ತ್ರಿವಳಿ ತಲಾಖ್: ಲೋಕಸಭೆಯಲ್ಲಿ ನಾಳೆ ಕಾವೇರಿದ ಚರ್ಚೆ ಸಾಧ್ಯತೆ
ನವದೆಹಲಿ, ಡಿಸೆಂಬರ್ 26: ವಿವಾದಾತ್ಮಕ ತ್ರಿವಳಿ ತಲಾಕ್ ಮಸೂದೆಯನ್ನು ಬಿಜೆಪಿ ಗುರುವಾರ ಲೋಕಸಭೆಯಲ್ಲಿ ಮಂಡಿಸಲಿದೆ.
ಕ್ರಿಸ್ ಮಸ್ ರಜೆ ವಿರಾಮದ ಬಳಿಕ ಮತ್ತೆ ಸೇರಲಿರುವ ಸದನದಲ್ಲಿ ತ್ರಿವಳಿ ತಲಾಖ್ ಮಸೂದೆ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ತನ್ನ ಎಲ್ಲ ಸಂಸದರೂ ಗುರುವಾರದ ಕಲಾಪದಲ್ಲಿ ಹಾಜರಿರುವಂತೆ ಬಿಜೆಪಿ ಮಂಗಳವಾರ ವಿಪ್ ಜಾರಿಮಾಡಿದೆ.
ಕಳೆದ ವಾರ ಬಿಜೆಪಿ ನೇತೃತ್ವದ ಸರ್ಕಾರ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯ ಚರ್ಚೆಯ ಸಂಗತಿಯಾಗಿ ಪಟ್ಟಿಯಲ್ಲಿರಿಸಿದೆ. ಸೆಪ್ಟೆಂಬರ್ 19ರಂದು ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಘೋಷಿಸಲು ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಒಪ್ಪಿತ್ತು. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿತ್ತು.

ರಫೇಲ್ ಒಪ್ಪಂದದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿ ವಿರೋಧಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಮಸೂದೆ ಬಗ್ಗೆ ಚರ್ಚೆ ನಡೆದಿರಲಿಲ್ಲ.
ಮುಸ್ಲಿಂ ಮಹಿಳೆಯರಿಗೆ ತಕ್ಷಣವೇ ವಿಚ್ಛೇದನ ನೀಡುವಂತಹ ಪದ್ಧತಿಗೆ ಕಡಿವಾಣ ಹಾಕಲು ಮುಸ್ಲಿಂ ಮಹಿಳೆಯರ ಮಸೂದೆ 2018 (ವಿವಾಹದ ಹಕ್ಕುಗಳ ರಕ್ಷಣೆ) ಮುಂದಾಗಿದ್ದು, ಅದನ್ನು ಲೋಕಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಕಟಿಸಿದ ಬಳಿಕ ಎಲ್ಲ ಸಂಸದರಿಗೂ ಬಿಜೆಪಿ ವಿಪ್ ಜಾರಿ ಮಾಡಿದೆ.
ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಚರ್ಚೆಗೆ ಸಿದ್ಧರಿದ್ದು, ಡಿ. 27ರಂದು ಲೋಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದ್ದರು.
ಮಸೂದೆಯಲ್ಲಿ ಕೆಲವು ಗೊಂದಲಗಳು ಇರುವುದರಿಂದ ಕೇಂದ್ರ ಸರ್ಕಾರ ಅದರಲ್ಲಿ ಕೆಲವು ತಿದ್ದುಪಡಿಗಳನ್ನು ಸಹ ಮಾಡಿತ್ತು.
ಅಕಸ್ಮಾತ್ ಮುಸ್ಲಿಂ ಪತಿ ತ್ರಿವಳಿ ತಲಾಖ್ ನೀಡಿದರೆ ಆತನ ವಿರುದ್ಧ ಪತ್ನಿ ಅಥವಾ ಯಾವುದೇ ಹತ್ತಿರದ ಬಂಧುಗಳು ದೂರು ನೀಡಬಹುದು. ಪತಿ ಸಂಧಾನಕ್ಕೆ ಬಂದರೆ ಅಥವಾ ರಾಜಿ ಮಾಡಿಕೊಳ್ಳಲು ಒಪ್ಪಿದರೆ ಆಕೆ ದೂರನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದೆ. ಪತಿಯನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗಟ್ಟಬಹುದು ಮತ್ತು ಆತನಿಗೆ ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು ಪತ್ನಿಯೊಂದಿಗೆ ಮಾತುಕತೆ ನಡೆಸಿಯೇ ಮ್ಯಾಜಿಸ್ಟ್ರೇಟ್ ತೀರ್ಪು ನೀಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ. ಕಳೆದ ಆಗಸ್ಟ್ ನಲ್ಲಿ ಈ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಅಪರಾಧ ಮತ್ತು ಅಸಾಂವಿಧಾನಿಕ ಎಂಬ ಮಹತ್ವದ ಆದೇಶ ನೀಡಿತ್ತು.












Click it and Unblock the Notifications