ಕೇರಳ ಮಳೆ: ಸ್ವಾತಂತ್ರ್ಯೋತ್ಸವದಂದು 25 ಜನರ ಸಾವು
ಕೊಚ್ಚಿ, ಆಗಸ್ಟ್ 16: ಕೇರಳದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಕೇರಳದಲ್ಲಿ ನಿನ್ನೆ(ಆ.15) ಒಂದೇ ದಿನ ಒಟ್ಟು 25 ಜನ ಮೃತರಾಗಿದ್ದಾರೆ.
ಇದರೊಂದಿಗೆ ಈ ವರೆಗೆ ಮೃತರಾದವರ ಸಂಖ್ಯೆ ಒಟ್ಟು 67 ಕ್ಕೇರಿದೆ. ಬುಧವಾರ ಮಳೆ ಪ್ರಮಾಣ ಹೆಚ್ಚಿದ್ದರಿಂದ ವೈಯ್ನಾಡ್, ಕೊಳಿಕ್ಕೊಡೆ, ಕಣ್ಣೂರು, ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ ಮತ್ತು ಎರ್ನಾಕುಲಂ ಈ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ವರುಣನ ಅಬ್ಬರಕೆ ಬೆಚ್ಚಿದ ದೇವರ ಸ್ವಂತ ನಾಡು: ಮೃತರ ಸಂಖ್ಯೆ 47ಕ್ಕೆ
ಪ್ರವಾಹ ಪೀಡಿತ ಸ್ಥಳಗಳಲ್ಲಿ ಈಗಾಗಲೇ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಭಾರತೀಯ ನೌಕಾದಳದ 21 ತಂಡಗಳನ್ನು ನೇಮಿಸಿ, ರಕ್ಷಣಾ ಕಾರ್ಯ ಮಾಡಲಾಗುತ್ತಿದೆ.
ರಾಷ್ಟ್ರೀಯ ವಿಪತ್ತು ದಳ, ಭಾರತೀಯ ಸೇನೆಯ ಹೆಚ್ಚುವರಿ ಸಿಬ್ಬಂದಿಯನ್ನು ಕೇರಳಕ್ಕೆ ಕಳಿಸುವಂತೆ ಗೃಹ ಮಂತ್ರಿ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ. ಕೇರಳದ ಎಲ್ಲಾ ಜಲಾಶಯಗಳಲ್ಲೂ ನೀರಿನ ಮಟ್ಟ ಬಹುತೇಕ ಭರ್ತಿಯಾಗಿದ್ದು, ಈ ಭಾಗದಲ್ಲಿ ವಾಸವಿರುವ ಜನರಿಗೆ ಮುನ್ಸೂಚನೆ ನೀಡಲಾಗಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಕಾರ್ಯ ನಡೆಯುತ್ತಿದೆ.