಸ ಸರ್ಕಾರ ರಚನೆಯಾದ ಒಂದೇ ವರ್ಷದಲ್ಲಿ ಬಿಜೆಪಿ ಸೇರಲು ಶಾಸಕರು ಸರದಿ ಸಾಲಿನಲ್ಲಿ ನಿಂತರು. ಇವರಲ್ಲಿ ಕಾಂಗ್ರೆಸ್‌ನವರೇ ಅಧಿಕವಾಗಿದ್ದರು. ಪ್ರಸ್ತುತ ರಾಜ್ಯದಲ್ಲಿ ಯಾವ ಪಕ್ಷದ ಎಷ್ಟು ಶಾಸಕರು ಇದ್ದಾರೆ? ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರಕ್ಕೂ ಸಿಗದಷ್ಟು ಗೊಂದಲವಾಗಿದೆ.

2020ರಲ್ಲಿ ಉಪ ಚುನಾವಣೆ ನಡೆಯಿತು. 4 ಸೀಟು ಬಿಜೆಪಿ ಪಾಲಾದರೆ, 1ರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದರು. ರಾಜ್ಯದಲ್ಲಿ 7 ಕ್ಷೇತ್ರಗಳಿಗೆ ಈಗ ಶಾಸಕರಿಲ್ಲ, ಈ ಕ್ಷೇತ್ರಗಳಿಗೆ ಉಪ ಚುನಾವಣೆಯನ್ನು ನಡೆಸಲಾಗಿಲ್ಲ. ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದ 12 ಶಾಸಕರು ಅನರ್ಹಗೊಂಡಿದ್ದಾರೆ. ಅರ್ನಹತೆಯ ಪ್ರಕರಣವನ್ನು ಬೇಗ ಇತ್ಯರ್ಥಗೊಳಿಸಿ ಎಂದು ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದೆ ಆದೇಶ ನೀಡಿದೆ.

ಬಿಜೆಪಿಯಲ್ಲೇ ಬಂಡಾಯ; 2019ರಲ್ಲಿ ಬಿಜೆಪಿಯಲ್ಲೇ ಬಂಡಾಯದ ಬಾವುಟ ಹಾರಿತು. ಕೆಲವು ಸಚಿವರು ಸೇರಿದಂತೆ ಶಾಸಕರು ಮುಖ್ಯಮಂತ್ರಿ ಬದಲಾವಣೆಗೆ ಪಟ್ಟು ಹಿಡಿದರು. ಹೈಕಮಾಂಡ್ ಮಧ್ಯ ಪ್ರವೇಶದಿಂದ ಸಿಎಂ ಬದಲಾಗಲಿಲ್ಲ. ಆದರೆ ಸಂಪುಟ ಪುನಾರಚನೆಗೊಂಡಿತು. 5 ಬಿಜೆಪಿ, 1 ಎಲ್‌ಜೆಪಿ, 2 ಎನ್‌ಪಿಪಿ ಸಚಿವರನ್ನು ಕೈಬಿಡಲಾಯಿತು.

2021ರ ನವೆಂಬರ್‌ನಲ್ಲಿ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ 6, ಎನ್‌ಪಿಪಿ ಮತ್ತು ಎನ್‌ಪಿಎಫ್‌ನ ತಲಾ 2 ಸಂಪುಟ ದರ್ಜೆ ಸಚಿವರಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬಹುಮತವಿದೆ ನಾವು 30 ಶಾಸಕರಿಗಿಂತ ಅಧಿಕವಿದ್ದೇವೆ ಎಂದು ಹೇಳುತ್ತಿದೆ. ಕಾಂಗ್ರೆಸ್ ಬಲ 28ರಿಂದ 20ಕ್ಕೆ ಕುಸಿದಿದೆ.

2022ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ ಪ್ರಚಾರ ಬಿರುಸು ಪಡೆದಿದೆ. ಬಿಜೆಪಿ ಭೂಪೇಂದ್ರ ಯಾದವ್‌ರನ್ನು ಚುನಾವಣಾ ಉಸ್ತುವಾರಿಯಾಗಿ ಘೋಷಣೆ ಮಾಡಿದೆ. 40 ಸ್ಥಾನಗಳಲ್ಲಿ ಜಯಗಳಿಸುವ ಗುರಿಯೊಂದಿಗೆ ಪಕ್ಷ ಚುನಾವಣಾ ತಯಾರಿ ನಡೆಸುತ್ತಿದೆ.

ಮುಖ್ಯಸ್ಥ ಕಾನ್ರಾಡ್‌ ಸಂಗ್ಮಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. 2017ರಲ್ಲಿ ಪಕ್ಷ 20 ಸ್ಥಾನದಲ್ಲಿ ಮಾತ್ರ ಕಣಕ್ಕಿಳಿದಿತ್ತು. ಮುಂದಿನ ಚುನಾವಣೆಯಲ್ಲಿ 30 ಸ್ಥಾನದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಲಾಗಿದೆ.

ಕಳೆದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಎನ್‌ಪಿಎಫ್‌ ಕಣಕ್ಕಿಳಿದಿತ್ತು. ಪಕ್ಷದ ನಾಲ್ಕು ಶಾಸಕರು ರಾಜ್ಯದಲ್ಲಿ ಈಗ ಇದ್ದಾರೆ. ಮುಂದಿನ ಚುನಾವಣೆಯಲ್ಲಿ 10 ಸ್ಥಾನದಲ್ಲಿ ಜಯಗಳಿಸಬೇಕು ಎಂಬುದು ಪಕ್ಷದ ಗುರಿಯಾಗಿದೆ. ಚುನಾವಣಾ ಪೂರ್ವ ಮೈತ್ರಿ ಮಾತುಕತೆಗೆ ಪಕ್ಷ ಪೂರ್ಣವಿರಾಮ ಹಾಕಿದೆ.

ಬಿಜೆಪಿ ಟಿಕೆಟ್‌ಗಾಗಿ ಬೇಡಿಕೆ ಇಡುತ್ತಿರುವ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಈ ವಲಸೆಯನ್ನು ನಿರ್ವಹಣೆ ಮಾಡುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಬಿಜೆಪಿಯಲ್ಲಿನ ಬೆಳವಣಿಗೆಗಳ ಲಾಭವನ್ನು ಪಡೆದು ಹೆಚ್ಚಿನ ಸ್ಥಾನದಲ್ಲಿ ಜಯಗಳಿಸುವ ತಂತ್ರ ಕಾಂಗ್ರೆಸ್ ಪಕ್ಷದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+