ಮಾಯಾವತಿ ಸಂಸತ್ ಪ್ರವೇಶಕ್ಕೆ ಅಡ್ಡಗಾಲು ಹಾಕಲು ಬಿಜೆಪಿ ನಿರ್ಧಾರ
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಂಭವ. ಅವರು ಹೊಂದಿರುವ ಫಿಲ್ತೂರ್ ಸಂಸತ್ ಸ್ಥಾನ ಉಳಿಸಿಕೊಳ್ಳಲು ಈ ನಿರ್ಧಾರ.
ಲಖ್ನೋ, ಜುಲೈ 26: ಉತ್ತರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಸಾಧ್ಯತೆಗಳಿವೆ.
ಇತ್ತೀಚೆಗೆ, ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಉತ್ತರ ಪ್ರದೇಶದ ಬಿಎಸ್ ಪಿ ನಾಯಕಿ ಮಾಯಾವತಿ ಅವರು ಸಂಸತ್ತಿಗೆ ಸ್ಪರ್ಧಿಸಲು ಅಣಿಯಾಗಿರುವ ಹಿನ್ನೆಲೆಯಲ್ಲಿ ಮೌರ್ಯ ರಾಜಿನಾಮೆ ತಂತ್ರಗಾರಿಕೆಯನ್ನು ಉಪಯೋಗಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಈ ರಾಜಿನಾಮೆಯ ಹಿಂದೆ ಸ್ವಾರಸ್ಯಕರ ವಿಚಾರವೊಂದಿದೆ. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಮೌರ್ಯ ಅವರು, ಫಿಲ್ತೂರ್ ನ ಸಂಸದರಾಗಿದ್ದರು. ಉತ್ತರ ಪ್ರದೇಶದಲ್ಲಿ ಮಾರ್ಚ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಯಿತು.
ಆದರೂ, ಅವರು ತಾವು ಹೊಂದಿದ್ದ ಸಂಸತ್ ಸದಸ್ಯತ್ವದ ಸ್ಥಾನವನ್ನು ತ್ಯಜಿಸಿಲ್ಲ. ಆ ಸ್ಥಾನಕ್ಕೆ ಅವರಿಗೆ ರಾಜಿನಾಮೆ ನೀಡಲು ಆರು ತಿಂಗಳುಗಳ ಕಾಲಾವಕಾಶ ಇರುವುದರಿಂದ, ಈ ವರ್ಷ ಸೆಪ್ಟಂಬರ್ ನಲ್ಲಿ ಅವರು ರಾಜಿನಾಮೆ ಸಲ್ಲಿಸಬಹುದಾಗಿದೆ.
ಅವರು ಆ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದನ್ನು ಮಾಯಾವತಿ ಕಾಯುತ್ತಿದ್ದಾರೆ. ಮೌರ್ಯ ಅವರಿಂದ ಫಿಲ್ತೂರ್ ಕ್ಷೇತ್ರ ತೆರವಾದರೆ, ಆಗ ಘೋಷಣೆಯಾಗುವ ಉಪಚುನಾವಣೆಯಲ್ಲಿ ತಾವು ಫಿಲ್ತೂರ್ ನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ ಪುನಃ ಸಂಸತ್ ಪ್ರವೇಶಿಸುವ ಇರಾದೆ ಅವರದ್ದಾಗಿದೆ.
ಈ ವಿಚಾರ ಬಿಜೆಪಿ ಪಾಳಯಕ್ಕೆ ಗೊತ್ತಾಗಿ, ಮೌರ್ಯ ಅವರಿಂದ ಫಿಲ್ತೂರ್ ಸಂಸತ್ ಸ್ಥಾನ ತೆರವಾಗದಂತೆ ನೋಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಮೌರ್ಯ ಅವರು ಈಗ ಹೊಂದಿರುವ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಿಸಿ, ಅವರ ಸಂಸದ ಸ್ಥಾನವನ್ನು ಉಳಿಸಿಕೊಂಡು ಆನಂತರ, ಅವರಿಗೆ ಕೇಂದ್ರದಲ್ಲಿ ಮಂತ್ರಿ ಪದವಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ, ಮಾಯಾವತಿ ಅವರನ್ನು ರಾಜಕೀಯವಾಗಿ ಎಲ್ಲೆಲ್ಲಿ ಹಿಂದಿಡಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ದಲಿತರ ವಿರುದ್ಧದ ದಬ್ಬಾಳಿಕೆ ವಿರುದ್ಧ ರಾಜ್ಯಸಭೆಯಲ್ಲಿ ದನಿಯೆತ್ತಲು ಅವಕಾಶ ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಮಾಯಾವತಿ, ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.












Click it and Unblock the Notifications