ವೈದ್ಯಕೀಯ ವಿದ್ಯಾರ್ಥಿಯ ಕತ್ತು ಹಿಸುಕಿ, ಬೆಂಕಿ ಹಚ್ಚಿ ಮರ್ಯಾದೆಗೇಡು ಹತ್ಯೆ; ತಂದೆ ಸೇರಿ ಐವರ ಬಂಧನ
ಪ್ರೀತಿ ಮಾಡುತ್ತಿದ್ದೇನೆ ಎಂದ ಮಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಕುಟುಂಬದವರೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದಿದೆ.
ಮುಂಬೈ, ಜನವರಿ. 27: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸಂಬಂಧಿಕರು ಸೇರಿ ಕೊಲೆ ಮಾಡಿದ್ದಾರೆ.
ಮೃತರನ್ನು 22 ವರ್ಷದ ಶುಭಾಂಗಿ ಜೋಗದಂದ್ ಎಂದು ಗುರುತಿಸಲಾಗಿದೆ. ಆಕೆಯ ಪ್ರೇಮ ಪ್ರಕರಣ ಬೆಳಕಿಗೆ ಬಂದ ಕಾರಣ ಕುಟುಂಬದವರೇ ಸೇರಿ ಕತ್ತು ಹಿಸುಕಿ ಕೊಂದು, ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಶುಭಾಂಗಿ ಜೋಗದಂದ್ ಅವರ ಕತ್ತಿಗೆ ಹಗ್ಗ ಬಿಗಿದು ಆಕೆಯ ಕುಟುಂಬ ಸದಸ್ಯರು ಕೊಂದಿದ್ದಾರೆ. ನಂತರ ಆಕೆಗೆ ಬೆಂಕಿ ಹಚ್ಚಿ, ಸಾಕ್ಷ್ಯ ನಾಶಪಡಿಸಲು ಆಕೆಯ ಮೃತದೇಹದ ಅವಶೇಷಗಳನ್ನು ಹೊಳೆಯಲ್ಲಿ ಎಸೆದಿದ್ದಾರೆ.
ನಾಂದೇಡ್ ಜಿಲ್ಲೆಯ ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಜನವರಿ 22 ರಂದು ಈ ಬರ್ಬರ ಹತ್ಯೆ ನಡೆದಿದೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಚ್ಎಂಎಸ್) ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಆಕೆ ತನ್ನದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ತನ್ನ ಕುಟುಂಬದವರು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಾಳೆ. ಹೀಗಾಗಿ ಮದುವೆ ಸ್ಥಗಿತಗೊಂಡಿತ್ತು. ಇದರಿಂದ ಸಂತ್ರಸ್ತೆಯ ಕುಟುಂಬ ಆಕೆಯ ಮೇಲೆ ಅಸಮಾಧಾನಗೊಂಡಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಜನವರಿ 22 ರ ರಾತ್ರಿ ಮಹಿಳೆಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳು ಆಕೆಯನ್ನು ಜಮೀನಿಗೆ ಕರೆದೊಯ್ದ, ಹತ್ಯೆ ಮಾಡಿ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆಯ ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.