ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ
ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲಿ ಪುಟ್ಟ ಪುಟ್ಟ ಮೇಕೆಗಳನ್ನು ಮುದ್ದಿಸುತ್ತಾ, ಆಡಿ-ಕುಣಿಯುತ್ತಿದ್ದ ಎಂಟರ ಬಾಲಕಿ ಆಕೆ. ಸದಾ ತುಂಟಾಟವಾಡುತ್ತಿದ್ದ ಆಕೆ ಎಂದರೆ ಇಡೀ ಊರಿಗೂ ಅಚ್ಚುಮೆಚ್ಚು.
ಪಾದರಸದಂಥ ಆ ಪುಟ್ಟ ಬಾಲಕಿಯನ್ನೂ ಕಾಮದ ಕಣ್ಣಿಂದ ನೋಡುವ ನೀಚರ ಕೃತ್ಯಕ್ಕೆ ಆಕೆ ಬದುಕು ಮುಗಿಸಿದ್ದಾಳೆ. ಜನವರಿ ತಿಂಗಳಿನಲ್ಲಿ ನಡೆದ ಈ ಘಟನೆ ಇದೀಗ ದೇಶದಾದ್ಯಂತ ಚರ್ಚೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿಭಟನೆಯೂ ನಡೆದಿದೆ. ಕಾಂಗ್ರೆಸ್ ಮಧ್ಯರಾತ್ರಿ ನಡೆಸಿದ ಪ್ರತಿಭಟನೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರೂ ಭಾಗವಹಿಸಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಜಮ್ಮು ಕಾಶ್ಮೀರದ ಕತುವಾ ಎಂಬಲ್ಲಿ ಜನವರಿ ತಿಂಗಳ ಆರಂಭದಲ್ಲಿ ಮನೆಯ ಪಕ್ಕದ ಕಾಡಿನಿಂದ ಕುದುರೆಗಳನ್ನು ಕರೆತರಲು ತೆರಳಿದ್ದ ಆ ಪುಟ್ಟ ಬಾಲಕಿ ನಾಪತ್ತೆಯಾಗಿದ್ದಳು. ಸ್ಥಳೀಯರೆಲ್ಲ ಸೇರಿ ಆಕೆಯನ್ನು ಹುಡುಕಲು ಪ್ರಯತ್ನಿಸಿದರೂ ಆಕೆ ಸಿಗದಿದ್ದಾಗ ಆತಂಕಗೊಂಡ ಆಕೆಯ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಲು ನಿರಾಕರಿಸಿದ ಪೊಲೀಸರು ನಿಮ್ಮ ಮಗಳು ಯಾವುದಾದರೂ ಹುಡುಗನೊಂದಿಗೆ ಓಡಿಹೋಗಿರಬಹುದು ಎಂದು ಅಸಭ್ಯವಾಗಿ ಮಾತನಾಡಿದ್ದರು. ನಂತರ ಒತ್ತಡ ಹೆಚ್ಚಾದಾಗ ದೂರು ಸ್ವೀಕರಿಸಿದ್ದರು. ನಂತರ ಜನವರಿ 23 ರಂದು ಆಸಿಫಾ ಮೃತದೇಹ ಒಂದು ಪೊದೆಯಲ್ಲಿ ಪತ್ತೆಯಾಗಿತ್ತು. ಆಕೆಯ ವೈದ್ಯಕೀಯ ಪರೀಕ್ಷೆಯಿಂದಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದು ದೃಢವಾಗಿತ್ತು.

ಎಂಟು ಜನರ ಬಂಧನ
ಪ್ರಕರಣ ಭೇದಿಸಲು ಹೊರಟ ಪೊಲೀಸರು ಈಗಾಗಲೇ ಎಂಟು ಜನರನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ 60 ರ್ಷದ ನಿವೃತ್ತ ಸರ್ಕಾರಿ ನೌಕರ ಸಾಂಜಿ ರಾಮ್ ಎಂಬುವವನೂ ಶಾಮೀಲಾಗಿದ್ದಾನೆ ಎಂಬುದು ನಂತರ ತಿಳಿದುಬಂದಿತ್ತು. ಅಲ್ಲದೆ ಪೊಲೀಸ್ ಅಧಿಕಾರಿಗಳಾದ ಸುರೇಂದರ್ ವರ್ಮಾ, ಆನಂದ ದತ್ತ, ತಿಲಕ್ ರಾಜ್ ಮತ್ತು ಖಾಜುರಿಯಾ, ಅಲ್ಲದೆ ಸಾಂಜಿ ರಾಮ್ ಪುತ್ರ ವಿಶಾಲ್, ಸಂಬಂಧಿ ಒಬ್ಬ ಅಪ್ರಾಪ್ತ ಹುಡುಗ, ಆತನ ಸ್ನೇಹಿತ ಪರ್ವೇಶ್ ಕುಮಾರ್ ಮುಂತಾದವರು ಈ ಘಟನೆಯಲ್ಲಿ ಆರೋಪಿಗಳೆಂದು ಬಂಧಿಸಲಾಗಿದೆ.

ಚಿತ್ರಹಿಂಸೆ ಅನುಭವಿಸಿದ ಆ ಪುಟ್ಟ ಬಾಲಕಿ
ಎಂಟು ವರ್ಷದ ಆಕೆಯನ್ನು ಕಾಡಿನಿಂದ ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ಹಲವು ದಿನಗಳ ಕಾಲ ಹತ್ತಿರದ ಮಂದಿರವೊಂದರಲ್ಲಿ ಕೂಡಿ ಹಾಕಿ ನಿರಂತರವಾಗಿ ಸಾಮೂಹಿತ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಕಾಲುಗಳು ಮುರಿದಿದ್ದವು. ಮೈಮೇಲೆ ಲೆಕ್ಕವಿಲ್ಲದಷ್ಟು ಗಾಯಗಳಿದ್ದವು. ಉಗುರುಗಳೆಲ್ಲ ನೀಲಿ ಬಣ್ಣಕ್ಕೆ ತಿರುಗಿದ್ದವು. ಹಲವು ದಿನಗಳ ಕಾಲ ಅತ್ಯಾಚಾರ ನಡೆಸಿದ ನಂತರ ಆಕೆಯ ತಲೆಗೆ ಕಲ್ಲಿನಿಂದ ಜೋರಾಗಿ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಕಾಡಿನ ಪೊದೆಯೊಂದರಲ್ಲಿ ಆಕೆ ಶವವನ್ನು ಎಸೆಯಲಾಗಿತ್ತು.

ರಾಹುಲ್ ಗಾಂಧಿ ಆಕ್ರೋಶ
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. "ಇಂಥ ಹೀನ ಕೃತ್ಯ ಮಾಡಿದ ಅಪರಾಧಿಗಳನ್ನು ಸುಮ್ಮನೆ ಬಿಡುವುದು ಸರಿಯೇ? ಕತುವಾದಲ್ಲಿ ಅಪರಾಧ ನಡೆದಿದ್ದು ಆಸಿಫಾ ಮೇಳೆ ಮಾತ್ರವಲ್ಲ, ಮಾನವೀಯತೆಯ ಮೇಲೆ. ಅಪರಾಧಿಗಳನ್ನು ಸುಮ್ಮನೆ ಬಿಡಬಾರದು. ಒಬ್ಬ ಮುಗ್ಧ ಮಗುವಿನ ಮೇಲಾದ ಈ ಪರಿ ಅಮಾನವೀಯತೆಯನ್ನು ರಾಜಕೀಯಕ್ಕೆ ಎಳೆಯುವುದು ಬೇಡ" ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತ ಎಂದಿಗೂ ತನ್ನ ಮಹಿಳೆಯರನ್ನು ಈ ರೀತಿ ಹೀನಾಯವಾಗಿ ನೋಡಬಾರದು. ಅದಕ್ಕೆಂದೇ ಕಾಂಗ್ರೆಸ್ ಆಯೋಹಿಸಿದ್ದ ಮಧ್ಯರಾತ್ರಿಯ ಮೊಂಬತ್ತಿ ಪ್ರತಿಭಟನೆಗೆ ಅಪೂರ್ವ ಬೆಂಬಲ ಸಿಕ್ಕಿದೆ. ಅದಕ್ಕಾಗಿ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೂರು ತಿಂಗಳ ನಂತರ ಎಚ್ಚೆತ್ತವರು!
ರಾಹುಲ್ ಗಾಂಧಿ ಮತ್ತು ಇತರ ಎಲ್ಲಾ ಮಾಧ್ಯಮಗಳೂ ಮೂರು ತಿಂಗಳ ನಂತರ ಈ ಹೀನ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರಜಾಪ್ರಭುತ್ವದ ಆಧಾರ ಸ್ತಂಬಗಳಿಗೆ ಆಸಿಫಾ ಮೇಲಾದ ಈ ಅತ್ಯಾಚಾರದ ಹಿಂಸೆಗೆ ಪತ್ರಿಕ್ರಿಯೆ ನೀಡಲು ನೆನಪಾಗಿದ್ದು ನಿಜಕ್ಕೂ ದುರಂತ. ಈ ಎಲ್ಲ ನಡೆಗಳು ನಮ್ಮ ಸಮಾಜದ ಕುರಿತು ಹಲವು ವಿಷಯಗಳನ್ನು ಬಚ್ಚಿಡುತ್ತವೆ ಎಂದು ವಿಷಾದವಾಗಿ ಹೇಳಿದ್ದಾರೆ ಆದಿತ್ಯ ರಾಜ್ ಕೌಲ್.

ಹೆಣ್ಣು ಮಗಳ ತಂದೆಯಾಗಿ ನನಗೆ ಭಯವಾಗುತ್ತಿದೆ !
ಅತ್ಯಾಚಾರಕ್ಕೊಳಗಾದ, ಹಿಂಸೆಗೊಳಗಾದ, ಅಪಹಾಸ್ಯಕ್ಕೆ ಗುರಿಯಾದ, ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಎಲ್ಲ ಮಹಿಳೆಯರೊಂದಿಗೆ ನಾನಿದ್ದೇನೆ. ನಾನೊಬ್ಬ ಹೆಣ್ಣು ಮಗಳ ತಂದೆಯಾಗಿರುವುದಕ್ಕೆ ನನಗೆ ಬಹಳ ಆತಂಕವಾಗುತ್ತಿದೆ. ಈ ಎಲ್ಲ ಘಟನೆಗಳಿಗೂ ನಾವೇ ಕಾರಣ. ನಾವೆಲ್ಲ ನಮ್ಮ ನಮ್ಮ ವೈಮನಸ್ಯ ಬಿಟ್ಟು ಇಂಥವರ ವಿರುದ್ಧ ಹೋರಾಡಲು ಒಂದಾಗಬೇಕಿದೆ ಎಂದಿದ್ದಾರೆ ಜಾವೇದ್ ಅಫ್ರೀದಿ.

ನಾವು ಮನುಷ್ಯರು
ನಾವು ಏನೇ ಆಗಿದ್ದಿರಬಹುದು.ಯಾವ ಧರ್ಮದವರೇ ಇರಬಹುದು. ನಮ್ಮ ಭಾಷೆ, ಸಂಸ್ಕೃತಿ, ಸಿದ್ಧಾಂತ ಎಲ್ಲವೂ ಬೇರೆ ಇದ್ದಿರಬಹುದು. ಆದರೆ ಕೊಟ್ಟ ಕೊನೆಯಲ್ಲಿ ನಾವೆಲ್ಲರೂ ಮನುಷ್ಯರೇ ಎಂಬುದು ಸತ್ಯ. ಆಸಿಫಾಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯ. ಅವಳೂ ಭಾರತದ ಮಗಳೇ ಎಂದಿದ್ದಾರೆ ಅಂಶುಲ್ ಸಕ್ಸೇನಾ.












Click it and Unblock the Notifications