ಕೇರಳದ ಮೂರು ಯುವತಿಯರ ನಿಗೂಢ ಸಾವಿನ ದುರಂತ
ತ್ರಿಸ್ಸೂರು, ಜುಲೈ 21: ಕೇರಳವಷ್ಟೇ ಅಲ್ಲದೆ ದೇಶದ ಪ್ರಮುಖ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡಿದ ಕೊನ್ನಿ ಎಂಬ ಬೆಟ್ಟಗಾಡು ಪ್ರದೇಶದ ಮೂವರು ಯುವತಿಯರ ನಾಪತ್ತೆ ಪ್ರಕರಣ ದುರಂತ ಅಂತ್ಯ ಕಂಡಿದೆ. ಮೂವರ ಪೈಕಿ ಬದುಕುಳಿದಿದ್ದ ಆರ್ಯ ಎಂಬ ಯುವತಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾವಿನ ನಿಗೂಢತೆ ಹಾಗೆ ಉಳಿದುಕೊಂಡಿದೆ.
ಕೇರಳದ ಪಥನಂತಿಟ್ಟ ಜಿಲ್ಲೆಯ ಕೊನ್ನಿ ಬೆಟ್ಟಗಾಡು ಪ್ರದೇಶದಿಂದ ಅಥಿರಾ, ರಾಜಿ ಹಾಗೂ ಆರ್ಯ ಕೆ ಸುರೇಶ್ ಎಂಬ ಮೂವರು ಯುವತಿಯರು ನಾಪತ್ತೆಯಾಗಿದ್ದರು. ಜುಲೈ 9ರಂದು ನಾಪತ್ತೆಯಾಗಿದ್ದ ಮೂವರು ಯುವತಿಯರನ್ನು ಹುಡುಕಿಕೊಂಡು ಕೇರಳ ಪೊಲೀಸರು ಬೆಂಗಳೂರಿಗೂ ಬಂದು ಹೋಗಿದ್ದರು. ಮೂವರ ಪೈಕಿ ಅಥಿರಾ ಹಾಗೂ ರಾಜಿ ಅವರ ಶವ ಜುಲೈ 13ರಂದು ಕೇರಳದ ರೈಲ್ವೆ ಹಳಿ ಮೇಲೆ ಸಿಕ್ಕಿತ್ತು.

ಮಲಂಕರ-ಲಖಿಡಿ ಪ್ರದೇಶದಲ್ಲಿ ಇಬ್ಬರ ಶವ ಪತ್ತೆಯಾಗಿತ್ತು, ಜೊತೆಗೆ ಸಮೀಪದಲ್ಲೇ ಗಾಯಗೊಂಡು ಪ್ರಜ್ಞೆ ತಪ್ಪಿಬಿದ್ದಿದ್ದ ಆರ್ಯ ಸುರೇಶ್ ರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ತ್ರಿಸ್ಸೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ಯ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಅದರೆ, ಈ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ ಹಾಗೂ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಆರ್ಯ ಗುಣಮುಖರಾದರೆ ಏನಾದರೂ ಸುಳಿವು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ನಿರಾಶೆಯಾಗಿದೆ.
ಆರ್ಯಗೆ ನಿಮೋನಿಯಾ ತಗುಲಿತ್ತು, ಆಕೆ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂದು ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ. ಬಾಲಗೋಪಾಲ್ ಆರ್ಯ ಹೇಳಿದ್ದಾರೆ.












Click it and Unblock the Notifications