6 ತಿಂಗಳ ನಂತರ ಬಾಗಿಲು ತೆರೆದ ಕೇದಾರನಾಥ ದೇಗುಲ; ಆನ್ಲೈನ್ನಲ್ಲೇ ದರ್ಶನ
ಡೆಹ್ರಾಡೂನ್, ಮೇ 17: ಹಿಂದೂ ಪವಿತ್ರ ಯಾತ್ರಾ ಸ್ಥಳ ಕೇದಾರನಾಥ ದೇವಾಲಯವನ್ನು ಸೋಮವಾರ ಬೆಳಿಗ್ಗೆ 5 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೆರೆಯಲಾಗಿದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಚಾರ್ ಧಾಮ್ ಯಾತ್ರೆ ರದ್ದುಗೊಳಿಸಲಾಗಿದೆ. ಯಾತ್ರಿಗಳಿಗೆ ದೇವಾಲಯಕ್ಕೆ ಅನುಮತಿ ನೀಡಲಾಗಿಲ್ಲ. ದೇಗುಲದಲ್ಲಿ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸುವುದರೊಂದಿಗೆ ಆನ್ಲೈನ್ನಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಉತ್ತರಾಖಂಡ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ತಿಳಿಸಿದೆ.
ಕೊರೊನಾ ಸೋಂಕು ಹೆಚ್ಚಳ: ಚಾರ್ ಧಾಮ್ ಯಾತ್ರೆ ರದ್ದು
ಆನ್ಲೈನ್ ಮೂಲಕವೇ ಬದ್ರಿನಾಥ್, ಕೇದಾರನಾಥ, ಯಮುನೋತ್ರಿ ಹಾಗೂ ಗಂಗೋತ್ರಿ ದೇವಾಲಯಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕೊರೊನಾ ಕಾರಣದಿಂದಾಗಿ ಕಳೆದ ವರ್ಷದ ನವೆಂಬರ್ 16ರಂದು ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೇ ಮೇ 14ರಂದು ಶಿವನ ಮೂರ್ತಿಯನ್ನು ಉಖಿಮಠದ ಓಂಕಾರೇಶ್ವರ ದೇಗುಲದಿಂದ ತರಲಾಗಿತ್ತು.
ಕೇದಾರನಾಥ ದೇವಾಲಯ ತೆರೆದಿರುವ ಕುರಿತು ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಅವರು ಟ್ವೀಟ್ ಮಾಡಿದ್ದು, ಇಂದು ಬೆಳಿಗ್ಗೆ 5 ಗಂಟೆಗೆ ಎಲ್ಲಾ ಆಚರಣೆಗಳೊಂದಿಗೆ ತೆರೆಯಲಾಗಿದೆ. ಎಲ್ಲರೂ ಆರೋಗ್ಯವಾಗಿರಲಿ ಎಂದು ಬಾಬಾ ಕೇದಾರನಾಥ ಅವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.