Maharashtra Assembly Elections 2024: ಏಕನಾಥ್ ಶಿಂಧೆ ಮಹತ್ವದ ಹೆಜ್ಜೆ!
ಮುಂಬೈ, ಸೆಪ್ಟೆಂಬರ್ 18: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ಎದುರಾಗಿರುವಾಗಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಮುಖ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ. ಪಕ್ಷದ ಪ್ರಮುಖ ನಾಯಕರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಚುನಾವಣೆಯನ್ನು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟದ ಮೂಲಕ ಎದುರಿಸಲಾಗುತ್ತದೆ.
ಮಹಾರಾಷ್ಟ್ರ ಸರ್ಕಾರ ಶಿವಸೇನೆ ನಾಯಕ ಹಾಗೂ ಮಾಜಿ ಸಂಸದ ಆನಂದರಾವ್ ಅಡಸೂಲ್, ಪಕ್ಷದ ಶಾಸಕ ಸಂಜಯ್ ಶಿರಸಾಟ್ ಅವರನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದೆ. ಈ ಕುರಿತ ಆದೇಶಕ್ಕೆ ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹಿ ಹಾಕಿದ್ದಾರೆ.

ಶಾಸಕ ಸಂಜಯ್ ಶಿರಸಾಟ್ರನ್ನು ನಗರ ಮತ್ತು ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಅತ್ಯಂತ ಲಾಭದಾಯಕ ನಿಗಮ ಇದಾಗಿದೆ. ಈ ಹಿಂದೆ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ರಚನೆಯಾದಾಗ ಸಚಿವ ಸ್ಥಾನ ಸಿಗಲಿಲ್ಲ ಎಂದು ಸಂಜಯ್ ಶಿರಸಾಟ್ ಅಸಮಾಧಾನಗೊಂಡಿದ್ದರು. ಈಗ ಸಂಪುಟದ ದರ್ಜೆಯ ಸ್ಥಾನಮಾನಕ್ಕೆ ಸಮಾನವಾಗಿರುವ ಅಧ್ಯಕ್ಷ ಹುದ್ದೆಗೆ ಅವರನ್ನು ನೇಮಕ ಮಾಡಲಾಗಿದೆ.
ಹಲವು ಪ್ರಮುಖ ಹುದ್ದೆಗಳಿಗೆ ನೇಮಕ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸಿದ್ದೇಶ್ ಕದಂ ನೇಮಕ ಮಾಡಿದ್ದಾರೆ. ಪಕ್ಷದ ನಾಯಕ ರಾಮದಾದ್ ಕದಂ ಪುತ್ರ ಸಿದ್ದೇಶ್ ಕದಂ ಉನ್ನತ ಹುದ್ದೆಗೆ ನೇಮಕಗೊಂಡಿದ್ದಾರೆ.
ಮಾಜಿ ಸಂಸದ ಆನಂದರಾವ್ ಅಡಸೂಲ್ರನ್ನು ಮಹಾರಾಷ್ಟ್ರ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಅಧ್ಯಕ್ಷ ಅವಧಿ ಮುಂದಿನ ಒಂದೂವರೆ ವರ್ಷದ ಅವಧಿ ಅಥವ ಸರ್ಕಾರದ ಆಡಳಿತ ಅವಧಿ ಕೊನೆಗೊಳ್ಳುವ ತನಕ ಇರಲಿದೆ.
ಕೆಲವು ದಿನಗಳ ಹಿಂದೆ ಆನಂದರಾವ್ ಅಡಸೂಲ್ ಶಿವಸೇನೆ ಪಕ್ಷ ತಮ್ಮನ್ನು ರಾಜ್ಯಪಾಲರನ್ನಾಗಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭರವಸೆಯನ್ನು ಈಡೇರಿಸಿಲ್ಲ ಎಂದು ದೂರಿದ್ದರು. ಅಲ್ಲದೇ ಮಹಾರಾಷ್ಟ್ರ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಉಪಾಧ್ಯಕ್ಷರಾಗಿ ಧರ್ಮಪಾಲ್ ಮೇಷರಾಂ ನೇಮಿಸಲಾಗಿದೆ. ಇವರು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರು ಮತ್ತು ಬಿಜೆಪಿ ವಕ್ತಾರರು.
ಅಲ್ಲದೇ ಹಿಂಗೋಲಿ ಜಿಲ್ಲೆಯ ವಸ್ಮತ್ ತಹಸಿಲ್ನಲ್ಲಿರುವ ಬಾಳಾಸಾಹೇಬ್ ಠಾಕ್ರೆ ಅರಿಶಿನ ಸಂಶೋಧನೆ ಮತ್ತು ತರಬೇತಿ ಕೇಂದ್ರದ (ಬಿಟಿಟಿಆರ್ಟಿಸಿ) ಅಧ್ಯಕ್ಷ ಹುದ್ದೆಯನ್ನು ಮೇಲ್ದರ್ಜೆಗೆ ಏರಿಕೆ ಮಾಡಲಾಗಿದೆ. ಮಾಜಿ ಸಂಸದ ಹೇಮಂತ್ ಪಾಟೀಲ್ ಇದರ ಅಧ್ಯಕ್ಷರು. 2022ರಲ್ಲಿ ಸ್ಥಾಪನೆಯಾದ ಕೇಂದ್ರದ ಅಧ್ಯಕ್ಷ ಹುದ್ದೆಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶಿಸಿದೆ.
ರಾಜಕೀಯ ಪಂಡಿತರ ಲೆಕ್ಕಾಚಾರದಂತೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಮುಖ ಮತ್ತು ಅಸಮಾಧಾನಗೊಂಡಿರುವ ನಾಯಕರನ್ನು ವಿವಿಧ ಉನ್ನತ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಚುನಾವಣೆಯಲ್ಲಿ ಹಿನ್ನಡೆ ಆಗದಂತೆ ಮಾಡಲು ಪ್ರಯತ್ನ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಸಿಡಿದೆದ್ದು ಏಕನಾಥ್ ಶಿಂಧೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸೇರಿದರು. ಇದರಿಂದಾಗಿ ರಾಜ್ಯದಲ್ಲಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್)ದ ರಾಜ್ಯ ಸರ್ಕಾರವೇ ಪತನಗೊಂಡಿತು.
ಬಳಿಕ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟದ ಮೂಲಕ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೊಂಡಿತು. ಬಿಜೆಪಿ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪದವಿಯನ್ನೇ ಬಿಟ್ಟುಕೊಟ್ಟಿತು.












Click it and Unblock the Notifications