ಲಾಕ್ ಡೌನ್ ಅಂದರೆ ಆನ್, ಆಫ್ ಸ್ವಿಚ್ ಅಲ್ಲ: ಮೋದಿಗೆ ಗಂಭೀರ ಪ್ರಶ್ನೆ ಎಸೆದ ರಾಹುಲ್ ಗಾಂಧಿ
ನವದೆಹಲಿ, ಮೇ 8: ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಮತ್ತು ಪ್ರೊ. ಅಭಿಜಿತ್ ಬ್ಯಾನರ್ಜಿಯವರಿಂದ ಮಹತ್ವದ ಟಿಪ್ಸ್ ಅನ್ನು ಪಡೆದುಕೊಂಡಿರುವ ರಾಹುಲ್ ಗಾಂಧಿ, ಮೋದಿ ಸರಕಾರಕ್ಕೆ ಗಂಭೀರ ಪ್ರಶ್ನೆಯನ್ನು ಎಸೆದಿದ್ದಾರೆ.
ರಾಜಧಾನಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ,"ಮೇ 17ರಂದು, ಮೂರನೇ ಹಂತದ ಲಾಕ್ ಡೌನ್ ಮುಕ್ತಾಯಗೊಂಡ ನಂತರದ ಮತ್ತು ಆರ್ಥಿಕತೆ ಸುಧಾರಣೆಯ ಕಾರ್ಯತಂತ್ರದ ಬಗ್ಗೆ ಕೇಂದ್ರ ಸರಕಾರ, ಜನರಿಗೆ ತಿಳಿಸುವ ಅಗತ್ಯವಿದೆ" ಎಂದು ಹೇಳಿದರು.
"ಲಾಕ್ ಡೌನ್ ಎಂದರೆ ಅದು ಆನ್, ಆಫ್ ಸ್ವಿಚ್ ಅಲ್ಲ. ಮೋದಿ ಸರಕಾರ ತನ್ನ ಮುಂದಿನ ಯೋಜನೆಗಳ ಬಗ್ಗೆ ಪಾರದರ್ಶತೆಯಿಂದ ಕೆಲಸ ಮಾಡಬೇಕಿದೆ. ಯಾವುದೇ ಯೋಜನೆಯನ್ನು ಆರಂಭಿಸುವ ಮುನ್ನ, ಅದಕ್ಕೆ ಬಳಸಲಾಗುವ ಮಾನದಂಡಗಳು ಯಾವುವು ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇರಬೇಕು"ಎಂದು ರಾಹುಲ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

"ಮೊದಲು ಕೊರೊನಾ ಬಗ್ಗೆ ಜನರಿಗೆ ಇರುವ ಭಯವನ್ನು ದೂರ ಮಾಡಬೇಕು. ಇದೇನು ಮಾರಕ ರೋಗವಲ್ಲ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ, ಏನೂ ತೊಂದರೆಯಾಗುವುದಿಲ್ಲ ಎನ್ನುವುದು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕಿದೆ"ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ.
"ಕೇಂದ್ರ ಸರಕಾರ ವಲಸೆ ಕಾರ್ಮಿಕರು ಮತ್ತು ಕಷ್ಟದಲ್ಲಿರುವ ಜನರಿಗೆ ಯಾವುದೇ ವಿಳಂಬ ಮಾಡದೇ ನೇರ ನಗದು ವರ್ಗಾವಣೆ ಮಾಡಬೇಕು" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
"ಕೊರೊನಾ ರೋಗವು ಕೆಲವು ವರ್ಗದ ಜನರಿಗೆ ಮಾಅತ್ರ ಅಪಾಯಕಾರಿ. ವಯಸ್ಸಾದವರಿಗೆ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಇರುವವರಿಗೆ ಇದು ಅಪಾಯಕಾರಿ. ಆದರೆ ಅದನ್ನು ಹೊರತುಪಡಿಸಿ, ಇದು ಅಪಾಯಕಾರಿ ರೋಗವಲ್ಲ" ಎಂದು ರಾಹುಲ್ ಗಾಂಧಿ ಹೇಳಿದರು.












Click it and Unblock the Notifications