ಮುಲ್ಲಪೆರಿಯಾರ್: ನೀರಿನ ಮಟ್ಟ ಕಾಯ್ದುಕೊಳ್ಳಲು ತಮಿಳುನಾಡಿಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ಆಗಸ್ಟ್ 24: ಕೇರಳದ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 31ರವರೆಗೂ ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ 139 ಅಡಿ ಮಟ್ಟದಲ್ಲಿ ನೀರು ನಿರ್ವಹಣೆ ಮಾಡುವಂತೆ ತಮಿಳುನಾಡಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮುಲ್ಲಪೆರಿಯಾರ್ ಅಣೆಕಟ್ಟು ಸಮಿತಿಯ ನಿರ್ದೇಶನಗಳನ್ನು ಪಾಲಿಸುವಂತೆ ಹಾಗೂ ಸಹಕಾರ ನೀಡುವಂತೆ ತಮಿಳುನಾಡು ಮತ್ತು ಕೇರಳ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ತಮಿಳುನಾಡು ಸರ್ಕಾವು ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಏಕಾಏಕಿ ನೀರು ಹರಿಸಿದ್ದು ರಾಜ್ಯದಲ್ಲಿ ಪ್ರವಾಹದ ಸಂಕಷ್ಟ ಎದುರಾಗಲು ಕಾರಣ ಎಂದು ಕೇರಳ ಸುಪ್ರೀಂಕೋರ್ಟ್ಗೆ ಗುರುವಾರ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಆರೋಪಿಸಿತ್ತು.

ಆದರೆ, ತಮಿಳುನಾಡು ಮುಖ್ಯಮಂತ್ರಿ ಈ ಆರೋಪವನ್ನು ತಳ್ಳಿಹಾಕಿದ್ದರು. 'ಕೇರಳದ ಆರೋಪವು ಸುಳ್ಳು ಮತ್ತು ಆಧಾರರಹಿತ. ಮುಲ್ಲಪೆರಿಯಾರ್ನ ಒಂದು ಅಣೆಕಟ್ಟೆಯಿಂದ ನೀರು ಹೊರಬಿಟ್ಟರೆ ಇಡೀ ಕೇರಳಕ್ಕೆ ಅದು ಹೇಗೆ ನುಗ್ಗಲು ಸಾಧ್ಯ? ಕೇರಳದಲ್ಲಿನ 80 ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಹೊರಬಿಟ್ಟಿದ್ದೇ ಅಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲು ಕಾರಣ' ಎಂದು ವಾದಿಸಿದ್ದರು.
ಅಲ್ಲದೆ, ಕೇರಳದಲ್ಲಿ ಪ್ರವಾಹ ಸನ್ನಿವೇಶ ಉಂಟಾದ ಒಂದು ವಾರದ ಬಳಿಕ ಮುಲ್ಲಪೆರಿಯಾರ್ನಿಂದ ನೀರು ಹೊರಬಿಡಲಾಗಿತ್ತು. ನೀರಿನ ಮಟ್ಟ 139 ಅಡಿ, 141 ಅಡಿ ಹಾಗೂ 142 ಅಡಿಗೆ ತಲುಪಿದಾಗ ಮೂರು ಬಾರಿ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿತ್ತು. ನೀರನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗಿತ್ತು ಎಂದು ಪಳನಿಸ್ವಾಮಿ ಹೇಳಿದ್ದಾರೆ.












Click it and Unblock the Notifications