ಮಾಲೆಗಾಂವ್ ಸ್ಫೋಟ: ಅನಾರೋಗ್ಯ ನೆಪವೊಡ್ಡಿ ಪ್ರಗ್ಯಾ ಠಾಕೂರ್ ವಿಚಾರಣೆಗೆ ಗೈರು
ನವದೆಹಲಿ, ಡಿಸೆಂಬರ್ 19: ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅನಾರೋಗ್ಯದ ಕಾರಣಗಳಿಂದ ಈ ವಾರಾಂತ್ಯದ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿಲ್ಲ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಪ್ರಗ್ಯಾ ಮತ್ತು ಇತರೆ ಆರೋಪಿಗಳು ವಿಚಾರಣಾ ನ್ಯಾಯಾಲಯದ ವಿಚಾರಣೆಯ ವೇಳೆ ಖುದ್ದು ಹಾಜರಿರುವಂತೆ ಸೂಚಿಸಲಾಗಿತ್ತು.
ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಹೊಸದಾಗಿ ನೇಮಕಗೊಂಡಿರುವ ನ್ಯಾಯಾಧೀಶ ಪಿಆರ್ ಸಿಂಟ್ರೆ ವಿಚಾರಣೆ ನಡೆಸಲಿದ್ದಾರೆ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯು ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಸುದೀರ್ಘ ವಿಳಂಬದ ಬಳಿಕ ಈ ತಿಂಗಳು ಆರಂಭವಾಗಿದೆ. ಡಿಸೆಂಬರ್ ಆರಂಭದಲ್ಲಿ ವಿಚಾರಣೆ ಶುರುವಾದಾಗ ಎಲ್ಲ ಏಳು ಆರೋಪಿಗಳು ಪ್ರತಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಕೋರ್ಟ್ ಆದೇಶಿಸಿತ್ತು.
ಆದರೆ ಮೂವರು ಆರೋಪಿಗಳು ಮಾತ್ರವೇ ವಿಚಾರಣೆಗೆ ಹಾಜರಾಗಿದ್ದು, ಪ್ರಗ್ಯಾ ಠಾಕೂರ್, ರಮೇಶ್ ಉಪಾಧ್ಯಾಯ, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚಥುರ್ವೇದಿ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ನಾಲ್ವರು ಆರೋಪಿಗಳ ಗೈರುಹಾಜರಿಗೆ ಅಂತರ್ ರಾಜ್ಯ ಪ್ರಯಾಣದ ಮೇಲೆ ಕೋವಿಡ್ 19ರ ನಿರ್ಬಂಧಗಳನ್ನು ಕಾರಣವಾಗಿ ವಕೀಲರು ನೀಡಿದ್ದರು. ಹೀಗಾಗಿ ಡಿ. 19ರಂದು ಎಲ್ಲ ಆರೋಪಿಗಳಿಗೂ ಸಮನ್ ನೀಡಲು ವಿಶೇಷ ಎನ್ಐಎ ಕೋರ್ಟ್ ನಿರ್ಧರಿಸಿತ್ತು.

ಆದರೆ ಮುಂಬೈನ ನ್ಯಾಯಾಲಯಕ್ಕೆ ತೆರಳುವ ಮುನ್ನವಷ್ಟೇ ದೆಹಲಿಯ ಏಮ್ಸ್ನಲ್ಲಿ ತಪಾಸಣೆಗೆ ತೆರಳಿದ್ದ ಪ್ರಗ್ಯಾ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸಾಧ್ವಿ ಅವರು ಮುಂಬೈಗೆ ಎರಡು ದಿನಗಳ ಮಟ್ಟಿಗೆ ಬರಲು ನಿರ್ಧರಿಸಿದ್ದರು. ಆದರೆ ಏಮ್ಸ್ನಲ್ಲಿ ಮಾಮೂಲಿ ತಪಾಸಣೆಗೆ ತೆರಳಿದ್ದಾಗ ಅವರು ಅಲ್ಲಿ ದಾಖಲಾಗುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ.












Click it and Unblock the Notifications