ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಪರಾರಿ ಪ್ರಕರಣ: ಆರೋಪಿ ಶಾರುಖ್ ಸೈಫಿಯನ್ನು ಪೊಲೀಸರು ಬಂಧಿಸಿದ್ದು ಹೇಗೆ?
ಮುಂಬೈ ಏಪ್ರಿಲ್ 5: ಕೇರಳ ರೈಲಿನಲ್ಲಿ ಪ್ರಯಾಣಿಕನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಕಳೆದ ಭಾನುವಾರ ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಸಹಪ್ರಯಾಣಿಕನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ, ಇದರಿಂದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು ಎಂಟು ಜನ ಗಾಯಗೊಂಡಿದ್ದರು. ಸದ್ಯ ಈ ಘಟನೆಯ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಏಪ್ರಿಲ್ 4 ಮತ್ತು 5 ರ ಮಧ್ಯರಾತ್ರಿ ಮಹಾರಾಷ್ಟ್ರದ ರತ್ನಗಿರಿ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಸ್ಥಳದಿಂದ ಮಹಾರಾಷ್ಟ್ರ ಪೊಲೀಸರಿಗೆ ಕೇರಳ ಪೊಲೀಸರು ಆರೋಪಿಯ ಸ್ಕೆಚ್ ಚಿತ್ರವನ್ನು ರವಾನಿಸಿದ್ದರು. ಕೇರಳ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಅವರು ಆತನ ಫೋಟೋವನ್ನು ಹಂಚಿಕೊಂಡಿದ್ದರು. ಘಟನೆ ನಡೆದ ಸ್ಥಳದಿಂದ ಸುಮಾರು 1,000 ಕಿಲೋಮೀಟರ್ ದೂರದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳಿಂದ ಮಾಹಿತಿ ಪಡೆದ ಕೂಡಲೆ ಕೇರಳ ಪೊಲೀಸರ ತಂಡ ರತ್ನಗಿರಿ ತಲುಪಿದ್ದು, ಆರೋಪಿಯನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಶಾರುಖ್ ಸೈಫಿಯನ್ನು ಪೊಲೀಸರು ಬಂಧಿಸಿದ್ದು ಹೇಗೆ?
ಕೋಝಿಕ್ಕೋಡ್ನಲ್ಲಿ ಅಲಪುಳ-ಕಣ್ಣೂರು ಎಕ್ಸ್ಪ್ರೆಸ್ ರೈಲಿನಲ್ಲಿ ಸಹ-ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ನಂತರ ಆರೋಪಿ ಶಾರುಖ್ ಸೈಫಿ ಪರಾರಿಯಾಗಿದ್ದನು. ಪೊಲೀಸರು ಮಂಗಳವಾರ ರತ್ನಗಿರಿಯಲ್ಲಿ ಆತನ ಸ್ಥಳವನ್ನು ಪತ್ತೆಹಚ್ಚಿದ್ದರು.
ತಲೆಗೆ ಗಾಯವಾಗಿರುವ ಆರೋಪಿ ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದನು ಎಂಬ ಮಾಹಿತಿ ಲಭ್ಯವಾಗಿತ್ತು. ಬಳಿಕ ಚಿಕಿತ್ಸೆ ಪೂರ್ಣಗೊಳ್ಳದೆ ಆಸ್ಪತ್ರೆಯಿಂದ ಓಡಿ ಹೋಗಿದ್ದ ಎಂದು ತಿಳಿದು ಬಂದಿತ್ತು. ಈ ಮಾಹಿತಿ ಆಧಾರದ ಮೇಲೆ ರತ್ನಗಿರಿ ಪ್ರದೇಶದಲ್ಲಿ ಶೋಧ ನಡೆಸಲಾಗಿದ್ದು, ಶಾರುಖ್ ಸೈಫಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರ್ಪಿಎಫ್ ವಶದಲ್ಲಿದ್ದ ಆರೋಪಿಯನ್ನು ವಿಚಾರಣೆ ಮಾಡಲು ಕೇರಳ ಪೊಲೀಸರು ರತ್ನಗಿರಿ ತಲುಪಿದ್ದಾರೆ.
ಕೇರಳ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಹೇಗೆ?
ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕೋಝಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ವಾದ ವಿವಾದ ಉಂಟಾಗಿ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಶಂಕಿತ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಗ್ವಾದದ ನಂತರ ಶಂಕಿತನು ಭಾನುವಾರ ರಾತ್ರಿ 9:30 ರ ಸುಮಾರಿಗೆ ರೈಲಿನ ಡಿ 1 ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇತರ ಸಹ ಪ್ರಯಾಣಿಕರಲ್ಲಿ ಭಯವನ್ನು ಸೃಷ್ಟಿಸಿದ್ದಾನೆ. ಘಟನೆಯ ನಂತರ ಬೆಂಕಿಯು ಇತರ ಆಸನಗಳು ಮತ್ತು ಲಗೇಜ್ಗಳಿಗೆ ತ್ವರಿತವಾಗಿ ಹರಡಿದೆ. ಕೋಚ್ಗೂ ಬೆಂಕಿ ಆವರಿಸಿದೆ.

ಕೇರಳ ರೈಲು ಘಟನೆ: 3 ಸಾವು, ಹಲವರಿಗೆ ಗಾಯ
ಇದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದು, ಐವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಹಾಗೂ ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲಿನಲ್ಲಿ ಹೀಗೊಂದು ಘಟನೆ ನಡೆದಿದೆ ಎಂದು ತಿಳಿದ ಬಳಿಕ ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಕಣ್ಣೂರು ನಿಲ್ದಾಣದಲ್ಲಿ ರೈಲು ಕೋಚ್ಗಳನ್ನು ಪರಿಶೀಲಿಸಿದೆ ಮತ್ತು ಫೋರೆನ್ಸಿಕ್ ಪುರಾವೆಗಳನ್ನು ಸಂಗ್ರಹಿಸಿದೆ. ಘಟನೆಯ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನೂ ಎನ್ಐಎ ವಿಚಾರಣೆ ನಡೆಸಿದೆ. ಬಳಿಕ ಆರೋಪಿಯ ಪತ್ತೆಗೆ ತನಿಖೆ ತೀವ್ರಗೊಳಿಸಿತ್ತು.
ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಘಟನೆಯ ತನಿಖೆಯನ್ನು ತೀವ್ರಗೊಳಿಸಿದ ನಂತರ ಪ್ರಕರಣದಲ್ಲಿ ಶಂಕಿತನ ಬಗ್ಗೆ ಸ್ವೀಕರಿಸಿದ ಮಾಹಿತಿಯ ಮೇರೆಗೆ ಆರೋಪಿಯನ್ನು ಬಂಧಿಸಿದೆ.












Click it and Unblock the Notifications