ಅರುಣ್ ಜೇಟ್ಲಿಯವರ 10 ಪ್ರಮುಖ ಬಳುವಳಿಗಳು!
ಬೆಂಗಳೂರು, ಫೆಬ್ರವರಿ 01 : ವಿತ್ತ ಸಚಿವ ಅರುಣ್ ಜೇಟ್ಲಿಯವರ 5ನೇ ಬಜೆಟ್ ಅನ್ನು ಕೇಂದ್ರದಲ್ಲಿರುವ ಆಡಳಿತ ಪಕ್ಷದವರು ಹಾಡಿ ಹೊಗಳುತ್ತಿದ್ದರೆ, ವಿರೋಧ ಪಕ್ಷದವರು ಎಂದಿನಂತೆ ತೆಗಳಿ ಆಯವ್ಯಯ ಪತ್ರವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಇವೆರಡರ ನಡುವೆ ಹೇಗೆ ಪ್ರತಿಕ್ರಿಯೆ ಕೊಡಬೇಕೆಂಬುದೇ ತಿಳಿಯದಂತೆ ಶ್ರೀಸಾಮಾನ್ಯರಿದ್ದಾರೆ.
ದೇಶದ ಬಡಬಗ್ಗರು, ಹಿರಿಯ ನಾಗರಿಕರು, ಸಂಕಷ್ಟದಲ್ಲಿರುವ ಕೃಷಿಕರನ್ನು ಗಮನದಲ್ಲಿಟ್ಟುಕೊಂಡು ಅರುಣ್ ಜೇಟ್ಲಿಯವರು ಬಜೆಟ್ ಮಂಡಿಸಿರುವ ಸುಸ್ಪಷ್ಟವಾಗಿದೆ. ಬಡಮಧ್ಯಮ ವರ್ಗದವರು, ಮಧ್ಯಮ ವರ್ಗದವರ ಸ್ಥಿತಿ ಕೈಯಲ್ಲಿ ಬೆಣ್ಣೆ ಹಿಡಿದುಕೊಂಡು ಮೂಗಿಗೆ ತುಪ್ಪ ಸವರಿಸಿಕೊಂಡ ಸ್ಥಿತಿಯಾಗಿದೆ.
ಬಜೆಟ್ ಮಂಡನೆ ಮಾಡುವಾಗಲೆಲ್ಲ ಆಗಾಗ ಮೇಜು ಕುಟ್ಟುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಂಡನೆ ಮುಗಿಯುತ್ತಿದ್ದಂತೆ, ಜೇಟ್ಲಿಯವರ ಬಜೆಟ್ ಕೃಷಿಕರ ಸ್ನೇಹಿ, ಬಡವರು ಶ್ರೀಸಾಮಾನ್ಯರ ಪರವಾಗಿದೆ, ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ ಮತ್ತು ಅಭಿವೃದ್ಧಿ ಪರವಾಗಿದೆ ಎಂದು ಶಭಾಶ್ ನೀಡಿದ್ದಾರೆ. ಬೇರೆ ಇನ್ನೇನು ಮಾಡಲು ಸಾಧ್ಯ?
ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದ ಕರ್ನಾಟಕದ ಜನತೆಗೆ ಹಳೇ ರೈಲು ಬೋಗಿಯ ಶೌಚಾಲಯದ ಪಕ್ಕದಲ್ಲಿಯೇ ಕುಳಿತಂತಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಇರುವಾಗ ಇದರ ಲಾಭವನ್ನು ಜೇಟ್ಲಿಯವರು ಪಡೆಯಬಹುದಿತ್ತು.
ಇನ್ನು, ಲೋಕಸಭೆಯನ್ನೇ ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿರುವ ಈ ಆಯವ್ಯಯದ ಇತರ ಪ್ರಮುಖ ಅಂಶಗಳೇನು ನೋಡೋಣ ಬನ್ನಿ.

ಶಿಕ್ಷಣ ಸೆಸ್ ಏರಿಸಿ ಬರೆ ಎಳೆದ ಜೇಟ್ಲಿ
ದೇಶದ ಜನರಿಗೆ ಉತ್ತಮ ಶಿಕ್ಷಣ ಸಿಗಬೇಕು, ಕಪ್ಪು ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಅಳವಡಿಸುವಂತಾಗಬೇಕು, ಭಾರತದ ಬಡ ಜನರ ಆರೋಗ್ಯ ಚೆನ್ನಾಗಿದ್ದರೆ ದೇಶದ ಆರೋಗ್ಯವೂ ದಿವಿನಾಗಿರುತ್ತದೆ ಎಂದು ಹೇಳುತ್ತಲೇ, ಶಿಕ್ಷಣ ಮತ್ತು ಆರೋಗ್ಯ ಸೆಸ್ ಅನ್ನು ಶೇ.3ರಿಂದ ಶೇ.4ಕ್ಕೆ ಏರಿಸಿ ಜೇಟ್ಲಿ ತಣ್ಣಗೆ ಬರೆ ಎಳೆದಿದ್ದಾರೆ.

ಬೆಂಗಳೂರು ಸಬ್ ಅರ್ಬನ್ ರೈಲಿಗಾಗಿ ಒಂದಿಷ್ಟು
161 ಕಿ.ಮೀ. ಉದ್ದರ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗಾಗಿ 17 ಸಾವಿರ ಕೋಟಿ ರುಪಾಯಿ ನಿಯೋಜನೆಗೊಂಡಿದ್ದು ಬಿಟ್ಟರೆ, ಕರ್ನಾಟಕಕ್ಕೆ ಪ್ರತ್ಯೇಕವಾಗಿ ಸಿಕ್ಕಿದ್ದು ಏನೂ ಇಲ್ಲ. ಹಲವಾರು ರೈಲು ಯೋಜನೆ ಅನುಮೋದನೆ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜನತೆಗೆ ಅರುಣ್ ಜೇಟ್ಲಿಯವರು ಭಾರೀ ನಿರಾಶೆ ಮಾಡಿದ್ದಾರೆ. ಹಳಿಯೂ ಇಲ್ಲ, ರೈಲೂ ಇಲ್ಲ.

50 ಕೋಟಿ ಬಡ ಜನತೆಗೆ ಸಹಾಯ
ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಡಿ 10 ಕೋಟಿ ಬಡಜನತೆಯನ್ನು ತರಲಾಗುತ್ತಿದೆ. ಅಲ್ಲದೆ, 5 ಲಕ್ಷ ರುಪಾಯಿಯವರೆಗೆ ವೈದ್ಯಕೀಯ ಮರುಪಾವತಿ ಮಾಡಲಾಗುತ್ತಿದ್ದು, ಇದು ಜಗತ್ತಿನ ಅತೀದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. ಇದರಿಂದ 50 ಕೋಟಿ ಜನತೆಗೆ ಸಹಾಯವಾಗಲಿದೆ.

ಮೊಬೈಲ್, ಟಿವಿ, ವಿಡಿಯೋ ಗೇಮ್ ತುಟ್ಟಿ
ಮೇಕ್ ಇನ್ ಇಂಡಿಯಾ ಅಭಿಯಾನದಡಿ ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಮೊಬೈಲ್ ಫೋನ್ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.20ಕ್ಕೆ ಏರಿಸಲಾಗಿದೆ. ಅಲ್ಲದೆ ಟಿವಿ, ವಿಡಿಯೋ ಗೇಮ್ಸ್ ಮೇಲಿನ ಆಮದು ಸುಂಕವನ್ನೂ ಹೆಚ್ಚಿಸಲಾಗಿದೆ. ಇದರರ್ಥ, ಮೊಬೈಲ್ ಫೋನ್, ಟಿವಿ ದರಗಳು ಗಗನಮುಖಿಯಾಗಲಿವೆ.

ಸಂಬಳದಾರರಿಗೆ ಕೈಕೊಟ್ಟ ಜೇಟ್ಲಿ
ಸಂಬಳದ ಮೇಲೆ ಅವಲಂಬಿತವಾಗಿರುವ ಎಂಟು ಕೋಟಿಗೂ ಅಧಿಕ ಜನರು ಅರುಣ್ ಜೇಟ್ಲಿ ಬಜೆಟ್ಟನ್ನು ಸಾರಾಸಗಟಾಗಿ ತಿರಸ್ಕರಿಸುವಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ತೆರಿಗೆ ಮಿತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುತ್ತಿದ್ದ ಜೇಟ್ಲಿ ಸಾಹೇಬರು ಈ ಬಾರಿ ಅದನ್ನು ಮುಟ್ಟದೆ ಬಿಟ್ಟಿದ್ದು ಸಂಬಳದಾರರ ಕಣ್ಣು ಕೆಂಪಾಗುವಂತೆ ಮಾಡಿದೆ. ತೆರಿಗೆ ಮಿತಿ ಕನಿಷ್ಠಪಕ್ಷ 2.5ರಿಂದ 3 ಲಕ್ಷಕ್ಕೆ ಏರುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಸ್ಟಾಂಡರ್ಡ್ ಡಿಡಕ್ಷನ್ 40 ಸಾವಿರ
ಪ್ರಸ್ತುತ ಜಾರಿಯಲ್ಲಿದ್ದ ಪ್ರಯಾಣ ಭತ್ಯೆ ಮತ್ತು ಮೆಡಿಕಲ್ ಬಿಲ್ ಮರುಪಾವತಿಯ ಬದಲಿಗೆ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 40 ಸಾವಿರ ರುಪಾಯಿಗೆ ಏರಿಸಲಾಗಿದೆ. ಇದರಿಂದ ಸಂಬಳ ಪಡೆಯುತ್ತಿರುವ 2.5 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ ಎಂಬುದು ಜೇಟ್ಲಿಯವರ ಅಂಬೋಣ.

ಹಿರಿಯ ನಾಗರಿಕೆಗೆ ಕೈತುಂಬ ಲಾಭ
ಹಿರಿಯ ನಾಗರಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸಲ್ಲಿ 50 ಸಾವಿರ ರು.ವರೆಗೆ ಠೇವಣಿ ಮಾಡಿದರೆ ತೆರಿಗೆ ಬೀಳುವುದಿಲ್ಲ. ಸೆಕ್ಷನ್ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ಮಿತಿಯನ್ನು 30 ಸಾವಿರದಿಂದ 50 ಸಾವಿರಕ್ಕೆ ಏರಿಸಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ಹಿರಿಯ ನಾಗರಿಕರ ಖರ್ಚಿನ ಮಿತಿಯನ್ನು 60 ಸಾವಿರದಿಂದ 80 ಸಾವಿರಕ್ಕೆ ಏರಿಸಲಾಗಿದೆ. ಹಿರಿಯ ನಾಗರಿಕರು ಇದ್ದಲ್ಲಿಂದಲೇ ಜೇಟ್ಲಿ ಮತ್ತು ಮೋದಿಯನ್ನು ಹರಸಿರುತ್ತಾರೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಜೇಬು ಭರ್ತಿ
ಅಚ್ಚರಿ ತಂದಿದ್ದೆಂದರೆ, ರಾಷ್ಟ್ರಪತಿ (1.5 ಲಕ್ಷದಿಂದ 5 ಲಕ್ಷ), ಉಪರಾಷ್ಟ್ರಪತಿ (4 ಲಕ್ಷ), ರಾಜ್ಯಪಾಲರು (3.5 ಲಕ್ಷ) ಮತ್ತು ಸಂಸದರ ಸಂಬಳದಲ್ಲಿ ಏರಿಕೆ. ಇದನ್ನೊಂದನ್ನು ವಿರೋಧ ಪಕ್ಷದವರೂ ಪಕ್ಷಭೇದ ಮರೆತು ಮೇಜುಕುಟ್ಟಿ ಸಂತೋಷ ವ್ಯಕ್ತಪಡಿಸಿದರು. ಸಂಸದ ಸಂಬಳ ಪ್ರತಿ 5 ವರ್ಷಗಳಿಗೊಮ್ಮೆ ಹಣದುಬ್ಬರ ಗಮನಿಸಿ ಏರಿಸಲಾಗುವುದು.

ಜಾಣ ವಿದ್ಯಾರ್ಥಿಗಳಿಗೆ ಜೇಟ್ಲಿ ಮಣೆ
ಭಾರತದಲ್ಲಿ ಪ್ರತಿಭಾ ಪಲಾಯನವನ್ನು ತಡೆಯುವ ಉದ್ದೇಶದಿಂದ ಪ್ರಮುಖ ಕಾಲೇಜುಗಳಲ್ಲಿ ಬಿಟೆಕ್ ಮಾಡುತ್ತಿರುವ ಜಾಣ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಐಟಿ ಮತ್ತು ಐಐಎಸ್ಸಿಗಳಲ್ಲಿ ಉನ್ನತ ಶಿಕ್ಷಣ ದೊರಕುವಂತೆ ಮಾಡುವುದು. ಅವರಿಗೆ ಉತ್ತಮ ಫೆಲೋಶಿಪ್ ಕೂಡ ಸಿಗುತ್ತದೆ.

ಕೃಷಿಕರಿಗೆ ಒಂದೂವರೆ ಪಟ್ಟು ಲಾಭ
ಎಲ್ಲಕ್ಕಿಂತ ಹೆಚ್ಚಾಗಿ ಕೃಷಿಕರ ಶ್ರಮಕ್ಕೆ ತಕ್ಕ ಫಲ ದೊರಕಿಸಿ ಕೊಡುವ ನಿಟ್ಟಿನಲ್ಲಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮಾತ್ರವಲ್ಲ, ಮಾರುಕಟ್ಟೆ ದರಕ್ಕಿಂತ ಒಂದೂವರೆ ಪಟ್ಟು ಹಣ ಅವರಿಗೆ ಸಿಗುವಂತಾಗಬೇಕು. 100 ಕೋಟಿಗೂ ಹೆಚ್ಚು ಆದಾಯವಿರುವ ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100ರಷ್ಟು ಆದಾಯ ತೆರಿಗೆ ವಿನಾಯಿತಿ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications