ನಾಯಿಗಳಿಗಾಗಿ ನೆರೆಹೊರೆಯವರ ಕಾದಾಟ: ಗುಂಡು ಹಾರಿಸಿ ಮಾಲೀಕನನ್ನು ಕೊಂದ ಶ್ವಾನಪ್ರಿಯ!
ಇಂದೋರ್ ಆಗಸ್ಟ್ 18: ಸಾಕು ನಾಯಿಗಳ ಕಾದಾಟದಿಂದಾಗಿ ಉಂಟಾದ ನೆರೆಹೊರೆಯವರ ನಡುವಿನ ಜಗಳ 2 ಸಾವಿನಿಂದ ಅಂತ್ಯಗೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಸಾಕುನಾಯಿಗಳ ವಿಚಾರವಾಗಿ ನಡೆದ ಜಗಳದಿಂದಾಗಿ ವ್ಯಕ್ತಿಯೊಬ್ಬ ಜನರ ಗುಂಪಿನ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಖಜರಾಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ಬಾಗ್ ಕಾಲೋನಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಖಾಸಗಿ ಬ್ಯಾಂಕ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ರಾಜ್ಪಾಲ್ ರಾಜಾವತ್ ಮತ್ತು ಆತನ ನೆರೆಹೊರೆಯವರ ನಡುವೆ ಅವರ ನಾಯಿಗಳು ಪರಸ್ಪರ ಕಾದಾಡಿಕೊಂಡಾಗ ಜಗಳ ನಡೆದಿದೆ. ಕೋಪದ ಭರದಲ್ಲಿ ರಾಜಾವತ್ ತನ್ನ ಮನೆಯಿಂದ ಬಂದೂಕು ತಂದು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ವ್ಯಕ್ತಿಯೊಬ್ಬ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ತನ್ನ ನೆರೆಹೊರೆಯವರ ನಾಯಿಯೊಂದಿಗೆ ಜಗಳವಾಡಿತು. ಇದು ಮಾಲೀಕರ ನಡುವೆ ಗಲಾಟೆಗೆ ಕಾರಣವಾಯಿತು. ಜಗಳದಿಂದಾಗಿ ಕೆಲವರು ಅಲ್ಲಿ ಜಮಾಯಿಸಿದರು. ಆ ವ್ಯಕ್ತಿ ಇದ್ದಕ್ಕಿದ್ದಂತೆ ಅವನ ಮನೆಗೆ ಹೋಗಿ ಬಂದೂಕು ತಂದು ಗುಂಡು ಹಾರಿಸಿದನು. ಈವೇಳೆ 2 ಜನರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.
ಮೃತರನ್ನು ರಾಹುಲ್ (28) ಮತ್ತು ವಿಮಲ್ (35) ಎಂದು ಗುರುತಿಸಲಾಗಿದೆ. ಎಂಟು ಮಂದಿ ಗಾಯಗೊಂಡಿದ್ದು, ಆರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜ್ಪಾಲ್ ರಾಜಾವತ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೃಷ್ಣಬಾಗ್ ಕಾಲೋನಿ ಪ್ರದೇಶದಲ್ಲಿ ರಾಜಾವತ್ ತನ್ನ ಸಾಕು ನಾಯಿಯನ್ನು ವಾಕಿಂಗ್ಗೆ ಕರೆದೊಯ್ಯುತ್ತಿದ್ದಾಗ ವಾಗ್ವಾದ ಪ್ರಾರಂಭವಾಯಿತು. ರಾಜಾವತ್ನ ನಾಯಿ ನೆರೆಹೊರೆಯವರ ಮತ್ತೊಂದು ನಾಯಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದೆ. ಇದರಿಂದ ನಾಯಿಗಳ ಮಾಲೀಕರ ನಡುವೆ ಕಲಹಕ್ಕೆ ಕಾರಣವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು ರಾಜಾವತ್ ಮನೆಗೆ ಹೋಗಿ ಬಂದೂಕು ತೆಗೆದುಕೊಂಡು ಟೇರೆಸ್ ಮೇಲೆ ನಿಂತು ಜಗಳ ನೋಡಲು ನಿಂತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications