ಮಾಜಿ ಸಂಸದೆ ಸೀರೆಯಲ್ಲಿ ಕೈ ಒರೆಸಿಕೊಂಡ ಶಾಸಕ
ಇಂದೋರ್, ಸೆ.18: ಇಂಥ ಘಟನೆಯನ್ನು ಏನೆಂದು ಅರ್ಥೈಸುವುದೋ, ಸಾರ್ವಜನಿಕ ವೇದಿಕೆಯಲ್ಲಿ ಮಧ್ಯಪ್ರದೇಶದ ಪಕ್ಷೇತರ ಶಾಸಕರೊಬ್ಬರು ಮಾಜಿ ಸಂಸದೆಯೊಬ್ಬರ ಸೀರೆ ಸೆರಿಗಿನಿಂದ ಕೈ ಒರೆಸಿಕೊಂಡ ಘಟನೆ ಕೆಮರಾಗಳ ಕಣ್ಣಿಗೆ ಬಿದ್ದಿದೆ.
ಮಧ್ಯಪ್ರದೇಶದ ಸಿಯೋನಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದು ಶಾಸಕರಾಗಿರುವ ದಿನೇಶ್ ರೈ ಎಂಬ ರಾಜಕಾರಣಿ ಈಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚೆಗೆ ಒಂದು ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಸಂಸದೆ ನೀತಾ ಪಟೆರಿಯಾ ಅವರು ಭಾಗವಹಿಸಿದ್ದರು. ಬುಧವಾರ ನಡೆದ ಸಮಾರಂಭದಲ್ಲಿ ಹಾಜರಿದ್ದ ಶಾಸಕ ದಿನೇಶ್ ರೈ ಅವರು ನೀತಾ ಅವರ ಹಿಂದೆ ಹಿಂದೆ ಓಡಾಡುತ್ತಾ ಅವರ ಸೀರೆ ಸೆರಿಗಿನಿಂದ ಕೈ ಒರೆಸಿಕೊಂಡಿದ್ದಾರೆ.
ಘಟನೆಯಿಂದ ವಿಚಲಿತರಾದ ನೀತಾ ಅವರು ತಕ್ಷಣವೇ ಎಚ್ಚೆತ್ತುಕೊಂಡು ಸೆರಗು ಕೊಡವಿಕೊಂಡು ಶಾಸಕ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೂಡಲೇ ಬಿಜೆಪಿ ಹೈಕಮಾಂಡ್ ಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಜನಪ್ರತಿನಿಧಿಯಾದವರು ಒಂದಷ್ಟು ಘನತೆ, ಗೌರವ, ಉತ್ತಮ ನಡೆ ನುಡಿ ಹೊಂದಿರಬೇಕು, ಕೈ ಬಾಯಿ ಶುದ್ಧಿ ಇಲ್ಲದವರನ್ನು ನಾನೆಂದು ಪ್ರೋತ್ಸಾಹಿಸುವುದಿಲ್ಲ. ನನ್ನನ್ನು ಆತ ಅತ್ತಿಗೆ ಎಂದು ಸಂಬೋಧಿಸಬಹುದು ಆದರೆ, ಸಾರ್ವಜನಿಕ ವೇದಿಕೆಯನ್ನು ಈ ರೀತಿ ನಡೆದುಕೊಳ್ಳುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದ್ದಂತಾಗುತ್ತದೆ ಎಂದು ನೀತಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ರೈ, ನನ್ನ ಹಾಗೂ ನೀತಾ ಅವರ ನಡುವೆ ಸಣ್ಣ ಹಾಸ್ಯ ಪ್ರಸಂಗ ನಡೆದಿತ್ತು. ಈ ಸಂದರ್ಭದಲ್ಲಿ ನಾನು ಆ ರೀತಿ ನಡೆದುಕೊಂಡಿರಬಹುದು. ನಾನು ಇನ್ನೆಲ್ಲಿ ನನ್ನ ಕೈ ಒರೆಸಿಕೊಳ್ಳಲಿ. ಆಕೆ ನನ್ನ ಅತ್ತಿಗೆಯಾಗಬೇಕು. ಆಕೆ ಬಳಿ ಇದ್ದ ಸಾಮಾಗ್ರಿಗಳನ್ನು ಇಟ್ಟುಕೊಳ್ಳುವಂತೆ ಕೇಳಿದ್ದರು. ಇದಕ್ಕಾಗಿ ಮೊದಲಿಗೆ ನನ್ನ ಕೈ ಒರೆಸಿಕೊಂಡು ಶುದ್ಧಿ ಮಾಡಿಕೊಳ್ಳುತ್ತೇನೆ ಆಮೇಲೆ ನಿಮ್ಮ ಸಾಮಾಗ್ರಿ ಕೈಗೆ ತೆಗೆದುಕೊಳ್ಳುತ್ತೇನೆ ಎಂದು ಕೈ ಒರೆಸಿಕೊಂಡೆ. ನಾನು ಆಕೆಯನ್ನು ಮುಟ್ಟಲಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ ರೈತ ಪರ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಕೃಷಿ ಅಭಿವೃದ್ಧಿ ಸಚಿವ ಗೌರಿಶಂಕರ್ ಬಿಸೆನ್ ಅವರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications