ಕೇರಳದಲ್ಲಿ ನಾಯಿ ಕಚ್ಚಿ ವೃದ್ಧೆ ಸಾವಿಗೆ ಮನೇಕಾ ಕಾರಣ?
ಬೆಂಗಳೂರು, ಆಗಸ್ಟ್ 24: ನಾಯಿಗಳ ಬಗ್ಗೆ ಸಹಾನುಭೂತಿ ತೋರುವ ಕಾರಣಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ವಿರೋಧ ಎದುರಿಸುವಂತಾಗಿದೆ. ಕೇರಳದಲ್ಲಿ 65 ವರ್ಷದ ಮಹಿಳೆಯೊಬ್ಬರು ನಾಯಿ ದಾಳಿಯಿಂದ ಮೃತಪಟ್ಟ ಮೇಲೆ ಅಲ್ಲಿನ ವ್ಯಾಪಾರಿಯೊಬ್ಬರು ಮನೇಕಾ ಗಾಂಧಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೂಡ ಆಗ್ರಹಿಸಿದ್ದಾರೆ.
ಆದರೆ, ಮನೇಕಾ ಗಾಂಧಿಯವರು ಮಾತ್ರ ನಾಯಿ ದಾಳಿಯಿಂದ ಸಾವಿಗೀಡಾಗುವುದಕ್ಕೆ ಸ್ವತಃ ಆಕೆಯೇ ಕಾರಣ ಎಂದು ಹೇಳಿದ್ದಾರೆ. ಸುದ್ದಿ ಮಾಧ್ಯಮವೊಂದರ ಜತೆ ಮಾತನಾಡುತ್ತಾ ಅವರು, ಆ ಮಹಿಳೆಗೆ ಏನಾಯಿತು ಅದು ದುಃಖಕರ ಸಂಗತಿ. ಆದರೆ ಆ ಕಾರಣಕ್ಕೆ ಆ ಬಡಾವಣೆಯ ಎಲ್ಲ ಬೀದಿ ನಾಯಿಗಳನ್ನು ಕೊಲ್ಲುವುದು ಮೂರ್ಖತನ. ನನಗೆ ಅನಿಸುತ್ತೆ, ಆ ಮಹಿಳೆ ಮಾಂಸ ತೆಗೆದುಕೊಂಡು ಹೋಗುತ್ತಿರಬಹುದು. ನಾಯಿಗಳು ಸುಮ್ಮನೆ ಬೆನ್ನಟ್ಟುವುದಿಲ್ಲ' ಎಂದಿದ್ದಾರೆ.[ಕೇರಳದ ಯುವಕ ಮಂಗಳೂರಿನಲ್ಲಿ ಒಂದು ತಿಂಗಳಿನಿಂದ ನಾಪತ್ತೆ]

ಬೀದಿ ನಾಯಿಗಳ ತೊಂದರೆ ವಿರುದ್ಧ ಕೇರಳ ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆ ನೇತೃತ್ವ ವಹಿಸಿರುವ ವ್ಯಾಪಾರಿ ಕೊಚೌಸೆಫ್ ಚಿತ್ತಲಪಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ, ಮನೇಕಾ ಗಾಂಧಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡಿರುವುದೇ ನಾಚಿಕೆಗೇಡು ಎಂದಿದ್ದಾರೆ.
ಆಕೆಯ ವಿರುದ್ಧ ಕೇಸು ದಾಖಲಿಸಬೇಕು. ಮಾಧ್ಯಮಗಳು ಮನೇಕಾ ಗಾಂಧಿ ಕಾರ್ಯಕ್ರಮಗಳನ್ನು ಬಾಯ್ಕಾಟ್ ಮಾಡಬೇಕು. ಆಕೆ ಏಕೆ ಹಾಗೆ ವರ್ತಿಸುತ್ತಾರೋ ತಿಳಿಯದು. ತೊಂದರೆ ಕೊಡುವ ನಾಯಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದಿದ್ದಾರೆ. ಕ್ರೂರ ನಾಯಿಗಳ ಕೂಡಿಹಾಕುವುದಕ್ಕೆ ಸರ್ಕಾರ ನಿರ್ಧರಿಸಿರುವುದನ್ನು ದೇಶದ ಅನಿಮಲ್ ವೆಲ್ಫೇರ್ ಬೋರ್ಡ್ ಅಧ್ಯಕ್ಷ ಆರ್.ಎಂ.ಖರಬ್ ವಿರೋಧಿಸಿರುವುದಕ್ಕೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.[ದರೋಡೆ ಮಾಡಿದ ಹಣ ಭಯೋತ್ಪಾದನಾ ಕೃತ್ಯಕ್ಕೆ ಪೂರೈಕೆ]
ಕೇರಳದಲ್ಲಿ ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬೀದಿ ನಾಯಿಗಳು ಕಡಿದಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ರೇಬೀಸ್ ನಿರೋಧಕ ಔಷಧಿ ಮಾರುವುದರಲ್ಲಿ ಕೇರಳ ರಾಜ್ಯ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ.












Click it and Unblock the Notifications