Maharashtra Election 2024: ಎನ್ಸಿಪಿ V/S ಎನ್ಸಿಪಿ, 29 ಕ್ಷೇತ್ರದಲ್ಲಿ ಶರದ್ ಪವಾರ್ ಸೋಲಿಸಿದ ಅಜಿತ್!
ಮುಂಬೈ, ನವೆಂಬರ್ 24: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟ 230 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿ ಏಕಾಂಗಿಯಾಗಿ ರಾಜ್ಯದಲ್ಲಿ 132 ಸೀಟುಗಳಲ್ಲಿ ಗೆದ್ದಿದೆ. ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಗೆಲ್ಲುವ ಮೂಲಕ ಮಹಾಯತಿ ಬಲವನ್ನು ಹೆಚ್ಚಿಸಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145.
ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಮೂಡಿಸಿದ್ದು ಎನ್ಸಿಪಿ ಪಕ್ಷ. ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ನೇತೃತ್ವದ ಒಂದು ಬಣ, ಶರದ್ ಪವಾರ್ ನೇತೃತ್ವದ ಇನ್ನೊಂದು ಎನ್ಸಿಪಿ ಬಣಗಳು ಚುನಾವಣೆಯಲ್ಲಿ ಎದುರಾಳಿಯಾಗಿದ್ದವು. ಅಜಿತ್ ಪವಾರ್ ಬಣ 29 ಸೀಟುಗಳಲ್ಲಿ ಶರದ್ ಪವಾರ್ ಸೋಲಿಸಿದ್ದಾರೆ. ಈ ಮೂಲಕ ಎನ್ಸಿಪಿ ಮೂಲ ಮತದಾರರು ತನ್ನ ಜೊತೆ ಇದ್ದಾರೆ ಎಂದು ಸಾಬೀತು ಮಾಡಿದ್ದಾರೆ.

ಮಹಾಯತಿ ಮೈತ್ರಿಕೂಟದಲ್ಲಿರುವ ಎನ್ಸಿಪಿ (ಅಜಿತ್ ಪವಾರ್ ಬಣ) 59 ಸೀಟುಗಳಲ್ಲಿ ಕಣಕ್ಕಿಳಿದಿತ್ತು, 41 ಸೀಟುಗಳಲ್ಲಿ ಗೆಲುವು ಸಾಧಿಸಿದೆ. ಎಂವಿಎ ಮೈತ್ರಿಕೂಟದಲ್ಲಿರುವ ಎನ್ಸಿಪಿ (ಶರದ್ ಪವಾರ್) ಬಣ 86 ಸೀಟುಗಳಲ್ಲಿ ಕಣಕ್ಕಿಳಿದಿತ್ತು, 10 ಸೀಟುಗಳನ್ನು ಗೆದ್ದಿದೆ.
ರಾಜಕೀಯ ನಿವೃತ್ತಿ ಮಾತು: 2022ರಲ್ಲಿ ಎನ್ಸಿಪಿ ಅಜಿತ್ ಪವಾರ್, ಶರದ್ ಪವಾರ್ ಬಣವಾಗಿ ವಿಭಾಗವಾಯಿತು. ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಶರದ್ ಪವಾರ್ ಚುನಾವಣಾ ಪ್ರಚಾರದಲ್ಲಿ ರಾಜಕೀಯ ನಿವೃತ್ತಿಯ ಮಾತನಾಡಿದ್ದರು. ಈಗ ಅಜಿತ್ ಪವಾರ್ ಚುನಾವಣೆಯಲ್ಲಿ ಶರದ್ ಪವಾರ್ ಬಣವನ್ನು 29 ಸೀಟುಗಳಲ್ಲಿ ಸೋಲಿಸುವ ಮೂಲಕ ರಾಜಕೀಯ ನಿವೃತ್ತಿ ಪಡೆಯುವಂತೆಯೇ ಮಾಡಿದ್ದಾರೆ.
ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಅವಧಿಗೆ ಕೇಂದ್ರ ಸಚಿವರಾದ ಶರದ್ ಪವಾರ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಸುಮಾರು 57 ವರ್ಷದ ರಾಜಕೀಯ ಜೀವನದಲ್ಲಿ ಶರದ್ ಪವಾರ್ ಬಾರಾಮತಿಯಿಂದ ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಗೆಲುವು ದಾಖಲಿಸಿದ್ದರು.
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆಯ ರೂವಾರಿಯೇ ಶರದ್ ಪವಾರ್. ಆದರೆ ಈ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್ಸಿಪಿ (ಶರದ್ ಪವಾರ್) 10 ಸೀಟುಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೀನಾಯ ಸೋಲಾಗಿದೆ.
ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ 1,81,132 ಮತಗಳನ್ನು ಪಡೆದು 100899 ಮತಗಳ ಅಂತರದಿಂದ ಸಂಬಂಧಿಯಾದ ಶರದ್ ಪವಾರ್ ಬಣದ ಎನ್ಸಿಪಿ ಅಭ್ಯರ್ಥಿ ಯುಗೇಂದ್ರ ಪವಾರ್ ಸೋಲಿಸಿದ್ದಾರೆ. ಯುಗೇಂದ್ರ ಪರವಾಗಿ ಶರದ್ ಪವಾರ್ ಅಬ್ಬರದ ಪ್ರಚಾರವನ್ನು ನಡೆಸಿದ್ದರು.
ಎನ್ಸಿಪಿ ಪಕ್ಷಕ್ಕೆ ಅಜಿತ್ ಪವಾರ್ ಅವರೇ ಮುಂದಿನ ಉತ್ತರಾಧಿಕಾರಿ ಎಂದು ಮಹಾರಾಷ್ಟ್ರದ ಜನರು ತೀರ್ಪು ಕೊಟ್ಟಿದ್ದಾರೆ. ಚಿಕ್ಕಪ್ಪನ ನಂತರ ಪಕ್ಷವನ್ನು ಅಜಿತ್ ಪವಾರ್ ಮುನ್ನಡೆಸಬೇಕು ಎಂದು ಮತದಾನದ ಬಳಿಕ ವಿಶ್ಲೇಷಿಸಲಾಗುತ್ತಿದೆ.
ನವೆಂಬರ್ 23ರ ಶನಿವಾರ ಮಹಾರಾಷ್ಟ್ರದ ಜೊತೆ ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶವೂ ಪ್ರಕಟವಾಗಿದೆ. ಜಾರ್ಖಂಡ್ನಲ್ಲಿ ಜೆಎಂಎಂ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿದಿದ್ದು, ಎನ್ಡಿಎ ಲೆಕ್ಕಾಚಾರ ತಲೆಕೆಳಗಾಗಿದೆ.
ಜೆಎಂಎಂ 34, ಬಿಜೆಪಿ 21, ಕಾಂಗ್ರೆಸ್ 16, ಆರ್ಜೆಡಿ 4, ಸಿಪಿಐ (ಎಂಎಲ್) (ಎಲ್) 2, ಎಜೆಎಸ್ಯುಪಿ, ಎಲ್ಜೆಪಿಆರ್ವಿ, ಜೆಕೆಎಲ್ಎಂ, ಜೆಡಿ(ಯು) ತಲಾ 1 ಸೀಟುಗಳಲ್ಲಿ ಜಯಗಳಿಸಿವೆ.












Click it and Unblock the Notifications