Maharashtra Election Results ಮಹಾರಾಷ್ಟ್ರ: ಕಾಂಗ್ರೆಸ್ & ಮಹಾ ವಿಕಾಸ್ ಅಘಾಡಿಗೆ ಪ್ರಾರಂಭದಲ್ಲೇ ಶಾಕ್!
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಪ್ರಾರಂಭವಾಗಿದ್ದು, ಪ್ರಾರಂಭಿಕ ಹಂತದ ಮತ ಎಣಿಕೆಯಲ್ಲೇ ಕಾಂಗ್ರೆಸ್ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಗೆ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಮಹಾಯುತಿ ಹಾಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಮಹಾರಾಷ್ಟ್ರ ರಾಜಕೀಯ ಭಿನ್ನವಾಗಿದ್ದು, ಯಾವುದೇ ಕ್ಷಣದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಬೇಕಾದರೂ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಈ ಬಾರಿ ಈ ಹಿಂದೆ ಎಂದೂ ಕಾಣದಂತಹ ರಾಜಕೀಯ ಚಿತ್ರಣ ಇದೆ. ಹೀಗಾಗಿ, ಮಹಾರಾಷ್ಟ್ರ ಫಲಿತಾಂಶ ಜನರಲ್ಲಿ ರಾಜಕೀಯ ಕುತೂಹಲವನ್ನು ಕೆರಳಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಮ್ಯಾಜಿಕ್ ಸಂಖ್ಯೆ ಆಗಿದೆ. ಇನ್ನು ಹರಿಯಾಣದ ನಂತರ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ಗೆ ಭಾರೀ ಶಾಕ್ ಎದುರಾಗಿದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಇದೀಗ ಮಹಾರಾಷ್ಟ್ರದಲ್ಲೂ ಸೋಲುವ ಆತಂಕವನ್ನು ಎದುರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಾರಂಭದ ಹಂತದಲ್ಲೇ ಮಹಾ ವಿಕಾಸ್ ಅಘಾಡಿಗೆ ಪ್ರಾರಂಭಿಕ ಹಿನ್ನಡೆ ಎದುರಾಗಿದೆ.

ಕಾಂಗ್ರೆಸ್ನ ಮಹಾ ವಿಕಾಸ ಅಘಾಡಿ ಹಾಗೂ ಬಿಜೆಪಿಯ ಮಹಾಯುತಿಯ ನಡುವೆ ಭಾರೀ ಜಿದ್ದಾಜಿದ್ದಿನ ಪೈಪೋಟಿ ಇದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ಶ್ರಮಿಸಿತ್ತು. ಇಲ್ಲಿನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಹಾಗೂ ಶಿವಸೇನೆಯ (ಉದ್ಧವ್ ಠಾಕ್ರೆ) ಪಕ್ಷಗಳ ಬೆಂಬಲವು ಕಾಂಗ್ರೆಸ್ಗೆ ಇತ್ತು. ಈ ಪಕ್ಷಗಳು ಕಾಂಗ್ರೆಸ್ಗೆ ಆಗ್ಗಾಗ್ಗೆ ತಲೆನೋವು ಸೃಷ್ಟಿ ಮಾಡಿದ್ದರೂ, ಈ ಪಕ್ಷಗಳು ಒಗ್ಗಟ್ಟಾಗಿಯೇ ಚುನಾವಣೆಯನ್ನು ಎದುರಿಸಿದ್ದವು. ಆದರೆ, ಇದೀಗ ಚುನಾವಣೆ ಫಲಿತಾಂಶ ಕಾಂಗ್ರೆಸ್ನ ಲೆಕ್ಕಾಚಾರಗಳು ತಲೆಕೆಳಗಾಗಿಸಿವೆ. 8.30ರ ಸುಮಾರಿಗೆ ಈ ಫಲಿತಾಂಶ ಬಂದಿದೆ. ಇನ್ನೂ ಬದಲಾಗುವ ಸಾಧ್ಯತೆ ಇದೆ.
ಸತತ ಸೋಲು: ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಮುನ್ನಡೆ ಸಾಧಿಸಿಕೊಂಡ ಮೇಲೆ ಉತ್ತರ ಭಾರತದಲ್ಲೂ ಪುಟಿದೇಳುವ ಕನಸು ಕಂಡಿತ್ತು. ಆದರೆ, ಆ ಕನಸು ಸಾಕಾರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಚೆಗೆ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಮಾಧಾನಕರ ಪ್ರಗತಿಯನ್ನು ಸಾಧಿಸಿದೆ. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್ ಗೆದ್ದು ಇನ್ನೇನು ಅಧಿಕಾರಕ್ಕೆ ಬರಲಿದೆ ಎಂದೇ ಹೇಳಲಾಗಿತ್ತು. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹೈ ಅಲರ್ಟ್ ಆಗಿತ್ತು.

ಆಮ್ ಆದ್ಮಿ ಪಾರ್ಟಿಯಿಂದಲೂ ಬೆಂಬಲ: ಇನ್ನು ಆಮ್ ಆದ್ಮಿ ಪಾರ್ಟಿಯು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಗೆ ಬೆಂಬಲ ಸೂಚಿಸಿ ಚುನಾವಣಾ ಕಣದಿಂದ ಅಂತರ ಕಾಪಾಡಿಕೊಂಡಿತ್ತು. ಆದರೆ, ಮಹಾ ವಿಕಾಸ್ ಅಘಾಡಿಯ ಅಭ್ಯರ್ಥಿಗಳ ಪರವಾಗಿ ಪ್ರಚಾರಗಳಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಅಧ್ಯಕ್ಷ ಅರವಿಂದ ಕೆಜ್ರೀವಾಲ್ ಅವರು ಭಾರೀ ಪ್ರಚಾರ ಸಭೆಗಳನ್ನೇ ನಡೆಸಿದ್ದರು.
ಹರಿಯಾಣದಲ್ಲಿ ಎಎಪಿ ಸ್ಪರ್ಧೆ ಮಾಡಿರುವುದರಿಂದಲೇ ಕಾಂಗ್ರೆಸ್ಗೆ ಹಿನ್ನಡೆಯಾಗಿತ್ತು ಎಂದು ಹೇಳಲಾಗಿತ್ತು. ಅಲ್ಲದೇ ಇಂಡಿಯಾ ಒಕ್ಕೂಟದಲ್ಲಿ ಇನ್ನಷ್ಟು ಹೊಂದಾಣಿಕೆ ಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಎಪಿ ಸಹ ಇದಕ್ಕೆ ಪೂರಕವಾಗಿ ನಡೆದುಕೊಂಡಿತ್ತು. ಆದರೆ, ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಪ್ರಾರಂಭಿಕ ಹಿನ್ನಡೆ ಅನುಭವಿಸಿದೆ.
ಜಾರ್ಖಂಡ್ನಲ್ಲೂ ಇದೇ ಫಲಿತಾಂಶ: ಇನ್ನು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಪ್ರಕಟವಾಗುತ್ತಿದೆ. ಜಾರ್ಖಂಡ್ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿವೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಹಾಗೂ ಜಾರ್ಖಂಡ್ನಲ್ಲಿ ಎರಡು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು.












Click it and Unblock the Notifications