ಲಾಲೂ ಪ್ರಸಾದ್ಗೆ ತಾತ್ಕಾಲಿಕ ಜಾಮೀನು ಜುಲೈ 3ರವರೆಗೆ ವಿಸ್ತರಣೆ
ರಾಂಚಿ, ಜೂನ್ 22: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರಿಗೆ ನೀಡಲಾಗಿರುವ ತಾತ್ಕಾಲಿಕ ಜಾಮೀನನ್ನು ಜುಲೈ 3ರವರೆಗೂ ವಿಸ್ತರಿಸಲಾಗಿದೆ.
ಲಾಲೂ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ರಾಂಚಿ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಅವರು ಜುಲೈ 3ರವರೆಗೂ ತಾತ್ಕಾಲಿಕ ಜಾಮೀನು ಅವಧಿಯನ್ನು ವಿಸ್ತರಿಸಿದರು.
ಲಾಲೂ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿತ್ತು. ಅದು ಜೂನ್ 27ರಂದು ಅಂತ್ಯವಾಗಲಿತ್ತು.

ಮೇ 11ರಂದು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು ಲಾಲೂ ಅವರಿಗೆ ಆರು ವಾರಗಳ ತಾತ್ಕಾಲಿಕ ಜಾಮೀನು ನೀಡಿದ್ದರು.
ಜಾಮೀನು ಅವಧಿ ಅಂತ್ಯವಾಗುತ್ತಿದ್ದು, ಲಾಲೂ ಅವರು ಇನ್ನೂ ಅನಾರೋಗ್ಯದಿಂದ ಚೇತರಿಸಿಕೊಳ್ಳದ ಕಾರಣ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಅವರ ಪರ ವಕೀಲರು ಮನವಿ ಮಾಡಿದ್ದರು.
ಬಹುಕೋಟಿ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲೂ ಅವರು ಶಿಕ್ಷೆಗೆ ಒಳಗಾಗಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಲಾಲೂ ಪ್ರಸಾದ್ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆದ ಬಳಿಕ ಈ ತಿಂಗಳ ಆರಂಭದಲ್ಲಿ ಪಟ್ನಾಕ್ಕೆ ಮರಳಿದ್ದರು.












Click it and Unblock the Notifications