‘ಕೊರೊನಾ’ ವಿರುದ್ಧ ಸಮರ ಸಾರಿದ ಸಿದ್ದರಾಮಯ್ಯ ಸರ್ಕಾರ?
ಕರ್ನಾಟಕದಲ್ಲಿ ಈಗ ಮತ್ತೊಮ್ಮೆ 'ಕೊರೊನಾ' ಕಾಟ ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ಇನ್ನೇನು ಸಂಪೂರ್ಣ ಹಿಡಿತಕ್ಕೆ ಸಿಕ್ಕಿದೆ ಎನ್ನುವಷ್ಟರ ಒಳಗಾಗಿ ಮತ್ತೆ ಆತಂಕ ಕೂಡ ಈಗ ಮನೆಮಾಡಿದೆ. ಅದ್ರಲ್ಲೂ ನೆರೆಯ ರಾಜ್ಯ ಕೇರಳದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಆಗುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರವು ನಾಳೆ, ಅಂದ್ರೆ ಡಿಸೆಂಬರ್ 21 ರಂದು ಮಹತ್ವದ ಸಭೆಯನ್ನ ಆಯೋಜನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಾಳೆ ಸಭೆಯನ್ನು ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮೀಟಿಂಗ್ ನಡೆಯಲಿದ್ದು, ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗದಂತೆ ತಡೆಯಲು ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ. ಡಿ. 21ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಈ ಸಭೆ ನಡೆಯಲಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿ, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

'ಕೊರೊನಾ' ಹರಡದಂತೆ ಅಲರ್ಟ್
ಆರೋಗ್ಯ ಸೌಧದಲ್ಲಿ ಈ ಬಗ್ಗೆ ಆರೋಗ್ಯ ಸಚಿವರ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ಏನೆಲ್ಲಾ ಸಿದ್ಧತೆ ಆಗಿದೆ ಎಂದು ಮಾಹಿತಿ ಪಡೆದಿದ್ದೇನೆ. ನಗರದಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಆದ್ರೆ ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಹೆಚ್ಚು ಜನರು ಇರುವ ಪ್ರದೇಶ. ಏನೆಲ್ಲಾ ಕ್ರಮ ತೆಗೆದುಕೊಂಡಿದೆ ಅಂತಾ ಕೂಡ ಪರಿಶೀಲನೆ ನಡೆಸುವೆ ಎಂದು ಮಾಹಿತಿ ನೀಡಿದ್ದಾರೆ.
ಜನರು ಭಯಪಡುವ ಅಗತ್ಯತೆ...
ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ನಡೆಯಲಿದೆ. ಸಭೆ ಬಳಿಕ ಎಷ್ಟು ಡ್ರಗ್ ಖರೀದಿಸಬೇಕು ಅಂತ ನಿರ್ಧರಿಸುತ್ತೇವೆ. ಪರಿಸ್ಥಿತಿ ನೋಡಿಕೊಂಡು ಡ್ರಗ್ ಖರೀದಿಸುತ್ತೇವೆ. ಜನ ಸದ್ಯ ಆತಂಕ ಪಡುವ ಅಗತ್ಯವಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಇಲ್ಲ ಕೇಸ್ ನೋಡಿಕೊಂಡು ಕ್ರಮ ತೆಗೆದುಕೊಳ್ಳಬೇಕು. ನಾಳಿನ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ ಕರ್ನಾಟಕದ ಆರೋಗ್ಯ ಸಚಿವರು.
ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್?
2023 ಮುಗಿದು ಇನ್ನೆನು 2024ಕ್ಕೆ ಹೆಜ್ಜೆ ಹಾಕಲು ಕೌಂಟ್ಡೌನ್ ಶುರುವಾಗಿದೆ. ಹೀಗಿದ್ದಾಗಲೇ ಕೊರೊನಾ ಅಪ್ಪಳಿಸುವ ಭಯವು ಆವರಿಸಿದೆ. ಹೀಗಾಗಿ ಕೊರೊನಾ ಕಂಟಕವನ್ನ ಎದುರಿಸಲು ಮುನ್ನೆಚ್ಚರಿಕೆ ಅತ್ಯಗತ್ಯ. ಇಲ್ಲವಾದರೆ ಮಹಾನ್ ಸಮಸ್ಯೆ ಎದುರಾಗಿಬಿಡುತ್ತೆ, ಹೀಗಾಗಿ ಹೊಸ ವರ್ಷ ಆಚರಣೆ ವಿಚಾರದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸಲು ನಾಳಿನ ಸಭೆಯಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಹೀಗೆ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.












Click it and Unblock the Notifications