ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಕಾಲೇಜು ಮಾಜಿ ಪ್ರಾಂಶುಪಾಲ ಬಂಧನ
ಕೋಲ್ಕತ್ತಾ, ಸೆಪ್ಟೆಂಬರ್ 15: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ, ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿರುವ ಕೋಲ್ಕತ್ತದ ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣದ ತನಿಖೆ ಕುರಿತು ಸುಪ್ರೀಂಕೋರ್ಟ್ ಸಹ ನಿಗಾವಹಿಸಿದ್ದು, ಪಶ್ಚಿಮ ಬಂಗಾಳದಲ್ಲಿ ವೈದ್ಯರ ಪ್ರತಿಭಟನೆಯು ನಡೆಯುತ್ತಿದೆ.
ಸಿಬಿಐ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಪ್ರಕರಣದ ಸಂಬಂಧ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಹಿಂದಿನ ಪ್ರಿನ್ಸಿಪಾಲ್ ಮತ್ತು ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಸಾಕ್ಷ್ಯಗಳ ನಾಶ ಮಾಡಲು ಯತ್ನಿಸಿದ ಆರೋಪದ ಅಡಿಯಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ವಿಳಂಬವಾಗಲು, ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಲು, ತನಿಖಾಧಿಕಾರಿಗಳಿಂದ ಕೆಲವು ಸಾಕ್ಷ್ಯಾಧಾರಗಳನ್ನು ಮರೆ ಮಾಚಿದ ಕಾರಣಕ್ಕೆ ಮಾಜಿ ಪ್ರಾಂಶುಪಾಲ ಸಂದೀಪ್ ಕುಮಾರ್ ಘೋಷ್ ಮತ್ತು ಪೊಲೀಸ್ ಅಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಸಂದೀಪ್ ಕುಮಾರ್ ಘೋಷ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ವೈದ್ಯರ ಪ್ರತಿಭಟನೆ: ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಿರಿಯ ವೈದ್ಯರ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿಗೆ ಸಹ ವೈದ್ಯರು ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡದೇ ಎಲ್ಲರೂ ಪ್ರತಿಭಟನೆ ಮುಂದುವರೆಸಿದ್ದು, ಆಸ್ಪತ್ರೆ ಆವರಣಕ್ಕೆ ವೈದ್ಯರ ಜೊತೆ ಮಾತುಕತೆ ನಡೆಸಲು ಮಮತಾ ಬ್ಯಾನರ್ಜಿ ಆಗಮಿಸಿದ್ದರು.
ವೈದ್ಯರ ಪ್ರತಿಭಟನೆ, ಸುಪ್ರೀಂಕೋರ್ಟ್ ಮೇಲ್ವಿಚಾರಣೆ ನಡೆಯುವೇ ಸಿಬಿಐ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಆದ್ದರಿಂದ ಶನಿವಾರ ಮಾಜಿ ಪ್ರಾಂಶುಪಾಲ ಸಂದೀಪ್ ಕುಮಾರ್ ಘೋಷ್ ಮತ್ತು ಪೊಲೀಸ್ ಅಧಿಕಾರಿಯನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದೆ.
ಈಗಾಗಲೇ ಸಿಬಿಐ ಮಾಜಿ ಪ್ರಾಂಶುಪಾಲ ಸಂದೀಪ್ ಕುಮಾರ್ ಘೋಷ್ರನ್ನು ಕಾಲೇಜಿನಲ್ಲಿ ಔಷಧ ಖರೀದಿ ಅವ್ಯವಹಾರ ಸೇರಿದಂತೆ ವಿವಿಧ ಅಕ್ರಮಗಳ ಕುರಿತು ವಿಚಾರಣೆ ನಡೆಸಿದೆ. ಈಗ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪವನ್ನು ಸೇರಿಸಿಕೊಂಡು, ವಿಚಾರಣೆಯನ್ನು ಮಾಡುತ್ತಿದೆ. ಸಿಬಿಐ ಈಗಾಗಲೇ ಸಂದೀಪ್ ಕುಮಾರ್ ಘೋಷ್ರನ್ನು ಸುಳ್ಳುಪತ್ತೆ ಪರೀಕ್ಷೆಗೆ ಸಹ ಒಳಪಡಿಸಿದೆ.
ಕೋಲ್ಕತ್ತದ ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ತರಬೇತಿ ನಿರತ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆಗಸ್ಟ್ 9ರಂದು ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಲಾಗಿತ್ತು. ಘಟನೆಯ ಆರೋಪಿ ಸಂಜಯ್ ರಾಯ್ ಸ್ಥಳದಲ್ಲಿ ಸಂಚಾರ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಸಂದೀಪ್ ಕುಮಾರ್ ಘೋಷ್ ಮೊದಲು ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನವನ್ನು ನಡೆಸಿದ್ದರು. ಸಾಕ್ಷ್ಯವನ್ನು ನಾಶ ಮಾಡಿದ್ದಾರೆ, ಅಲ್ಲದೇ ಎಫ್ಐಆರ್ ತಡವಾಗಿ ದಾಖಲಾಗಲು ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ. ಸಂತ್ರಸ್ತೆಯ ಶವವನ್ನು ಕುಟುಂಬದವರಿಗೆ ತೋರಿಸಲು ಸಹ ತಡ ಮಾಡಿದ್ದಾರೆ.












Click it and Unblock the Notifications