ಕೇರಳ ಪ್ರವಾಹ: ಸಂತ್ರಸ್ತ ಶಿಬಿರಗಳಿಗೆ ಭೇಟಿ ಇತ್ತ ರಾಹುಲ್ ಗಾಂಧಿ
ತಿರುವನಂತಪುರಂ, ಆಗಸ್ಟ್ 28: ಪ್ರವಾಹಪೀಡಿತ ಕೇರಳಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದಾರೆ. ಇಲ್ಲಿನ ಚೆಂಗನ್ನೂರ್ ಸಂತ್ರಸ್ತ ಶಿಬಿರಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರನ್ನು ಮಾತನಾಡಿಸಿ, ಸಾಂತ್ವನ ಹೇಳಿದರು.
ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಹಲವು ಸಂತ್ರಸ್ತ ಶಿಬಿರಗಳಿಗೆ ಭೇಟಿ ನೀಡಲಿದ್ದು, ಮೀನುಗಾರರು, ರಕ್ಷಣಾ ಸಿಬ್ಬಂದಿ ಮತ್ತು ಸಂತ್ರಸ್ತರಿಗಾಗಿ ಹಗಲಿರುಳು ಶ್ರಮಿಸಿದ ಸಂಘಸಂಸ್ಥೆಯ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಆಗಸ್ಟ್ 24 ರಂದೇ ರಾಹುಲ್ ಗಾಂಧಿ ಅವರ ಕೇರಳ ಪ್ರವಾಸ ನಿಗದಿಯಾಗಿತ್ತಾದರೂ, ಅವರು ವಿದೇಶಿ ಪ್ರವಾಸದಲ್ಲಿದ್ದಿದ್ದರಿಂದ ಅದನ್ನು ಮುಂದೂಡಲಾಗಿತ್ತು.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕೇರಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಮುಂತಾದವರು ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಇದುವರೆಗೂ ಸುಮಾರು 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ.












Click it and Unblock the Notifications