ಜಿಎಸ್ ಟಿ ಎಂಬುದು ಕೇಂದ್ರ ಸರ್ಕಾರದ ಎರಡನೇ ಮಹಾಪ್ರಮಾದ!
ಕೋಲ್ಕತ್ತಾ, ಜೂನ್ 28: ಜಿಎಸ್ ಟಿ (goods and service tax) ಎಂಬುದು ನೋಟು ನಿರ್ಬಂಧದ ನಂತರ ಕೇಂದ್ರ ಸರ್ಕಾರ ಮಾಡಿದ ಮತ್ತೊಂದು ಮಹಾನ್ ಪ್ರಮಾದ. ಇಂಥ ಪ್ರಮಾದಕ್ಕೆ ನಮ್ಮ ಬೆಂಬಲ ಖಂಡಿತ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಜಿಎಸ್ ಟಿಯ ವ್ಯತಿರಿಕ್ತ ಪರಿಣಾಮದ ಕುರಿತ ಬರೆದುಕೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ, ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಗೆ ತರುವಲ್ಲಿ ಅವಸರ ತೋರುತ್ತಿದೆ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಎಸ್ ಟಿಯನ್ನು ಜಾರಿಗೆ ತರಲು ಚಿಂತಿಸುತ್ತಿದ್ದಾಗ ನಾನೂ ಬೆಂಬಲಿಸಿದ್ದೆ.
ಜಿಎಸ್ ಟಿ ಕಾರ್ಯಕ್ರಮದಲ್ಲಿ ವಿಪಕ್ಷಗಳು ಭಾಗವಹಿಸಲ್ಲ, ಇಲ್ಲಿದೆ ಕಾರಣ
ಜಿಎಸ್ ಟಿಯ ಸರಿಯಾದ ಜಾರಿಗೆ ನನ್ನ ಬೆಂಬಲವೂ ಇದೆ. ಆದರೆ ಇದೀಗ ಕೇಂದ್ರ ಸರ್ಕಾರ ಜಿಎಸ್ ಟಿಯನ್ನು ಜಾರಿಗೆ ತರುತ್ತಿರುವ ಕ್ರಮದಲ್ಲಿ ಹಲವು ಪ್ರಮಾದಗಳಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಜಿಎಸ್ ಟಿ ಯನ್ನು ಅಧಿಕೃತವಾಗಿ ಜಾರಿಗೆ ತರುವ ಸಲುವಾಗಿ ಜೂನ್ 30 ರ ಮಧ್ಯ ರಾತ್ರಿ ಕೇಂದ್ರ ಸರ್ಕಾರ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ತಾವು ಸುತಾರಾಂ ಹಾಜರಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ವ್ಯತಿರಿಕ್ತ ಪರಿಣಾಮ
ಜಿಎಸ್ ಟಿ ಜಾರಿಯಾಗುವುದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಮೇಲೆ ಎಂಥ ವ್ಯತಿರಿಕ್ತ ಪರಿಣಾಮವಾಗಲಿದೆ ಎಂಬ ಅರಿವು ಕೇಂದ್ರ ಸರ್ಕಾರಕ್ಕಿಲ್ಲ. ಇಂಥ ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಸಮಯಾವಕಾಶ ನೀಡಬೇಕಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಫೇಸ್ ಬುಕ್ಕಿನಲ್ಲಿ ಹಾಕಿರುವ ಈ ಸ್ಟೇಟಸ್ ಅನ್ನು 370 ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದು, 2.3 ಸಾವಿರ ಜನ ಲೈಕ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿಗೆ ಬೆಂಬಲ
ಮಮತಾ ಬ್ಯಾನರ್ಜಿಯರ ಈ ಪೋಸ್ಟ್ ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಪರ - ವಿರೋಧ ಚರ್ಚೆ ಆರಂಭವಾಗಿದೆ. ಇಂಥ ಮಹತ್ವದ ಆರ್ಥಿಕ ಸಂಗತಿಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಕೇಂದ್ರ ಸರ್ಕಾರ ಪ್ರಬುದ್ಧವಾಗಿ ಯೋಚಿಸಬೇಕಿತ್ತು. ಆದರೆ ಹಾಗೆ ಮಾಡದೆ ಅವಸರದಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಶಮಿರ್ ಜಾಫರ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಜೂನ್ 30ರ ರಾತ್ರಿ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಜಿಎಸ್ ಟಿಗೆ ಚಾಲನೆ
ಜಿಎಸ್ ಟಿ ಗೆ ಬೆಂಬಲ
'ಮೇಡಂ, ನೀವು ಹೇಳುತ್ತಿರುವುದು ಖಂಡಿತ ಸತ್ಯ. ಆದರೆ ಜಿಎಸ್ ಟಿ ಒಂದಲ್ಲ ಒಂದು ದಿನ ಜಾರಿಯಾಗಲೇ ಬೇಕಿತ್ತು. ಈಗ ಜಾರಿಯಾಗದಿದ್ದರೆ ಅದು ಮತ್ತಷ್ಟು ವಿಳಂಬವಾಗುತ್ತಿತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಸಂಕಟವಾಗುವುದು ನಿಜವಾದರೂ, ಅವುಗಳ ನಿವಾರಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬ ವಿಶ್ವಾಸವಿದೆ. ಏಕೆಂದರೆ ಈಗಾಗಲೇ ಕೇಂದ್ರ ಸರ್ಕಾರ ವ್ಯಾಪಾರಿಗಳಿಗೆ ಮೇಲಿಂದ ಮೇಲೆ ಬೆಂಬಲ ನೀಡುತ್ತಲೇ ಬಂದಿದೆ' ಎಂದು ಜಿಎಸ್ ಟಿಯನ್ನು ಬೆಂಬಲಿಸಿ ಸಾಯಿ ಚರಣ ರೆಡ್ಡಿ ಕುರ್ರಾ ಎನ್ನುವವರು ಕಮೆಂಟ್ ಮಾಡಿದ್ದಾರೆ. ಆದರೆ ಅವರ ಕಮೆಂಟ್ ಇದೀಗ ನಾಪತ್ತೆಯಾಗಿರುವುವದು ಮತ್ತಷ್ಟು ಅಚ್ಚರಿಯ ಸಂಗತಿ!
ಅರ್ಥ ವ್ಯವಸ್ಥೆ ನಾಶವಾಗುತ್ತಿದೆ
ನೋಟು ನಿರ್ಬಂಧದ ಆಘಾತದಿಂದಲೇ ಬಹುಪಾಲು ಜನರು ಇನ್ನೂ ಹೊರಬರದಿರುವಾಗ, ಜಿಎಸ್ ಟಿಯನ್ನು ಪರಿಚಯಿಸುತ್ತಿರುವುದು ಎಂಥ ಹುಚ್ಚು? ಆರ್ ಬಿಐ ಮತ್ತು ಸರ್ಕಾರ ಸೇರಿ ನಮ್ಮ ಅರ್ಥ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ ಎಂದು ತನಿಶ್ ದೇವ್ ಎನ್ನುವವರು ಕಮೆಂಟ್ ಮಾಡಿದ್ದಾರೆ.