ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಭಾಷಣ: ಜನತೆಯ ಕ್ಷಮೆ ಕೇಳಿ, ಕೇಜ್ರಿ ಆಗ್ರಹ
ಶನಿವಾರ, ಡಿಸೆಂಬರ್ 31ರಂದು ದೇಶವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡುವ ವೇಳೆ ಜನತೆಯ ಕ್ಷಮೆ ಕೇಳಲಿ ಎಂದು ಕೇಜ್ರಿವಾಲ್ ಪಟ್ಟು ಹಿಡಿದಿದ್ದಾರೆ.
ಅಮೃತಸರ ಡಿ 30: ಹೊಸವರ್ಷಕ್ಕೆ ಮುನ್ನಾದಿನವಾದ ಡಿಸೆಂಬರ್ 31ರಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾಡುವ ಭಾಷಣದ ವೇಳೆ ಅಪನಗದೀಕರಣದ ವಿಚಾರದಲ್ಲಿ ರಾಷ್ಟ್ರದ ಜನತೆಯ ಕ್ಷಮೆ ಕೇಳಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ (ಡಿ 30) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೇಜ್ರಿವಾಲ್, ಪ್ರಧಾನಿಯವರ ನೋಟು ನಿಷೇಧದ ಕ್ರಮ ದೇಶ ಕಂಡ ಇದುವರೆಗಿನ ಅತಿದೊಡ್ಡ ಪ್ರಮಾದ. ಜನರ ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ಮೋದಿಯವರು ಭಾಷಣ ಮಾಡಿಕೊಂಡು ದೇಶವೆಲ್ಲಾ ಸುತ್ತುತ್ತಿದ್ದಾರೆಂದು ಕೇಜ್ರಿವಾಲ್ ಟೀಕಿಸಿದ್ದಾರೆ.

ನೋಟು ನಿಷೇಧದ ನಂತರ ಉಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಐವತ್ತು ದಿನದೊಳಗೆ ಪರಿಹರಿಸುವುದಾಗಿ ಹೇಳಿರುವ ಪ್ರಧಾನಿ ಮೋದಿ ಮಾತಿಗೆ ತಪ್ಪಿದ್ದಾರೆ. ಶನಿವಾರ, ಡಿಸೆಂಬರ್ 31ರಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಜನತೆಯ ಕ್ಷಮೆ ಕೇಳಲಿ ಎಂದು ಕೇಜ್ರಿವಾಲ್ ಪಟ್ಟು ಹಿಡಿದಿದ್ದಾರೆ.
ಶನಿವಾರ ರಾತ್ರಿ 7.30ಕ್ಕೆ ಪ್ರಧಾನಿ ಭಾಷಣ ಮಾಡಲಿದ್ದಾರೆ, ಜನರ ಕ್ಷಮೆ ಕೇಳದೇ ಮೋದಿವರಿಗೆ ಬೇರೆ ದಾರಿಯಿಲ್ಲ. ಸಹರಾ, ಬಿರ್ಲಾ ಮುಂತಾದ ಕಂಪೆನಿಗಳಿಂದ ಮೋದಿ ಲಂಚ ಪಡೆದಿದ್ದಾರೆನ್ನುವ ಆರೋಪವನ್ನು ಕೇಜ್ರಿವಾಲ್, ಮೋದಿ ವಿರುದ್ದ ಮಾಡಿದ್ದಾರೆ.
ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧಗೊಳಿಸುವಾಗ ಹದಿನಾಲ್ಕು ಲಕ್ಷ ಕೋಟಿ ಹಣ ಚಲಾವಣೆಯಲ್ಲಿತ್ತು. ಇದರಲ್ಲಿ ನಾಲ್ಕು ಲಕ್ಷ ಕೋಟಿ ಮೊತ್ತದ ಎರಡು ಸಾವಿರ ರೂಪಾಯಿ ನೋಟು ಮುದ್ರಣಗೊಂಡಿತ್ತು.
ಶನಿವಾರದ ಭಾಷಣದಲ್ಲಿ ಚಲಾವಣೆಯಲ್ಲಿದ್ದ ಬಾಕಿ ಹತ್ತು ಲಕ್ಷ ಕೋಟಿ ಮೊತ್ತವನ್ನು ಯಾವ ಅವಧಿಯೊಳಗೆ ಸರಕಾರ ಮುದ್ರಿಸಿ ಚಲಾವಣೆಗೆ ತರಲಿದೆ ಎನ್ನುವುದನ್ನು ದೇಶಕ್ಕೆ ಮೋದಿ ಸ್ಪಷ್ಟವಾಗಿ ತಿಳಿಸಲಿ ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.












Click it and Unblock the Notifications