ರಾಹುಲ್ ರನ್ನು ತಿರಸ್ಕರಿಸಿ ಪ್ರಿಯಾಂಕಾಗೆ ಜೈ ಎಂದ ಲಾಲೂ
ನವದೆಹಲಿ, ಜುಲೈ 05 : ಮುಂದಿನ ಲೋಕಸಭೆ ಚುನಾವಣೆಯ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ವದ್ರಾ ಅವರು ವಹಿಸಿಕೊಳ್ಳಬೇಕು ಎಂದು ಹೇಳಿ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ರಾಹುಲ್ ಗಾಂಧಿ ನಾಯಕತ್ವಕ್ಕೆ ಭಾರೀ ಹೊಡೆತ ನೀಡಿದ್ದಾರೆ.
ನರೇಂದ್ರ ಮೋದಿ ನಾಯಕತ್ವದ ಎನ್ಡಿಎಯನ್ನು 2019ರಲ್ಲಿ ನಡೆಯಲಿರುವ ಲೋಕಸಭೆಯಲ್ಲಿ ಸೋಲಿಸಬೇಕಾದರೆ, ವಿರೋಧಿ ಪಕ್ಷಗಳೆಲ್ಲ ಸಂಘಟಿತವಾಗಿ ಹೋರಾಟ ನಡೆಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗ ಇಂಥ ಹೇಳಿಕೆ ನೀಡಿ ಕಾಂಗ್ರೆಸ್ಸಿಗೆ ಲಾಲೂ ಇರುಸುಮುರುಸು ಉಂಟುಮಾಡಿದ್ದಾರೆ.

ಒಂದು ವೇಳೆ ಅಖಿಲೇಶ್ ಯಾದವ್, ಮಾಯಾವತಿ, ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ಗಾಂಧಿ ಒಂದಾದರೆ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲಾಲೂ ಮಾತಿನ ಲಹರಿ ಹರಿಯಬಿಟ್ಟಿದ್ದಾರೆ.
ಇತ್ತೀಚೆಗೆ ಹಲವಾರು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುವಲ್ಲಿ ಹೀನಾಯವಾಗಿ ಸೋತಿರುವ ರಾಹುಲ್ ಗಾಂಧಿ ಅವರ ಹೆಸರನ್ನು ಲಾಲೂ ಪ್ರಸಾದ್ ಯಾದವ್ ಅವರು ಉದ್ದೇಶಪೂರ್ವಕವಾಗಿಯೇ ಪ್ರಸ್ತಾಪಿಸಿಲ್ಲ.

ಲಾಲೂ ಅವರ ಮಾತುಗಳು ಸಾಕಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ. ಉತ್ತರಪ್ರದೇಶ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಏನೂ ಕರಾಮತ್ತು ಮಾಡಲು ಆಗಿರಲಿಲ್ಲ. ಪಂಜಾಬ್ ಒಂದನ್ನು ಹೊರತುಪಡಿಸಿದರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಸರಕಾರ ರಚಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿತ್ತು.

ಅಖಿಲೇಶ್ ಯಾದವ್ ಮತ್ತು ಮಾಯಾವತಿ ದೀದಿ ಒಂದಾಗುವ ಲಕ್ಷಣಗಳು ತುಂಬಾ ಇವೆ. ಅವರಿಬ್ಬರೂ ಒಂದಾದರೆ (ಎನ್ ಡಿಎ) ಕಥೆ ಮುಗಿದಂತೆಯೆ ಎಂದು ಲಾಲೂ ಪ್ರಸಾದ್ ಯಾದವ್ ತಮ್ಮ ಶೈಲಿಯಲ್ಲಿ ಹೇಳಿದ್ದಾರೆ.












Click it and Unblock the Notifications