ನರಭಕ್ಷಕ ಅವನಿಯನ್ನು ಜೀವಂತ ಹಿಡಿಯೋದು ನಮ್ಮ ಯೋಜನೆಯಾಗಿತ್ತು, ಆದರೆ...
ಯಾವತ್ಮಾಳ್, ನವೆಂಬರ್ 06: 'ನರಭಕ್ಷಕ ಹುಲಿಯನ್ನು ಜೀವಂತವಾಗಿ ಹಿಡಿಯೋದು ನಮ್ಮ ಯೋಜನೆಯಾಗಿತ್ತು. ಆದರೆ ಎರಡು ವರ್ಷಗಳ ಈ ಪ್ರಯತ್ನವೂ ಫಲನೀಡಲಿಲ್ಲ. ಅದನ್ನು ಕೊಲ್ಲುವ ಉದ್ದೇಶ ನಮಗೂ ಇರಲಿಲ್ಲ' ಎಂದು ನರಭಕ್ಷಕ ಹೆಣ್ಣು ಹುಲಿ ಅವನಿಯನ್ನು ಗುಂಡಿಕ್ಕಿ ಕೊಂದ ಅಸ್ಗರ್ ಅಲಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನರಭಕ್ಷಕವಾಗಿ ಬದಲಾಗಿದ್ದ ಅವನಿಯನ್ನು ಜೀವಂತ ಹಿಡಿಯುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದೆವು. ಆದರೆ ಅದು ಫಲಕಾರಿಯಾಗಲಿಲ್ಲ. ಕೊನೆಗೆ ಸ್ವರಕ್ಷಣೆಗಾಗಿ ಅವನಿಯನ್ನು ಕೊಲ್ಲುವುದು ಅನಿವಾರ್ಯವಾಯಿತು ಎಂದು ಅಲಿ ಹೇಳಿದ್ದಾರೆ.
ನ.2 ರ ರಾತ್ರಿ ಮಹಾರಾಷ್ಟ್ರದ ಯಾವತ್ಮಾಳ್ ಅರಣ್ಯದಲ್ಲಿ ಅವನಿ ಎಂಬ ಹೆಣ್ಣು ಹುಲಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅದು ಕಳೆದ ಎರಡು ವರ್ಷಗಳಿಂದ 13 ಕ್ಕೂ ಹೆಚ್ಚು ಮನುಷ್ಯರನ್ನು ಕೊಂದು ತಿಂದಿದ್ದ ಕಾರಣಕ್ಕೆ ಅದನ್ನು ನರಭಕ್ಷಕ ಎಂದು ನಿರ್ಧರಿಸಿ, ಜನರ ಹಿತದ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರವೇ ಅವನಿಯನ್ನು ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿತ್ತು. ಈ ಕೃತ್ಯಕ್ಕಾಗಿ ಸರ್ಕಾರವೇ ಶಾರ್ಪ್ ಶೂಟರ್ ವೊಬ್ಬನನ್ನು ನೇಮಿಸಿ ಅವನಿಯನ್ನು ಕೊಲ್ಲಿಸಿತ್ತು. ಇದು ದೇಶದಾದ್ಯಂತ ವಿವಾದ ಸೃಷ್ಟಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಸ್ಗರ್ ಅಲಿಯ ತಂದೆ ಶಾರ್ಪ್ ಶೂಟರ್ ನವಾಬ್ ಶಾಫತ್ ಅಲಿ ಖಾನ್, 'ಮಹಾರಾಷ್ಟ್ರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಅವಿಗಳಿಗೆ ಆಹಾರವಿಲ್ಲದೆ ಅವು ಮನುಷ್ಯರನ್ನು ಕೊಂದು ತಿನ್ನುತ್ತಿವೆ' ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವನಿ ಹತ್ಯೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications