ಮಹಾರಾಷ್ಟ್ರ: ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಕಾಂಗ್ರೆಸಿಗೆ ಗುಡ್ ಬೈ
ಮುಂಬೈ, ಸೆಪ್ಟೆಂಬರ್ 21: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿರುವ ನಾರಾಯಣ ರಾಣೆ ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಿಗೆ ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಮುಗಿಸುವುದಾಗಿ ನಾರಾಯಣ ರಾಣೆ ಅಬ್ಬರಿಸಿದ್ದಾರೆ.

ಅವರು ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುದ್ದಿಗಳು ಓಡಾಡುತ್ತಿದ್ದು, ತಮ್ಮ ಭವಿಷ್ಯದ ಬಗ್ಗೆ ಮುಂದಿನ ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸಿಂಧುದುರ್ಗ ಜಿಲ್ಲೆಯ ಕುಡಲ್ ನಲ್ಲಿ ಅಭಿಮಾನಿಗಳ ಸಭೆ ಉದ್ದೇಶಿಸಿ ಮಾತನಾಡಿದ ರಾಣೆ, "12 ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಳಿಸುವಾಗ ತಮ್ಮನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ತಮಗೆ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿಲ್ಲ. ಜತೆಗೆ ತಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ," ಎಂದು ದೂರಿದ್ದಾರೆ.
"ಒಂದು ಪಕ್ಷವಾಗಿ ಬೆಳೆಯಲು ಕಾಂಗ್ರೆಸ್ ಗೆ ಗೊತ್ತಿಲ್ಲ. ನನ್ನನ್ನು ಪಕ್ಷದಿಂದ ಒದ್ದೋಡಿಸಿ ಏನು ಸಾಧಿಸುತ್ತಾರೆ? ನಾನೇ ಪಕ್ಷ ಬಿಡುತ್ತೇನೆ. ನನ್ನ ಜತೆ ಹಲವಾರು ಜನರಿದ್ದಾರೆ. ನಾನು ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳನ್ನು ಮಗಿಸುತ್ತೇನೆ," ಎಂದು ಮಾಜಿ ಶಿವಸೇನೆ ನಾಯಕ ರಾಣೆ ಪ್ರತಾಪ ತೋರಿದ್ದಾರೆ.
1999ರಲ್ಲಿ 7 ತಿಂಗಳ ಕಾಲ ಶಿವಸೇನೆಯಿಂದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ 2005ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯವರನ್ನು ಬಹಿರಂಗವಾಗಿ ಟೀಕಿಸಿದ್ದರು. ಮರು ದಿನ ಅವರನ್ನು ಪಕ್ಷದಿಂದ ಕೈಬಿಡಲಾಗಿತ್ತು. ನಂತರ ರಾಣೆ ಕಾಂಗ್ರೆಸ್ ಸೇರಿದ್ದರು.
2008ರಲ್ಲಿ ಮುಂಬೈ ಸ್ಪೋಟದ ನಂತರ ವಿಲಾಸ್ ರಾವ್ ದೇಶ್ ಮುಖ್ ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಈ ವೇಳೆ ನೂತನ ಮುಖ್ಯಮಂತ್ರಿಯಾಗಿ ಅಶೋಕ್ ಚವಾಣ್ ರನ್ನು ನೇಮಿಸಲಾಗಿತ್ತು. ಈ ಸಂದರ್ಭದಲ್ಲೇ ನಾರಾಯಣ ರಾಣೆ ಕಾಂಗ್ರೆಸ್ ನಾಯತ್ವದ ವಿರುದ್ಧ ಅಸಮಧಾನಗೊಂಡಿದ್ದರು.












Click it and Unblock the Notifications