ಚೌಕಿದಾರ್ ಎಂಬುದು ಒಂದು ಚೈತನ್ಯ, ಅದನ್ನು ಜೀವಂತವಾಗಿಡಿ : ನರೇಂದ್ರ ಮೋದಿ
ಚೌಕಿದಾರ್ ಚೋರ್ ಹೈ ಎಂದು ಸಂಸತ್ತಿನಲ್ಲಿ, ಪ್ರಚಾರ ಸಭೆಗಳಲ್ಲಿ ಬಡಬಡಿಸಿದವರಿಗೆ, ಚೌಕಿದಾರ್ ಚೋರ್ ಹೈ ಎಂದು ಮಕ್ಕಳಿಂದ ಹೇಳಿಸಿ ಸಂತಸಪಟ್ಟವರಿಗೆ, ಚೌಕಿದಾರ್ ಚೋರ್ ಹೈ ಎಂದು ಸಾರ್ವಜನಿಕರಿಂದ ಹೇಳಿಸಿದವರಿಗೆ ದೇಶದ ಜನತೆ ಚೌಕಿದಾರ್ ಎಂಥವರೆಂದು ತೋರಿಸಿಕೊಟ್ಟಿದ್ದಾರೆ. ಇದಕ್ಕಿಂತ ಚಾಟಿ ಇನ್ನೇನು ಬೇಕು?
ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ 'ನಾನು ಈ ದೇಶದ ಚೌಕಿದಾರ' ಎಂದು 2014ರಲ್ಲೇ ಘೋಷಿಸಿದ್ದ ನರೇಂದ್ರ ಮೋದಿಯವರು, 'ನಾನೂ ಚೌಕಿದಾರ್' ಎಂಬ ಅಭಿಯಾನ ಆರಂಭಿಸಿ ಇಡೀ ದೇಶದಲ್ಲಿ ಚೌಕಿದಾರ್, ಚೌಕಿದಾರ್ ಎಂಬ ಉದ್ಘೋಷ ಮೊಳಗುವಂತೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಚೌಕಿದಾರ್ ಚೋರ್ ಹೈ ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ ಎಂದು ಬಾಯಿತಪ್ಪಿ 'ಸುಳ್ಳು' ಹೇಳಿದ ರಾಹುಲ್ ಗಾಂಧಿ ಅವರಿಗೆ, ಅದ್ಭುತ ಜನಾದೇಶ ನೀಡಿದ ಪ್ರಜ್ಞಾವಂತ ಮತದಾರರು ತಕ್ಕ ಶಾಸ್ತಿ ಮಾಡಿದ್ದಾರೆ. ಇದೀಗ ಚೌಕಿದಾರ್ ಎಂಬ ಪರಿಕಲ್ಪನೆಯ ಬಗ್ಗೆ ನರೇಂದ್ರ ಮೋದಿಯವರೇ ಹೀಗೆ ಹೇಳಿದ್ದಾರೆ.
|
ಚೌಕಿದಾರ್ ಎಂಬುದು ಸ್ಫೂರ್ತಿ, ಚೈತನ್ಯ
"ಈಗ, ಚೌಕಿದಾರ್ ಎಂಬ ಸ್ಫೂರ್ತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಮಯ ಬಂದಿದೆ. ಪ್ರತಿಕ್ಷಣದಲ್ಲೂ ಈ ಚೈತನ್ಯವನ್ನು ಜೀವಂತವಾಗಿಡಿ ಮತ್ತು ದೇಶದ ಪ್ರಗತಿಗಾಗಿ ದುಡಿಯುತ್ತಿರಿ. ನನ್ನ ಟ್ವಿಟ್ಟರ್ ನಿಂದ 'ಚೌಕಿದಾರ್' ಅನ್ನು ತೆಗೆಯುತ್ತಿದ್ದೇನೆ, ಆದರೆ, ಅದು ನನ್ನಲ್ಲಿ ಯಾವತ್ತಿಗೂ ಅಂತರ್ಗತವಾಗಿರುತ್ತದೆ. ನೀವು ಎಲ್ಲರೂ ಹೀಗೆಯೇ ಮಾಡಿ ಎಂದು ಆಗ್ರಹಿಸುತ್ತೇನೆ" ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಪುಣ್ಯ ಭೂಮಿ ಕಾಶಿ ಸೇವೆಯ ಸೌಭಾಗ್ಯ
ಇದೇ ಸಮಯದಲ್ಲಿ ಅವರು, ತಮ್ಮನ್ನು ಎರಡನೇ ಬಾರಿ ಗೆಲ್ಲಿಸಿದ ಗಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಕಾಶಿ ಅಥವಾ ವಾರಣಾಸಿಯ ಜನತೆಗೆ ಧನ್ಯವಾದ ತಿಳಿಸಲು ಮರೆತಿಲ್ಲ. ಇಂಥ ಪುಣ್ಯ ಭೂಮಿಯ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಲೋಕಸಭೆಯಲ್ಲಿ ಮತ್ತೊಂದು ಬಾರಿ ಕಾಶಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ನಾನು ತುಂಬಾ ಉತ್ಸಾಹಿತನಾಗಿದ್ದೇನೆ. ಕಾಶಿಯ ವಿಕಾಸಕ್ಕಾಗಿ ನಾವೆಲ್ಲ ಸೇರಿ ಕೆಲಸ ಮಾಡೋಣ. ಕಾಶಿಯ ಎಲ್ಲ ಕಾರ್ಯಕರ್ತರು ಕಠಿಣ ಪರಿಶ್ರಮ ಹಾಕಿದ್ದಕ್ಕಾಗಿ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ಮತ್ತೆ ಗೆದ್ದಿದ್ದೇಕೆ? 5 ಕಾರಣಗಳು
ಅಭಿಮಾನಿಗಳ ಹೆಸರಿನ ಹಿಂದೆ ಚೌಕಿದಾರ್
ಅಸಲಿಗೆ, ನಾನು ಚೌಕಿದಾರ್ ಎಂಬುದು ಯಾವ ಪರಿ ಆಕ್ರಮಿಸಿಕೊಂಡಿತ್ತೆಂದರೆ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಜೊತೆ ಚೌಕಿದಾರ್ ಎಂದು ಹೆಸರು ಅಂಟಿಸಿಕೊಂಡಿದ್ದರು. ಇದನ್ನು ನರೇಂದ್ರ ಮೋದಿಯವರನ್ನು ದ್ವೇಷಿಸುವವರು ಪರಿಹಾಸ್ಯ ಮಾಡಿದ್ದರು. ನರೇಂದ್ರ ಮೋದಿ ಹೇಳಿದರೆಂದು ಇವರೂ ಚೌಕಿದಾರ್ ಹೆಸರು ಅಂಟಿಸಿಕೊಂಡರೆ ಇವರಿಗೇನು ಸ್ವಂತ ಬುದ್ಧಿಯಿಲ್ಲವೆ ಎಂದು ಅಪಹಾಸ್ಯ ಮಾಡಿದ್ದರು. ಅಂದು ಅಪಹಾಸ್ಯ ಮಾಡಿದವರೆಲ್ಲರೂ ಇಂದು ಬಾಯಿ ಮುಚ್ಚಿಕೊಂಡಿದ್ದಾರೆ.
ನಾನು ಈ ದೇಶದ ಚೌಕಿದಾರ
2014ರಲ್ಲಿ ಗೆದ್ದಿದ್ದಾಗ ನರೇಂದ್ರ ಮೋದಿಯವರು, ನಾನು ಈ ದೇಶದ ಪ್ರಧಾನಿಯಲ್ಲ, ನಾನು ಈ ದೇಶದ ಚೌಕಿದಾರ, ನಾನು ನಿಮ್ಮೆಲ್ಲರ ಸೇವಕ ಎಂದು ವಿನಮ್ರವಾಗಿ ಹೇಳಿದ್ದರು. ಇದನ್ನು ಅವರು ಹಲವಾರು ಬಾರಿ ಪ್ರಸ್ತಾಪಿಸುತ್ತಲೂ ಇದ್ದರು. ಆದರೆ, ರಫೇಲ್ ಹಗರಣದ ಬಗ್ಗೆ ಕಾಂಗ್ರೆಸ್ ಚಕಾರವೆತ್ತಲು ಶುರುಮಾಡಿದ ನಂತರ, ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ನಲ್ಲಿ ನರೇಂದ್ರ ಮೋದಿ ಅವರು ದೇಶದ ಜನರ 30 ಸಾವಿರ ಕೋಟಿ ರುಪಾಯಿಯನ್ನು ತೆಗೆದುಕೊಂಡು ರಿಲಯನ್ಸ್ ಕಂಪನಿಯ ಚೇರ್ಮನ್, ವಿಮಾನ ತಯಾರಿಸಲೂ ಬಾರದ ಅನಿಲ್ ಅಂಬಾನಿ ಅವರಿಗೆ ನೀಡಿ ಚೋರಿ (ಕಳ್ಳತನ) ಮಾಡಿದ್ದಾರೆ ಎಂದು ಆರೋಪಿಸಲು ಆರಂಭಿಸಿದರು. ಅವರ ಈ ಮಾತನ್ನು ಕೇಳಿಕೇಳಿ ಜನರೇ ಅಸಹ್ಯ ಪಟ್ಟುಕೊಳ್ಳಲು ಆರಂಭಿಸಿದರು.
ಬಿಜೆಪಿ ವಿರುದ್ಧ ನೇರಾನೇರ ಸ್ಪರ್ಧೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್
ಚೌಕಿದಾರ್ ದೇಶದ ಎಲ್ಲರ ಹಿತ ಕಾಯುತ್ತಾನೆ
ಅಷ್ಟು ಸಾಲದೆಂಬಂತೆ, ಚೌಕಿದಾರ್ ಬಡವರೆ ಮನೆಯ ಮುಂದೆ ಕಾವಲು ಕಾಯುತ್ತಾನಾ? ಆತ ಶ್ರೀಮಂತರ ಮನೆ ಮುಂದೆ ಮಾತ್ರ ಕಾವಲು ಕಾಯುತ್ತಾನೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಲು ಆರಂಭಿಸಿದರು. ಚೌಕಿದಾರ್ ಅನಿಲ್ ಅಂಬಾನಿ, ಅದಾನಿಯಂಥ ನರೇಂದ್ರ ಮೋದಿ ಬೆಂಬಲಿಗರು, ಶ್ರೀಮಂತರ ಮನೆಯ ಕಾವಲು ಮಾತ್ರ ಕಾಯುತ್ತಾನೆ ಎಂದು ನರೇಂದ್ರ ಮೋದಿಯವರನ್ನೇ ಆಡಿಕೊಳ್ಳಲು ಆರಂಭಿಸಿದರು. ಏನೇ ಆಗಲಿ, ಚೌಕಿದಾರ್ ಶ್ರೀಮಂತರ ಮನೆ ಮಾತ್ರ ಕಾಯುವುದಿಲ್ಲ, ಆತ ಈ ದೇಶದ ಎಲ್ಲ ಜನರ ಹಿತ ಕಾಯುತ್ತಾನೆ ಎಂಬ ಅರ್ಥವನ್ನು ದೇಶದ ಜನರೇ ನೀಡಿದ್ದಾರೆ. ಇದು ರಾಹುಲ್ ಗಾಂಧಿ ಅವರಿಗೆ ಅರ್ಥವಾಗುವುದಾದರೂ ಎಂತು?