ವರುಣನ ಅಬ್ಬರಕೆ ಬೆಚ್ಚಿದ ದೇವರ ಸ್ವಂತ ನಾಡು: ಮೃತರ ಸಂಖ್ಯೆ 47ಕ್ಕೆ
ಎರ್ನಾಕುಲಂ, ಆಗಸ್ಟ್ 15: 'ದೇವರ ಸ್ವಂತ ನಾಡು' ಎಂದೇ ಕರೆಯಲಾಗುವ ಕೇರಳದಲ್ಲಿ ವರುಣ ದೇವನ ಆರ್ಭಟ ಮುಂದುವರಿದಿದ್ದು, ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ.
ಮಳೆಯಿಂದ ಉಂಟಾದ ಅನಾಹುತಗಳಿಂದಾಗಿ ನೂರಾರು ಜನರು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. 17,974 ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಮಲಪ್ಪುರಂನ ಪೆರಿಂಗವುನಲ್ಲಿ ಭೂಕುಸಿತದಿಂದ ಮನೆ ನಾಶವಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
ಮಳೆ ವಿರಾಮ ನೀಡುವ ಲಕ್ಷಣಗಳು ಕಾಣಿಸದ ಕಾರಣ ಇನ್ನಷ್ಟು ಅನಾಹುತಗಳು ಸಂಭವಿಸುವ ಅಪಾಯ ಎದುರಾಗಿದೆ. ಅನೇಕ ತಗ್ಗಿನ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಚರಿತ್ರೆಯಲ್ಲಿಯೇ ಮೊದಲು
ಇಂತಹ ಭೀಕರ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಿರುವುದು ಇದೇ ಮೊದಲ ಬಾರಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳದ ಚರಿತ್ರೆಯಲ್ಲಿಯೇ ಹಿಂದೆಂದೂ ಉಂಟಾಗದ ಸನ್ನಿವೇಶಕ್ಕೆ ನಾವು ಈಗ ಸಾಕ್ಷಿಯಾಗಿದ್ದೇವೆ. ಬಹುತೇಕ ಎಲ್ಲ ಅಣೆಕಟ್ಟುಗಳನ್ನು ಸಹ ತೆರೆಯಲಾಗಿದೆ. ನಮ್ಮ ಹೆಚ್ಚಿನ ನೀರು ಸಂಸ್ಕರಣಾ ಕೇಂದ್ರಗಳು ಜಲಾವೃತಗೊಂಡಿವೆ. ಮೋಟಾರ್ಗಳು ಹಾಳಾಗಿವೆ. ಜನರಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯವನ್ನು ಆದ್ಯತೆಯಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ವಿಜಯನ್ ಹೇಳಿದ್ದಾರೆ.

ಭರ್ತಿಯಾದ ಅಣೆಕಟ್ಟುಗಳು
ಕೇರಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 39 ಡ್ಯಾಂಗಳ ಪೈಕಿ 35 ಡ್ಯಾಂಗಳ ಗೇಟ್ಗಳನ್ನು ತೆರೆಯಲಾಗಿದ್ದು, ಭರ್ತಿಯಾಗಿರುವ ಜಲಾಶಯಗಳಿಂದ ನೀರನ್ನು ಹೊರಬಿಡಲಾಗುತ್ತಿದೆ.
ತಮಿಳುನಾಡಿನ ಮುಳ್ಳಪೆರಿಯಾರ್ ಅಣೆಕಟ್ಟು ಗರಿಷ್ಠ ಮಟ್ಟವಾದ 142 ಅಡಿಗೆ ತಲುಪಿದ್ದು, ಮಧ್ಯಾಹ್ನದಿಂದ ಅದರ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. ಈ ನೀರು ಕೇರಳದ ಇಡುಕ್ಕಿ ಜಲಾಶಯದತ್ತ ಹರಿಯುತ್ತಿದ್ದು, ಕೇರಳದ ಸಂಕಷ್ಟವನ್ನು ಹೆಚ್ಚಿಸಿದೆ.
ಇಡುಕ್ಕಿ ಜಲಾಶಯದ ಗರಿಷ್ಠ ಸಂಗ್ರಹಣ ಸಾಮರ್ಥ್ಯ 2,403 ಅಡಿಯಾಗಿದ್ದು, ಈಗಾಗಲೇ 2,398 ಅಡಿ ನೀರು ಸಂಗ್ರಹವಾಗಿದೆ.

ಪಿಣರಾಯಿ-ಪಳನಿಸ್ವಾಮಿ ಮಾತುಕತೆ
ಈ ಸಂಬಂಧ ಪಿಣರಾಯ್ ವಿಜಯನ್ ಅವರು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದು, ನೀರಿನ ಹೊರಹರಿವನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಅಣೆಕಟ್ಟಿನ ಸಾಮರ್ಥ್ಯವನ್ನು 139 ಅಡಿಗೆ ಇಳಿಸುವಂತೆ ಕೋರಿದ್ದಾರೆ.
ಅಳಪ್ಪುಳ ಕರಾವಳಿ ತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೈಪಿನ್ನ ಏಳು ಮಂದಿಯಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, ರಕ್ಷಣಾ ಪಡೆಗಳು ನಾಲ್ವರನ್ನು ರಕ್ಷಿಸಿದೆ.

ರೆಡ್ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆಯು ವಯನಾಡು, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಗುರುವಾರದವರೆಗೂ ರೆಡ್ ಅಲರ್ಟ್ (ಭಾರಿಯಿಂದ ವಿಪರೀತ ಮಳೆ) ಘೋಷಿಸಿದೆ.

ಸ್ಥಳಕ್ಕೆ ರಕ್ಷಣಾ ಪಡೆ
ರಾಷ್ಟ್ರೀಯ ವಿಪತ್ತು ರಕ್ಷಣಾ ದಳದ ನಾಲ್ಕು ತಂಡಗಳು ಪುಣೆಯಿಂದ ಕೇರಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯ ಹಾಗೂ ಸಂವಹನಕ್ಕೆ ಅಗತ್ಯವಾದ ಸಾಧನಗಳನ್ನು ಈ ತಂಡ ಕೊಂಡೊಯ್ದಿದೆ.

ರೈಲು, ವಿಮಾನ ಸಂಚಾರ ಅಸ್ತವ್ಯಸ್ತ
ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಮಂಗಳವಾರ ಜಲಾವೃತಗೊಂಡಿದ್ದು, ಆಗಸ್ಟ್ 18ರವರೆಗೂ ಇಲ್ಲಿಂದ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕುಳುತ್ತಿರೈ ಮತ್ತು ಎರನೀಲ್ ನಿಲ್ದಾಣಗಳ ನಡುವೆ ಭೂಕುಸಿತ ಉಂಟಾಗಿ ನಾಲ್ಕು ರೈಲುಗಳ ಸಂಚಾರ ವಿಳಂಬವಾಗಿದೆ. ಕೊಲ್ಲಂ, ಪುನಲೂರು, ಸೆಂಗೊಟ್ಟಾಯ್ ವಿಭಾಗದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಇದುವರೆಗೂ 8,316 ಕೋಟಿ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಕೇರಳ ಸರ್ಕಾರ ಅಂದಾಜಿಸಿದೆ.

ಮುಖ್ಯಮಂತ್ರಿ ಪರಿಹಾರ ನಿಧಿ
ಪ್ರವಾಹ, ಭೂಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೇರಳದ ಜನರಿಗೆ ನೆರವು ಸಂಗ್ರಹಿಸುವ ಉದ್ದೇಶದಿಂದ ಕೇರಳ ಸರ್ಕಾರವು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಲು ಕೋರಿದೆ. ಅದರ ವಿವರ ಈ ಕೆಳಗಿನಂತಿದೆ.
Name of Donee: CMDRF
Account number: 67319948232
Bank: State Bank of India
Branch: City branch, Thiruvananthapuram
IFSC Code: SBIN0070028
Swift Code: SBININBBT08
keralacmrdf@sbi - UPI












Click it and Unblock the Notifications