Maharashtra Election 2024 Result: ಎಲ್ಲಾ ತಂತ್ರ ವಿಫಲ, ಗೆದ್ದು ಬೀಗಿದ ಆದಿತ್ಯ ಠಾಕ್ರೆ
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗುತ್ತಿದೆ. ಮಹಾಯತಿ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಸದ್ಯದ ಮಾಹಿತಿಯಂತೆ ಮೈತ್ರಿಕೂಟ 231 ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145.
ಶನಿವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಮುಂಬೈನ ವರ್ಲಿ ಕ್ಷೇತ್ರದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಜಯಗಳಿಸಿದ್ದಾರೆ. ಅವರನ್ನು ಸೋಲಿಸಲು ಶಿವಸೇನೆ (ಏಕನಾಥ್ ಶಿಂಧೆ ಬಣ) ಮಾಡಿದ ಎಲ್ಲಾ ತಂತ್ರ ವಿಫಲವಾಗಿದೆ.

ಚುನಾವಣೆಯಲ್ಲಿ ಆದಿತ್ಯ ಠಾಕ್ರೆ 63,324 ಮತಗಳನ್ನು ಪಡೆದು 8,801 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಶಿವಸೇನೆ (ಏಕನಾಥ್ ಶಿಂಧೆ ಬಣ)ದ ಅಭ್ಯರ್ಥಿ ಮಿಲಿಂದ್ ದಿಯೋರಾ 54,523 ಮತಗಳನ್ನು ಪಡೆದು ಸೋತಿದ್ದಾರೆ.
ರಾಜ್ಯಸಭಾ ಸದಸ್ಯ: ಮಿಲಿಂದ್ ದಿಯೋರಾ ಹಾಲಿ ರಾಜ್ಯಸಭಾ ಸದಸ್ಯರು. ಕೇಂದ್ರದ ಮಾಜಿ ಸಚಿವರು. ಆದರೆ ಅವರನ್ನು ಶಿವಸೇನೆ (ಏಕನಾಥ್ ಶಿಂಧೆ ಬಣ) ಅಭ್ಯರ್ಥಿಯಾಗಿ ಈ ಬಾರಿಯ ವಿಧಾನಸಭೆ ಚುನಾವಣೆಗೆ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು.
ಕಾಂಗ್ರೆಸ್ ಪಕ್ಷದಲ್ಲಿದ್ದ ಮಿಲಿಂದ್ ದಿಯೋರಾ ರಾಹುಲ್ ಗಾಂಧಿ ಅವರ ಯುವ ಬ್ರಿಗೇಡ್ನಲ್ಲಿದ್ದರು. 2024ರ ಜನವರಿಯಲ್ಲಿ ಅವರು ಕಾಂಗ್ರೆಸ್ ತೊರೆದಿದ್ದರು. ಈ ಮೂಲಕ ಕಾಂಗ್ರೆಸ್ ಜೊತೆಗಿನ ಕುಟುಂಬದ 55 ವರ್ಷದ ಬಾಂಧವ್ಯವನ್ನು ಅಂತ್ಯಗೊಳಿಸಿದ್ದರು. ಬಳಿಕ ಅವರು ಶಿವಸೇನೆ (ಏಕನಾಥ್ ಶಿಂಧೆ) ಸೇರಿದ್ದರು.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ವಿರುದ್ಧ ಮಿಲಿಂದ್ ದಿಯೋರಾ ಅಸಮಾಧಾನಗೊಂಡಿದ್ದರು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಅಸಮಾಧಾನಗೊಂಡಿದ್ದ ಅವರು ಕಾಂಗ್ರೆಸ್ ತೊರೆದ ಬಳಿಕ ಶಿವಸೇನೆ ಸೇರಿದ್ದರು. ರಾಜ್ಯಸಭಾ ಸದಸ್ಯರಾಗಿದ್ದ ಅವರನ್ನು ಪಕ್ಷ ವಿಧಾನಸಭೆ ಚುನಾವಣಾ ಕಣಕ್ಕಿಳಿಸಿ ಆದಿತ್ಯ ಠಾಕ್ರೆ ಸೋಲಿಸಲು ತಂತ್ರ ರೂಪಿಸಿತ್ತು.
ಮಿಲಿಂದ್ ದಿಯೋರಾ ಮುಂಬೈ ದಕ್ಷಿಣ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ ಮಾಡಿದ ಮರುದಿನವೇ ಶಿವಸೇನೆ (ಏಕನಾಥ್ ಶಿಂಧೆ) ಬಣ ಮಿಲಿಂದ್ ದಿಯೋರಾ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದ್ದರಿಂದ ವರ್ಲಿ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು.
ರಾಜಸ್ಥಾನ ಮೂಲದ 47 ವರ್ಷದ ಮಿಲಿಂದ್ ದಿಯೋರಾ ಕಾಂಗ್ರೆಸ್ ನಾಯಕರಾಗಿದ್ದ ಮುರಳಿ ದಿಯೋರಾ ಪುತ್ರ. ಯುಪಿಎ-2 ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಮಾಹಿತಿ & ಸಂವಹನ ಖಾತೆ ರಾಜ್ಯ ಸಚಿವರಾಗಿದ್ದರು. 14 ಮತ್ತು 15ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
ವರ್ಲಿ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಆದಿತ್ಯ ಠಾಕ್ರೆ 70,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎನ್ಸಿಪಿಯ ಸುರೇಶ್ ಮಾನೆ ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಉದ್ಧವ್ ಠಾಕ್ರೆ ಕುಟುಂಬದ ಸದಸ್ಯರು ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದರು.
ಸಂಜೆ 5.40ರ ಮಾಹಿತಿಯಂತೆ ಬಿಜೆಪಿ 133, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೂರು ಪಕ್ಷಗಳು 'ಮಹಾಯುತಿ' ಮೈತ್ರಿಕೂಟದ ಭಾಗವಾಗಿವೆ. ಮೈತ್ರಿಕೂಟ 230 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 15, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್ಸಿಪಿ (ಶರದ್ ಪವಾರ್) 10, ಎಸ್ಪಿ 2, ಇತರರು/ ಪಕ್ಷೇತರರು 10 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಮತ ಎಣಿಕೆ ಇನ್ನೂ ನಡೆಯುತ್ತಿದೆ.
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ ಬಿಜೆಪಿ 58, ಶಿವಸೇನೆ (ಏಕನಾಥ್ ಶಿಂಧೆ ಬಣ) 28, ಎನ್ಸಿಪಿ (ಅಜಿತ್ ಪವಾರ್ ಬಣ) 26, ಶಿವಸೇನೆ (ಉದ್ಧವ್ ಠಾಕ್ರೆ ಬಣ) 12, ಕಾಂಗ್ರೆಸ್ 5, ಎನ್ಸಿಪಿ (ಶರದ್ ಪವಾರ್) 6, ಸಮಾಜವಾದಿ ಪಕ್ಷ 2 ಸೀಟುಗಳಲ್ಲಿ ಜಯಗಳಿಸಿವೆ.












Click it and Unblock the Notifications