ಕರ್ನಾಟಕ ಚುನಾವಣಾ ಫಲಿತಾಂಶ ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ: ರಾಹುಲ್ ಗಾಂಧಿ ಘೋಷಣೆ
ಹೈದರಾಬಾದ್, ಜುಲೈ. 03: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ತೆಲಂಗಾಣದಲ್ಲಿ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ತೆಲಂಗಾಣದಲ್ಲಿ ಬಿಜೆಪಿ ನಿರ್ನಾಮವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ.
ಭಾರತ್ ರಾಷ್ಟ್ರ ಸಮಿತಿ ಅನ್ನು 'ಬಿಜೆಪಿ ರಿಷ್ಟೇದಾರ್ ಸಮಿತಿ' ಮತ್ತು 'ಬಿಜೆಪಿಯ ಬಿ ಟೀಮ್' ಎಂದು ಕರೆದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಬಡವರೆಲ್ಲರೂ ಕಾಂಗ್ರೆಸ್ನೊಂದಿಗೆ ನಿಂತಿದ್ದರಿಂದ ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟ ಮತ್ತು ಬಡವರ ವಿರೋಧಿ ಸರ್ಕಾರವನ್ನು ಕಾಂಗ್ರೆಸ್ ಸೋಲಿಸಿದೆ ಎಂದು ತಿಳಿಸಿದ್ದಾರೆ.

"ಒಂದು ಕಡೆ ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿಗಳಿದ್ದರು. ಇನ್ನೊಂದೆಡೆ ರೈತರು, ಕಾರ್ಮಿಕರು, ಆದಿವಾಸಿಗಳು, ದಲಿತರು, ಸಣ್ಣ ವ್ಯಾಪಾರಿಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿದ್ದರು. ತೆಲಂಗಾಣದಲ್ಲೂ ಅದೇ ಪುನರಾವರ್ತನೆಯಾಗಲಿದೆ. ಒಂದು ಕಡೆ ಮುಖ್ಯಮಂತ್ರಿ, ಅವರ ಕುಟುಂಬ ಮತ್ತು ಅವರ 10-15 ಕೋಟ್ಯಾಧಿಪತಿ ಸ್ನೇಹಿತರು ಮತ್ತು ಇನ್ನೊಂದು ಬದಿಯಲ್ಲಿ ಎಲ್ಲಾ ಬಡವರು, ದಲಿತರು, ರೈತರು, ಆದಿವಾಸಿಗಳು, ಸಣ್ಣ ವ್ಯಾಪಾರಿಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರು ಇದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಡೆದದ್ದೇ ತೆಲಂಗಾಣದಲ್ಲೂ ಪುನರಾವರ್ತನೆಯಾಗುತ್ತದೆ" ಎಂದು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ತೆಲಂಗಾಣದಲ್ಲಿ ನಡೆದ ಪಕ್ಷದ ಮೊದಲ ಪ್ರಮುಖ ಸಾರ್ವಜನಿಕ ಸಭೆ 'ತೆಲಂಗಾಣ ಜನ ಘರ್ಜನ' ಎಂಬ ಶೀರ್ಷಿಕೆಯಡಿ ನಡೆದಿದೆ. ಬೃಹತ್ ಪ್ರದರ್ಶನದೊಂದಿಗೆ, ಕಾಂಗ್ರೆಸ್ ಪಕ್ಷವು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತನ್ನ ಪ್ರಚಾರವನ್ನು ಪ್ರಾರಂಭಿಸಿದೆ.
ತೆಲಂಗಾಣದಲ್ಲಿ ಬಿಆರ್ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೋರಾಟ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ತೆಲಂಗಾಣದಲ್ಲಿ ಬಿಜೆಪಿಯನ್ನು ಪಕ್ಷವು ಮುಗಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬಿ ಟೀಂ ನಡುವೆ ಹೋರಾಟ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಹೇಗೆ ಸೋಲಿಸಿದ್ದೇವೋ ಅದೇ ರೀತಿ ತೆಲಂಗಾಣದಲ್ಲೂ ಬಿಜೆಪಿ ಬಿ ಟೀಂ ಅನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ.

ಬಿಆರ್ಎಸ್ಗೆ ಆಹ್ವಾನ ನೀಡಿದ್ದ ವೇಳೆ ಪ್ರತಿಪಕ್ಷಗಳ ಸಭೆಗೆ ಹಾಜರಾಗಲು ಕಾಂಗ್ರೆಸ್ ನಿರಾಕರಿಸಿದೆ ಎಂದು ಹೇಳಿದರು. "ನಾವು ಬಿಜೆಪಿ ಬಿ ಟೀಮ್ನೊಂದಿಗೆ ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಅವರೊಂದಿಗೆ ಕುಳಿತುಕೊಳ್ಳುವುದಿಲ್ಲ ಮತ್ತು ನಾವು ಅವರನ್ನು ಸೋಲಿಸುತ್ತೇವೆ. ಬಿಜೆಪಿ ಬಿ ಟೀಂ ಜೊತೆ ನಾವು ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಬಗ್ಗೆ ಕಿಡಿಕಾರಿದ್ದಾರೆ. ನರೇಂದ್ರ ಮೋದಿ ಏನು ಬೇಕೋ ಅದನ್ನು ಕೆಸಿಆರ್ ಮಾಡುತ್ತಾರೆ. ಅವರ ರಿಮೋಟ್ ಕಂಟ್ರೋಲ್ ನರೇಂದ್ರ ಮೋದಿಯವರ ಕೈಯಲ್ಲಿದೆ ಎಂದು ಟೀಕಿಸಿದ್ದಾರೆ.
ಕೆಸಿಆರ್ ಅವರ ಮಗಳ ಹೆಸರೂ ಕಾಣಿಸಿಕೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಭ್ರಷ್ಟಾಚಾರದಿಂದಾಗಿ ಕೆಸಿಆರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬೆನ್ನೆಲುಬು ಎಂದು ಹೇಳಿದ ಅವರು, ಬಿಆರ್ಎಸ್ ಅನ್ನು ಸುಲಭವಾಗಿ ಸೋಲಿಸಬಹುದು. ನೀವು ಕರ್ನಾಟಕದಲ್ಲಿ ನಿಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದೀರಿ ಮತ್ತು ಈಗ ತೆಲಂಗಾಣದಲ್ಲಿ ನಿಮ್ಮ ಶಕ್ತಿಯನ್ನು ತೋರಿಸಿದ್ದೀರಿ ಎಂದಿದ್ದಾರೆ.
ಕೆಸಿಆರ್ ಅವರು ತೆಲಂಗಾಣದ ರಾಜ ಮತ್ತು ತೆಲಂಗಾಣ ಅವರ ಜಾಗೀರ್ ಎಂದು ಭಾವಿಸುತ್ತಾರೆ. ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಬಡವರು, ದಲಿತರು ಮತ್ತು ಆದಿವಾಸಿಗಳಿಗೆ ನೀಡಿದ್ದ ಭೂಮಿಯನ್ನು ಕೆಸಿಆರ್ ಕಿತ್ತುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿಚಾರದಲ್ಲಿ ಕೆಸಿಆರ್ ಯಾವುದನ್ನು ಬಿಟ್ಟಿಲ್ಲ. ಕಾಳೇಶ್ವರಂ ಯೋಜನೆಯಲ್ಲಿ ರೂ.1 ಲಕ್ಷ ಕೋಟಿ ಅವ್ಯವಹಾರ ನಡೆದಿದ್ದು, ಮಿಷನ್ ಕಾಕತೀಯದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications