ಕೇರಳದ ಕಲ್ಲಿಕೋಟೆಯಲ್ಲಿ ದಡಾರ ಭೀತಿ: ಎಂಟು ಮಕ್ಕಳಲ್ಲಿ ಸೋಂಕು
ಕಲ್ಲಿಕೋಟೆ ಜನವರಿ 11: ಮಲಪ್ಪುರಂ ನಂತರ ಉತ್ತರ ಕೇರಳದ ನೆರೆಯ ಕಲ್ಲಿಕೋಟೆ ಜಿಲ್ಲೆಯಲ್ಲಿ ಹೊಸ ದಡಾರ ಪ್ರಕರಣಗಳು ವರದಿಯಾಗಿವೆ. ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳು ಪೋಷಕರಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
ನಾದಪುರಂನ ಕುಟ್ಟಿಯಾಡಿ ಹೆಲ್ತ್ ಬ್ಲಾಕ್ನಲ್ಲಿ ಎಂಟು ಮಕ್ಕಳು ವೈರಲ್ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೆಚ್ಚಿನ ರೋಗಲಕ್ಷಣದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ದಡಾರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಕಾರ್ಯಪಡೆ ಮಂಗಳವಾರ ಇಲ್ಲಿ ಸಭೆ ನಡೆಸಿತು.
ಸಭೆಯಲ್ಲಿ ಲಸಿಕೆಯನ್ನು ಪಡೆಯದಿರುವ ಮಕ್ಕಳಿಗೆ ಆದಷ್ಟು ಬೇಗ ಅದನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಎನ್ ತೇಜ್ ಲೋಹಿತ್ ರೆಡ್ಡಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರೋಗ ಹರಡದಂತೆ ವಿವಿಧ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ರೋಗದ ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಲು ವಿವಿಧ ಸರ್ಕಾರಿ ಇಲಾಖೆಗಳ ಪ್ರಯತ್ನಗಳನ್ನು ಈಗಾಗಲೇ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೇರಳದಲ್ಲಿ ಕಾಣಿಸಿಕೊಂಡ ದಡಾರ ಪ್ರಕರಣಗಳು
ತಮ್ಮ ಮಕ್ಕಳಿಗೆ ಲಸಿಕೆ ಹಾಕುವಂತೆ ಜನರ ಮನವೊಲಿಸಲು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುವುದು. ಲಸಿಕೆ ತೆಗೆದುಕೊಳ್ಳದ ಮಕ್ಕಳಲ್ಲಿ ಈ ರೋಗವು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕುವಂತೆ ಸೂಚಿಸಲಾಗಿದೆ ಎಂದರು. ನೆರೆಯ ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ 460 ದಡಾರ ಪ್ರಕರಣಗಳು ವರದಿಯಾಗಿವೆ.

ದಡಾರ ಕಾಯಿಲೆಯ ಲಕ್ಷಣಗಳು ಯಾವವು?
ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕಾಗಿದ್ದು ಇದು ತಗುಲಿದ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತಗುಲಿದ ಮಕ್ಕಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳ ಸಮಸ್ಯೆ ಉಂಟಾಗಬಹುದು ಎಂದು ಸಿಡಿಸಿ ಹೇಳುತ್ತದೆ. ಈ ಸೋಂಕು ಹರಿಡಿದ 2 ರಿಂದ 3 ದಿನಗಳ ನಂತರ ಮಕ್ಕಳ ಬಾಯಲ್ಲಿ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. 3 ರಿಂದ 5 ದಿನಗಳಲ್ಲಿ ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗ ಹೀಗೆ ಕೆಂಪು ರಾಶಸ್ ದೇಹದ ಮೇಲು ಕಾಣಿಸಿಕೊಳ್ಳಬಹುದು.

ದಡಾರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ
ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹೀಗಾಗಿ ದಡಾರವನ್ನು ತಡೆಗಟ್ಟಲು ಮಕ್ಕಳಿಗೆ ಲಸಿಕೆ ನೀಡುವುದು ಉತ್ತಮ. 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಇದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ದಡಾರ ಲಕ್ಷಣಗಳು ಕಾಣಿಸಿಕೊಂಡರೆ ಪೋಷಕರು ತಡ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯನ್ನು ಪಡೆಯಬೇಕು.

ರೋಗ ಲಕ್ಷಣಗಳು ಕಂಡು ಬಂದ ಮಕ್ಕಳ ಕಾಳಜಿ
ದಡಾರ ಮಕ್ಕಳನ್ನು ಹೆಚ್ಚಾಗಿ ಬಾದಿಸುತ್ತದೆ. ಎನ್ ಎಚ್ ಎಸ್ ಪ್ರಕಾರ, ಮಗುವಿಗೆ ದಡಾರ ರೋಗ ನಿರ್ಣಯವಾದ ನಂತರ ವಿಶ್ರಾಂತಿ ನೀಡಬೇಕು. ಮಗುವನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು ಉತ್ತಮ. ಒದ್ದೆ ಹತ್ತಿಯಿಂದ ಮಗುವಿನ ದೇಹ ಸ್ವಚ್ಛಗೊಳಿಸುವುದು. ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು ಅವಶ್ಯಕವಾಗಿದೆ.
ದಡಾರ ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ನಂತರ ಕೆಮ್ಮು ಅಥವಾ ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಸೋಂಕು ತಗುಲುತ್ತದೆ.












Click it and Unblock the Notifications