ಲೋಕಸಭೆ 2014: ಮತದಾರನ ಈಗಿನ ಮನಸ್ಥಿತಿ ಹೀಗಿದೆ
ನವದೆಹಲಿ, ಅ.17: ಆಗಸ್ಟ್ 16ರಿಂದ ಅಕ್ಟೋಬರ್ 15 ರವರೆಗಿನ ದೇಶದಲ್ಲಿನ ಮತದಾರರ ಮನಸ್ಥಿತಿಯನ್ನು ಅಳೆಯಲು ಇಂಡಿಯಾ ಟಿವಿ- ಟೈಮ್ಸ್ ನೌ ಸಿ- ವೋಟರ್ ನಡೆಸಿದ್ದ ಸಮೀಕ್ಷೆಯ ವಿವರ ಲಭ್ಯವಾಗಿದೆ. ಗಮನಾರ್ಹವೆಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಮೊದಲು ಮತ್ತು ನಂತರ ಈ ಸಮೀಕ್ಷೆ/ಅಭಿಪ್ರಾಯ ಸಂಗ್ರಹಿಸಲಾಗಿದೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸ್ವಯಂಬಲದಿಂದ ಅಧಿಕಾರ ಹಿಡಿಯುವ ಸಾಧ್ಯತೆಗಳು ಕಡಿಮೆ. ಆದರೆ ಇವೆರಡರ ಪೈಕಿ ಒಂದು ಪಕ್ಷವು ಸಾರಥ್ಯವಹಿಸಿ ಸರ್ಕಾರ ರಚಿಸಬೇಕಾಗಿದ್ದರೆ, ಪ್ರಾದೇಶಿಕ ಪಕ್ಷಗಳೇ (ತೃತೀಯ ರಂಗ ಅಲ್ಲ) ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತವೆ.
ಆದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಹಿನ್ನಡೆಯಾಗಲಿದ್ದು, ಮತ್ತೆ ಸರಕಾರದ ಚುಕ್ಕಾಣಿ ಹಿಡಿಯುವುದು ದುಸ್ತರವಾಗಲಿದೆ. ಇನ್ನು ಪ್ರತಿಪಕ್ಷ ಬಿಜೆಪಿ ನೇತೃತ್ವದ ಎನ್ಡಿಎ ಮುನ್ನಡೆ ಗಳಿಸಲಿದೆ. ಸಮೀಕ್ಷೆಯ ಒಟ್ಟು ತಾತ್ಪರ್ಯವೆಂದರೆ ಮತದಾರ ಸದ್ಯಕ್ಕೆ ಗೊಂದಲದಲ್ಲಿದ್ದು, ತಕ್ಷಣ ಚುನಾವಣೆ ನಡೆದರೆ ಅತಂತ್ರ ಲೋಕಸಭೆ ರಚನೆಯಾಗಲಿದೆ ಎನ್ನುತ್ತಿದೆ India TV-Times Now C Voter-Survey ರಾಷ್ಟ್ರವ್ಯಾಪಿ ನಡೆಸಿರುವ ಸಮೀಕ್ಷೆ. ಫಲಿತಾಂಶ ಹೀಗಿದೆ:

ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಲ್ಲಿ ಹಿನ್ನಡೆ:
ಕಾಂಗ್ರೆಸ್ಸಿಗೆ ಆಂಧ್ರ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳಲ್ಲಿ ಭಾರಿ ನಷ್ಟ ಉಂಟಾಗಲಿದೆ. ಒಟ್ಟಾರೆಯಾಗಿ, ಕಾಂಗ್ರೆಸ್ ನೇತೃತ್ವದ ಯುಪಿಎಗೆ 117 ಸ್ಥಾನಗಳು ದೊರಕಲಿವೆ.

ತೆಲಂಗಾಣ ರಚನೆ ಕಾಂಗ್ರೆಸ್ಸಿಗೆ ನಿಷ್ಪ್ರಯೋಜಕ:
ತೆಲಂಗಾಣ ರಾಜ್ಯ ರಚನೆ ಮೂಲಕ ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ ಹವಣಿಕೆ ತಪ್ಪಾಗುವುದು ಖಚಿತ. ಆಂಧ್ರಪ್ರದೇಶದ 42 ಸ್ಥಾನಗಳ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಜಗನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ತಲಾ 13 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿವೆ. ಟಿಡಿಪಿ 8 ಸ್ಥಾನ ಬಗಲಿಗೆ ಹಾಕಿಕೊಳ್ಳಲಿದೆ.

ಸಿದ್ದರಾಮಯ್ಯ ನಾಯಕತ್ವಕ್ಕೆ 13 ಸೀಟು
ಒಂಬತ್ತು ವರ್ಷಗಳ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಕಾಂಗ್ರೆಸ್ಗೆ ಈ ಚುನಾವಣೆ ಪ್ರಮುಖವಾಗಿ ಪರಿಣಮಿಸಲಿದೆ. ರಾಜ್ಯದಲ್ಲಿರುವ ಒಟ್ಟು 28 ಸ್ಥಾನಗಳ ಪೈಕಿ ಕಾಂಗ್ರೆಸ್ಗೆ 13 ಮತ್ತು ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ 12 ಸ್ಥಾನ ಲಭಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇನ್ನುಳಿದ ಮೂರು ಸ್ಥಾನಗಳು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕದ ಸ್ಥಿತಿಗತಿ ಹೀಗಿದೆ
ಕಳೆದ ಜುಲೈನಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 17, ಬಿಜೆಪಿ 8 ಮತ್ತು ಜೆಡಿಎಸ್ 3 ಸ್ಥಾನ ಬರಬಹುದು ಎನ್ನಲಾಗಿತ್ತು. ಆದರೆ, ಈಗ ಬಿಜೆಪಿಯತ್ತ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಒಲವು ವ್ಯಕ್ತಪಡಿಸಿರುವುದು ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಭಾವ ಜಾಸ್ತಿ ಆಗುತ್ತಿರುವುದು, ಬಿಜೆಪಿಯ ಸ್ಥಿತಿಯನ್ನು ಜುಲೈಗಿಂತ ಸ್ವಲ್ಪ ಸುಧಾರಿಸಲಿದೆ ಎಂದು ಸಮೀಕ್ಷೆ ವಿಶ್ಲೇಷಿಸಿದೆ. ಇನ್ನು ಮತ ಗಳಿಕೆ ಗಮನಿಸಿದರೆ ಬಿಜೆಪಿ ಶೇ.39, ಕಾಂಗ್ರೆಸ್ ಶೇ.38, ಜೆಡಿಎಸ್ ಶೇ.16 ಮತ್ತು ಇತರರು ಶೇ.7 ಮತ ಗಳಿಸಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ.
ಅಂದರೆ ಕಳೆದ ಚುನಾವಣೆಯಲ್ಲಿ 19 ಸ್ಥಾನ ಗಳಿಸಿದ್ದ ಬಿಜೆಪಿ ಈಗ 7 ಸ್ಥಾನ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಕಳೆದ ಸಲದ 6 ಸ್ಥಾನಕ್ಕೆ 7 ಸ್ಥಾನ ಹೆಚ್ಚುವರಿಯಾಗಿ ಜೋಡಿಸಿಕೊಳ್ಳಲಿದೆ. ಜೆಡಿಎಸ್ ಕಳೆದ ಸಲದ 3 ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಗುಜರಾತಿನಲ್ಲಿ ಮೋದಿ ಬಿಜೆಪಿಗೇ ಗೆಲವು:
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಧಿಕಾರದಲ್ಲಿರುವ ಗುಜರಾತಿನಲ್ಲಿ 26 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ.

ಬಿಹಾರ- ಜೆಡಿಯುಗೆ ನಷ್ಟ- ಲಾಲುಗೆ ಹೆಚ್ಚು ಪಾಲು
ಬಿಜೆಪಿ ಜತೆ ಸಖ್ಯ ಕಡಿದುಕೊಂಡ ಜೆಡಿಯುಗೆ ಬಿಹಾರದಲ್ಲಿ ಬಾರಿ ನಷ್ಟ ಉಂಟಾಗಲಿದೆ. ಜೆಡಿಯುಗೆ 9 ಸ್ಥಾನ ದೊರೆಯಲಿದ್ದು, ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಲಾಲು ಯಾದವ್ ನೇತೃತ್ವದ ಆರ್ ಜೆಡಿ 14 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ ಜೆಡಿಯು 20 ಸ್ಥಾನಗಳನ್ನು ಗೆದ್ದಿತ್ತು.

ಬಿಜೆಪಿಗೆ ಅನುಕೂಲ:
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಗೇ ಅನುಕೂಲವಾಗಲಿದೆ. ರಾಜಸ್ಥಾನದಲ್ಲಿ ಬಿಜೆಪಿಗೆ 19, ಕಾಂಗ್ರೆಸ್ಗೆ ಕೇವಲ 5 ಕ್ಷೇತ್ರಗಳು ಬಗಲಿಗೆ ಬೀಳಲಿದೆ. ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂದರೆ 23 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಕಾಂಗ್ರೆಸ್ 6ಕ್ಕೆ ತೃಪ್ತಿಪಡಲಿದೆ. ರಾಜಧಾನಿ ದೆಹಲಿಯ ಒಟ್ಟು 7 ಸ್ಥಾನಗಳ ಪೈಕಿ ಬಿಜೆಪಿಗೆ 4 ಕಾಂಗ್ರೆಸ್ ತೆಕ್ಕೆಗೆ 3 ಸ್ಥಾನಗಳು ದಕ್ಕಲಿವೆ. ಛತ್ತೀಸ್ ಗಡದಲ್ಲಿ ಮಾತ್ರ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಎನ್ ಡಿಎಗೆ 186 ಸ್ಥಾನ:
ಬಿಜೆಪಿ, ಶಿವಸೇನೆ, ಅಕಾಲಿದಳ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ), ಮೇಘಾಲಯದ ಎನ್ ಸಿಪಿ ಘಟಕ ಮತ್ತು ಹರಿಯಾಣದಲ್ಲಿ ಕುಲದೀಪ್ ಬಿಷ್ಣೋಯ್ ನೇತೃತ್ವದ ಜನಹಿತ ಕಾಂಗ್ರೆಸ್ ಪಕ್ಷಗಳ ಎನ್ ಡಿಎ ಮೈತ್ರಿಕೂಟಕ್ಕೆ 186 ಸ್ಥಾನಗಳು ಲಭಿಸಲಿವೆ.

ಇತರೆ ಪಕ್ಷಗಳಿಗೆ 240 ಸ್ಥಾನ
ಇತರೆ ಪಕ್ಷಗಳ ಪಟ್ಟಿಯಲ್ಲಿ ಅಣ್ಣಾ ಡಿಎಂಕೆ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಎಡ ಪಕ್ಷಗಳು, ತೃಣಮೂಲ ಕಾಂಗ್ರೆಸ್, ಆರ್ ಜೆಡಿ, ಬಿಜೆಡಿ, ವೈಎಸ್ ಆರ್ ಕಾಂಗ್ರೆಸ್ ಮತ್ತು ಟಿಎಸ್ ಆರ್ ಜತೆಯಾಗಿ 240 ಸ್ಥಾನಗಳನ್ನು ಹೊಂದಲಿವೆ.

ಕಳೆದ ಚುನಾವಣೆಯಲ್ಲಿ ಎಷ್ಟಿತ್ತು?:
2009ರಲ್ಲಿ ನಡೆದಿದ್ದ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ 206, ಬಿಜೆಪಿ 116 ಸ್ಥಾನಗಳನ್ನು ಪಡೆದುಕೊಂಡಿದ್ದವು. ಹೀಗಾಗಿ ಕಾಂಗ್ರೆಸ್ ಶೇ. 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. 2009ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಶೇ. 40ರಷ್ಟು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಈ ಬಾರಿ ಎಡ ಪಕ್ಷಗಳು ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಮೂಲಕ ಇತರ ಪಕ್ಷಗಳಲ್ಲಿ ನಾಯಕನ ಪಾತ್ರ ವಹಿಸಲಿವೆ. ಕೇರಳದಲ್ಲಿ ಎಡ ಪಕ್ಷಗಳು 13 ಸ್ಥಾನಗಳನ್ನು ಗೆಲ್ಲಲಿವೆ. ಸೌರ ಫಲಕ ಹಗರಣದಿಂದ ಕಂಗೆಟ್ಟಿರುವ ಕಾಂಗ್ರೆಸ್ ಕೇವಲ 4 ಸ್ಥಾನಗಳನ್ನು ಗೆಲ್ಲಲಿದೆ.

ಉತ್ತರಪ್ರದೇಶದಲ್ಲಿ ಹೇಗೆ?
ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 25, ಬಿಜೆಪಿ 10, ಕಾಂಗ್ರೆಸ್ 5, ಬಹುಜನ ಸಮಾಜ ಪಕ್ಷ 31 ಸ್ಥಾನ ಗಳಿಸಲಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಕಾಂಗ್ರೆಸ್-ಎನ್ ಸಿಪಿ ಮೈತ್ರಿಕೂಟಕ್ಕಿಂತ ಉತ್ತಮ ಸಾಧನೆ ಮಾಡಲಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 23, ಎಡಪಕ್ಷಗಳು 16 ಮತ್ತು ಕಾಂಗ್ರೆಸ್ ಕೇವಲ 3 ಸ್ಥಾನ ಪಡೆಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ 5 ಸ್ಥಾನ ಪಡೆಯಲಿದೆ.












Click it and Unblock the Notifications