ಮಧ್ಯಪ್ರದೇಶ ಚುನಾವಣೆ; ಸೆ. 3ರಿಂದ ಬಿಜೆಪಿ ಜನ ಆಶೀರ್ವಾದ ಯಾತ್ರೆ
ಭೋಪಾಲ್, ಆಗಸ್ಟ್ 30; ಈ ವರ್ಷದ ಅಂತ್ಯದಲ್ಲಿ ನಡೆಯುವ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಬಿಜೆಪಿಯ ತಯಾರಿ ಜೋರಾಗಿದೆ. 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿಯ ರಾಷ್ಟ್ರೀಯ ನಾಯಕರು ಸಹ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಘಟಕ ಚುನಾವಣಾ ತಯಾರಿ ಅಂಗವಾಗಿ ಸೆಪ್ಟೆಂಬರ್ 3ರಂದು 'ಜನ ಆಶೀರ್ವಾದ ಯಾತ್ರೆ'ಯನ್ನು ಆರಂಭಿಸಲಿದೆ. ರಾಜ್ಯದ 5 ಪ್ರಮಖ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಯಾತ್ರೆ ಆರಂಭವಾಗಲಿದ್ದು, ಸುಮಾರು 18 ದಿನಗಳ ಕಾಲ ನಡೆಯಲಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 'ಜನ ಆಶೀರ್ವಾದ ಯಾತ್ರೆ'ಯನ್ನು ಮುನ್ನಡೆಸಲಿದ್ದಾರೆ. ಯಾತ್ರೆ ಸೆಪ್ಟೆಂಬರ್ 25ರಂದು ಭೋಪಾಲ್ನಲ್ಲಿ ಅಂತ್ಯಗೊಳ್ಳಲಿದೆ. ಅಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವೂ ಹೌದು. ಅಂದು ನಡೆಯುವ ಕಾರ್ಯಕರ್ತ ಮಹಾಕುಂಭ ಎಂಬ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಜನ ಆಶೀರ್ವಾದ ಯಾತ್ರೆ; ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವುದು, ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರಿಸಿಕೊಳ್ಳುವುದು ಈ 'ಜನ ಆಶೀರ್ವಾದ ಯಾತ್ರೆ'ಯ ಪ್ರಮುಖ ಉದ್ದೇಶವಾಗಿದೆ. 6,523 ಬೂತ್ಗಳಿಂದ 1 ಮಿಲಿಯನ್ ಸದಸ್ಯರ ಸೇರ್ಪಡೆ ಗುರಿಯನ್ನು ಪಕ್ಷ ಹೊಂದಿದೆ.
ಐದು ಸ್ಥಳಗಳಲ್ಲಿ ಆರಂಭವಾಗಲಿರುವ 'ಜನ ಆಶೀರ್ವಾದ ಯಾತ್ರೆ' 210 ರಿಂದ 230 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಲಿದ್ದು 10,500 ಕಿ. ಮೀ. ಸಂಚಾರ ನಡೆಸಲಿದೆ. 212 ಸಮಾವೇಶ, 678 ಚಿಕ್ಕ ಚಿಕ್ಕ ಸಮಾವೇಶಗಳು ಈ ಯಾತ್ರೆಯಲ್ಲಿ ಸೇರಿವೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂಬ ಸುದ್ದಿಗಳ ನಡುವೆಯೇ ಈ ಬೃಹತ್ 'ಜನ ಆಶೀರ್ವಾದ ಯಾತ್ರೆ'ಯನ್ನು ಪಕ್ಷ ಆಯೋಜನೆ ಮಾಡುತ್ತಿದೆ. ಯಾತ್ರೆಯಲ್ಲಿ ಸಾಮೂಹಿಕ ನಾಯಕತ್ವದ ಬಗ್ಗೆ ಬಿಜೆಪಿ ನಾಯಕರು ಮಾತನಾಡುವ ನಿರೀಕ್ಷೆ ಇದೆ.
ಪ್ರತಿ ಯಾತ್ರೆಯಲ್ಲಿಯೂ ಅರ್ಧ ದಿನಗಳ ಕಾಲ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮಾತನಾಡಿ, "ಬಿಜೆಪಿ ಘಟಕ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದೆ. ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಿದೆ" ಎಂದರು.
ವಿಂದ್ಯಾ ವಿಭಾಗದಲ್ಲಿ ನಡೆಯಲಿರುವ 'ಜನ ಆಶೀರ್ವಾದ ಯಾತ್ರೆ'ಯನ್ನು ಸಂಸದ ಗಣೇಶ್ ಸಿಂಗ್ ಮುನ್ನಡೆಸಲಿದ್ದಾರೆ. 5 ಯಾತ್ರೆಗಳ ಜವಾಬ್ದಾರಿಯನ್ನು ವಿವಿಧ ನಾಯಕರಿಗೆ ಹಂಚಿಕೆ ಮಾಡಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್ ಸಹ ಅರ್ಧ ದಿನ ಯಾತ್ರೆಯಲ್ಲಿ ಇರಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಂದ್ಯಾದಲ್ಲಿ ನಡೆಯುವ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮತ್ತೊಂದು ಯಾತ್ರೆಗೆ ಚಾಲನೆ ನೀಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಈ 'ಜನ ಆಶೀರ್ವಾದ ಯಾತ್ರೆ' ಪಕ್ಷದ ವರ್ಚಸ್ಸು ಹೆಚ್ಚಿಸಲಿದೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಕಡಿಮೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ.
ಈ ವರ್ಷದ ನವೆಂಬರ್ನಲ್ಲಿ ಮಧ್ಯಪ್ರದೇಶದ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಅಮಿತ್ ಶಾ ರಾಜ್ಯ ಬಿಜೆಪಿ ಘಟಕದ ಜೊತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಷ್ಣು ದತ್ತಾ ಶರ್ಮಾ ಸೇರಿದಂತೆ ವಿವಿಧ ನಾಯಕರಿಗೆ ಹಲವು ಸೂಚನೆಗಳನ್ನು ಕೊಡುತ್ತಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್, ಎಎಪಿ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಯಲ್ಲಿ ಎದುರಾಳಿಗಳು. ಮಧ್ಯಪ್ರದೇಶದ ಕಾಂಗ್ರೆಸ್ ಘಟಕವೂ ಚುನಾವಣೆಯ ಸಿದ್ಧತೆಗಳನ್ನು ನಡೆಸುತ್ತಿದೆ. 2024ರ ಲೋಕಸಭಾ ಚುನಾವಣೆಗೆ ಮೊದಲು ನಡೆಯಲಿರುವ ಈ ಚುನಾವಣೆ ದೇಶದ ಕುತೂಹಲಕ್ಕೆ ಕಾರಣವಾಗಿದೆ.











Click it and Unblock the Notifications