ರಾಜಸ್ಥಾನಿ ಸಚಿವೆಯ ಕಿವಿ, ಮೂಗು ಕತ್ತರಿಸುತ್ತೇವೆಂದ ಕರಣಿ ಸೇನಾ
ಜೈಪುರ, ಜೂನ್ 14: ಕಳೆದ ವರ್ಷ ಪದ್ಮಾವತ್ ಚಿತ್ರದ ವಿರುದ್ಧ ದೇಶದಾದ್ಯಂತ ದಂಗೆ ಎದ್ದಿದ್ದ ರಾಜಸ್ಥಾನದ ಶ್ರೀ ರಜಪೂತ್ ಕರಣಿಸೇನಾ ಸಂಸ್ಥೆಯು ಇದೀಗ ರಾಜಸ್ಥಾನದ ಸಚಿವೆಯೊಬ್ಬರ ವಿರುದ್ಧ ತಿರುಗಿಬಿದ್ದಿದೆ.
ರಾಜಸ್ಥಾನ ಸರ್ಕಾರದ ಸಂಪುಟ ಸಚಿವೆ ಮಹೇಶ್ವರಿ ಎಂಬುವವರ ಮೂಗು ಮತ್ತು ಕಿವಿಯನ್ನು ಕತ್ತರಿಸುವುದಾಗಿ ಕರಣಿ ಸೇನಾ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ.
ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಉನ್ನತ ಶಿಕ್ಷಣ ಸಚಿವೆ ಮಹೇಶ್ವರಿಯವರಿಗೆ ಪತ್ರಕರ್ತರು ಪ್ರಶ್ನೆಯೊಂದನ್ನು ಕೇಳಿದ್ದರು. 'ರಾಜಸ್ಥಾನದಲ್ಲಿ ಸರ್ವ ರಜಪೂತ್ ಸಮಾಜ ಸಂಘರ್ಷ ಸಮಿತಿಯು ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?' ಎಂಬುದು ಆ ಪ್ರಶ್ನೆ. ಅದಕ್ಕೆ ಉತ್ತರ ನೀಡಿದ್ದ ಮಹೇಶ್ವರಿ, 'ಕೆಲವರು ಇಲಿಗಳ ಹಾಗೆ. ಅವರು ಚುನಾವಣೆ ಸಮಯದಲ್ಲಿ ಮಾತ್ರವೇ ಬಿಲದಿಂದ ಹೊರಬರುತ್ತಾರೆ' ಎಂದು ಉತ್ತರಿಸಿದ್ದರು.

ಅವರ ಈ ಹೇಳಿಕೆಯ ನಂತರ ಕರಣಿ ಸೇನಾ ಕಾರ್ಯಕರ್ತರು, ಮಹೇಶ್ವರಿ ಅವರು ಕ್ಷಮೆ ಕೇಳಬೇಕು, ಇಲ್ಲವಾದರೆ ಅವರ ಮೂಗು ಮತ್ತು ಕಿವಿ ಕತ್ತರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಸಂಜಯ್ ಲೀಲಾ ಬನ್ಸಾಲಿ ಅವರ ಐತಿಹಾಸಿಕ ಚಿತ್ರ ಪದ್ಮಾವತ್ ಬಿಡುಗಡೆಯ ಸಮಯದಲ್ಲಿ, ಈ ಚಿತ್ರದಲ್ಲಿ ರಜಪೂತರ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದದೆ ಎಂದು ದೂರಿ ಕರಣಿ ಸೇನಾ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಸಮಯವೊಂದರಲ್ಲಿ ಶಾಲೆಯ ಬಸ್ಸೊಂದರ ಮೇಲೆ ಕಲ್ಲೆಸೆದು ದಾಳಿ ಮಾಡಿದ್ದು ಸಾಕಷ್ಟಿ ವಿವಾದಕ್ಕೆ ಗುರಿಯಾಗಿತ್ತು.












Click it and Unblock the Notifications