ಒಂದೇ ತಿಂಗಳಲ್ಲಿ ಕೇಜ್ರಿವಾಲ್ ಸರಕಾರದ 15 ಎಡವಟ್ಟುಗಳು
ನವದೆಹಲಿ, ಜ 4: ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ದೆಹಲಿಯ ಆಮ್ ಆದ್ಮಿ ಸರಕಾರ ಅನಗತ್ಯ ಕಾರಣಗಳಿಂದ ಸುದ್ದಿಯಲ್ಲಿದೆ. ದಿನಾ ಒಂದಲ್ಲಾ ಒಂದು ವಿವಾದಗಳನ್ನು ಅರವಿಂದ್ ಕೇಜ್ರಿವಾಲ್ ಮತ್ತು ಪಂಗಡ ಮೈಮೇಲೆ ಎಳೆದು ಕೊಳ್ಳುತ್ತಾ ಸರಕಾರವೀಗ ವಿವಾದದ ಗೂಡಾಗಿ ಪರಿಣಮಿಸಿದೆ.
ಸ್ವಚ್ಚ, ಸಮೃದ್ದ ಆಡಳಿತ ನೀಡುತ್ತೇವೆಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್ ಅವರಿಗೆ ಆಡಳಿತ ಯಂತ್ರದ ಕಡೆಗೆ ಗಮನ ಹರಿಸಲಾಗದೇ ತಮ್ಮ ಸರಕಾರದ ಶಾಸಕರ ಮತ್ತು ಸಚಿವರ ತಪ್ಪಿಗೆ ತೇಪೆ ಹಾಕುವುದೇ ಫುಲ್ ಟೈಂ ಕೆಲಸ ವಾಗಿರುವುದಂತೂ ನಿಜ.
ಆಗಿರುವ ಎಡವಟ್ಟಿಗಳಿಗೆಲ್ಲಾ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿರುವ ಕೇಜ್ರಿವಾಲ್ ಸರಕಾರ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವನ್ನು ಉರುಳಿಸಲು ಜೇಟ್ಲಿ ನೇತೃತ್ವದಲ್ಲಿ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡಿದೆ. (ಕೇಜ್ರಿವಾಲ್ ಸರಕಾರ ಉರುಳಿಸಲು 20 ಕೋಟಿ ಆಮಿಷ)
ದೆಹಲಿ ಜನತೆಯ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾರದೇ ಕೇಜ್ರಿವಾಲ್ ಸರಕಾರ ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಕಳೆದ ಒಂದು ತಿಂಗಳಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರಕಾರದ ಹದಿನೈದು ಎಡವಟ್ಟುಗಳು ಸ್ಲೈಡಿನಲ್ಲಿ....
(source: IBN)
ಪಕ್ಷದ ಸದಸ್ಯರ ಪಟ್ಟಿ
ಆಮ್ ಆದ್ಮಿ ಪಕ್ಷದ ಸದಸ್ಯರ ಪಟ್ಟಿಯಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಹಾಲಿವುಡ್ ನಟಿ ಆಂಜೆಲಿನಾ ಜೂಲಿ ಮುಂತಾದವರ ಹೆಸರಿರುವುದರಿಂದ ಆಮ್ ಆದ್ಮಿ ಮುಜುಗರಕ್ಕೀಡಾಗಿತ್ತು. ಆಗಿದ್ದ ಪ್ರಮಾದವನ್ನು ಕೂಡಲೇ ಸರಿಪಡಿಸಿದ ಪಕ್ಷ, ಸದಸ್ಯತ್ವದ ಪಟ್ಟಿಯಿಂದ ಇವರುಗಳ ಹೆಸರನ್ನು ತೆಗೆದು ಹಾಕಿತ್ತು.
ಪಕ್ಷದ ಸದಸ್ಯನಿಗೆ ಮಹಿಳೆಯಿಂದ ಕಪಾಳಮೋಕ್ಷ
ಪಕ್ಷದ ಶಾಸಕ ದಿನೇಶ್ ಮೊಹಾನಿಯಾಗೆ ಅವರು ಪ್ರತಿನಿಧಿಸುತ್ತಿರುವ ಕ್ಷೇತದ ಮಹಿಳೆಯೊಬ್ಬಳು ಕುಡಿಯುವ ನೀರಿನ ವಿಚಾರದಲ್ಲಿ ಕಪಾಳ ಮೋಕ್ಷ ಮಾಡಿದ್ದರು.
ಜನತಾ ದರ್ಬಾರ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಸ್ತೆಯಲ್ಲಿ ನಡೆಸುತ್ತಿದ್ದ ಜನತಾ ದರ್ಬಾರ್ ರದ್ದು. ವ್ಯಾಪಕವಾಗಿ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಜನತಾ ದರ್ಬಾರ್ ಕಾರ್ಯಕ್ರಮ ರದ್ದು.
ಸಂಸ್ಥಾಪಕ ಸದಸ್ಯೆಯ ರಾಜೀನಾಮೆ
ಆಫ್ರಿಕಾದ ಮಹಿಳೆಯ ಮೇಲೆ ನಡೆದ ಹಲ್ಲೆಗೆ ಪ್ರತಿಭಟನೆ ವ್ಯಕ್ತ ಪಡಿಸಿ ಪಕ್ಷದ ಸಂಸ್ಥಾಪನ ಸದಸ್ಯರಲ್ಲಿ ಒಬ್ಬರಾದ ಮಧು ಭಿದೂರಿ ರಾಜೀನಾಮೆ.
ಕಳಂಕಿತರ ಪಟ್ಟಿ
ದೇಶಾದ್ಯಂತ ವ್ಯಾಪಕ ಟೀಕೆ ಮತ್ತು ಸಂಚಲನಕ್ಕೊಳಗಾದ 25 ಕಳಂಕಿತರ ಪಟ್ಟಿಯನ್ನು ಕೇಜ್ರಿವಾಲ್ ಬಿಡುಗಡೆ ಮಾಡಿ ಮುಂದಿನ ಚುನಾವಣೆಯಲ್ಲಿ ಇವರನ್ನು ಸೋಲಿಸುವಂತೆ ಮತದಾರರಿಗೆ ಕರೆ. ಪಟ್ಟಿಯಲ್ಲಿದ್ದವರಿಂದ ಮಾನನಷ್ಟ ಮೊಕದ್ದಮೆಯ ಬೆದರಿಕೆ.
ಕೇಜ್ರಿವಾಲ್ ಸುದ್ದಿಗೋಷ್ಠಿ
ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ದೆಹಲಿ ಕಾಂಗ್ರೆಸ್ ಶಾಸಕನ ಪ್ರತಿಭಟನೆ. ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎನ್ನುವ ತುಂಬಿದ ಸುದ್ದಿಗೋಷ್ಠಿಯಲ್ಲಿ ಟೀಕೆ.
ಗಡಿಯಲ್ಲಿ ನಮ್ಮ ಸೇನೆ
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಸೇನೆಯ ಉಪಸ್ಥಿತಿಯ ಬಗ್ಗೆ ಪಕ್ಷದ ಮತ್ತೊಬ್ಬ ಸಂಸ್ಥಾಪಕ ಸದಸ್ಯ ಪ್ರಶಾಂತ್ ಭೂಷಣ್ ಅವರಿಂದ ಲೇವಡಿ.
ಪಕ್ಷದಲ್ಲಿ ಭಿನ್ನಮತೀಯರು
ಪಕ್ಷದೊಳಗಿನ ಭಿನ್ನಮತೀಯರದ್ದು ಮತ್ತೊಂದು ಸಮಸ್ಯೆ. ಪ್ರಮುಖವಾಗಿ ತಮಿಳುನಾಡಿನಲ್ಲಿ ಪಕ್ಷದೊಳಗಿನ ಎರಡು ಭಿನ್ನಮತೀಯ ಬಣ ಒಬ್ಬರೊಬ್ಬರನ್ನು ದೂಷಿಸುತ್ತಾ ಪೊಲೀಸ್ ಠಾಣೆಯ ಮೆಟ್ಟಲೇರಿದ್ದರು.
ಕೇರಳ ನರ್ಸ್ ಗಳನ್ನು ಟೀಕಿಸಿದ್ದು
ಕೇರಳ ನರ್ಸುಗಳನ್ನು ವ್ಯಂಗ್ಯವಾಡಿ ಪಕ್ಷದ ಕುಮಾರ್ ವಿಶ್ವಾಸ್ ತೀವ್ರ ಟೀಕೆ ಎದುರಿಸ ಬೇಕಾಯಿತು. ಕೇರಳದ ನರ್ಸುಗಳು ಕೊಳಕು ವ್ಯಕ್ತಿತ್ವದವರು ಎಂದು ಕಾರ್ಯಕ್ರಮವೊಂದರಲ್ಲಿ ವಿಶ್ವಾಸ್ ಹೇಳಿದ್ದರು.
ನರೇಂದ್ರ ಮೋದಿಯನ್ನು ಶಿವನಿಗೆ ಹೋಲಿಕೆ
ಕುಮಾರ್ ವಿಶ್ವಾಸ್, ನರೇಂದ್ರ ಮೋದಿ ಅವರನ್ನು ಶಿವನಿಗೆ ಹೋಲಿಸಿ ಮತ್ತೆ ಟೀಕೆಗೆ ಒಳಗಾಗಿದ್ದರು. ಮಲ್ಲಿಕಾ ಶರಬತಿ, ವಿಶ್ವಾಸ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದು ಕೊಂಡಿದ್ದರು.
ರಾತ್ರಿ ಇಡೀ ಶಿವರಾತ್ರಿ
ಮೂವರು ಪೊಲೀಸ್ ಅಧಿಕಾರಿಗಳನ್ನು ವಜಾ ಗೊಳಿಸ ಬೇಕೆಂದು ಕೇಜ್ರಿವಾಲ್ ರಾತ್ರಿ ಇಡೀ ನಡೆಸಿದ ಪ್ರತಿಭಟನೆ ಪಕ್ಷಕ್ಕೆ ಲಾಭ ಆಗುವ ಬದಲು ಮುಜುಗರ ತರಲಾರಂಭಿಸಿತು. ಇದನ್ನರಿತ ಕೇಜ್ರಿವಾಲ್ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
ಸೋಮನಾಥ್ ಭಾರ್ತಿ ಅವರ ನೈಟ್ ರೈಡ್
ಪಕ್ಷದ ಸಚಿವ ಸೋಮನಾಥ್ ಭಾರ್ತಿ ಅವರು ನಡೆಸಿದ ಆಫ್ರಿಕಾದ ಮಹಿಳೆಯರ ಮೇಲೆ ನಡೆಸಿದ ನೈಟ್ ರೈಡಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಸಾಕ್ಷಿಗಳನ್ನು ನಾಶ ಮಾಡಿದ್ದು
ಸೋಮನಾಥ್ ಭಾರ್ತಿ ಮೇಲೆ ಸಾಕ್ಷಿ ದಾಖಲೆಗಳನ್ನು ತಿದ್ದಿ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ.
ವಿನೋದ್ ಬಿನ್ನಿ ಘಟನೆ
ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಪಕ್ಷದ ಟಿಕೆಟಿನಿಂದ ಆಯ್ಕೆಯಾಗಿದ್ದ ವಿನೋದ್ ಕುಮಾರ್ ಬಿನ್ನಿ ಪಕ್ಷಕ್ಕೆ ಭಾರೀ ಮುಜುಗರ ತಂದ ಘಟನೆ.
ಬಿಜೆಪಿ ಮತ್ತು ಆಮಿಷ
ಬಿಜೆಪಿ ಸರಕಾರವನ್ನು ಉರುಳಿಸಲು ಇಪ್ಪತ್ತು ಕೋಟಿ ಆಮಿಷ ಒಡ್ದಿದ್ದರು ಎನ್ನುವ ಆರೋಪ ಆಮ್ ಆದ್ಮಿ ಪಕ್ಷದ ಶಾಸಕ ಮದನ್ ಲಾಲ್ ಅವರಿಂದ.