ಚಿದು ಬಂಧನ: 'ಕರ್ಮ' ಯಾರನ್ನೂ ಬಿಡುವುದಿಲ್ಲ, ಅನುಭವಿಸಲೇ ಬೇಕು
ನವದೆಹಲಿ, ಆ 22: ಮಾಜಿ ಕೇಂದ್ರ ಗೃಹ, ಹಣಕಾಸು ಸಚಿವ, ಪಿ ಚಿದಂಬರಂ ಬಂಧನವನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ಟೀಕಿಸಿದೆ. ವ್ಯತ್ಯಾಸವಿಷ್ಟೇ.. ಹತ್ತು ವರ್ಷಗಳ ಹಿಂದೆ ಬಿಜೆಪಿ, ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂಷಿಸಿತ್ತು, ಈಗ ಕಾಂಗ್ರೆಸ್ಸಿನ ಸರದಿ.
ಚಿದಂಬರಂ ಅರೆಸ್ಟ್ ವಿಚಾರದಲ್ಲಿ ಸಾಲುಸಾಲು ಟ್ವೀಟ್ ಮಾಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಎಲ್ಲಾ ಅವರವರ ಕರ್ಮ ಎಂದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಅಮಿತ್ ಶಾ ಬಂಧನ, ಸಾಧ್ವಿ ಪ್ರಗ್ಯಾ ಠಾಕೂರ್ ಅವರ ಹಳೆಯ ಫೋಟೋಗಳನ್ನು ಹಾಕಿ ದೋವಲ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
" ಅಮಿತ್ ಶಾ ಅವರ ಈ ಫೋಟೋ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅಮಿತ್ ಶಾ ಅವರ ಮೇಲೆ ಚಿದಂಬರಂ ಸುಳ್ಳು ಆರೋಪವನ್ನು ಹೊರಿಸಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅವರನ್ನು ಬಂಧಿಸಲಾಯಿತು".

" ಆದರೆ, ಇಂದು ಚಿದಂಬರಂ ಬಂಧದನ ಚಿತ್ರಗಳನ್ನು ನೋಡಿದಾಗ, ನಾನು ಇಷ್ಟು ಮಾತ್ರ ಹೇಳಬಲ್ಲೆ, ನೀವು ಮಾಡಿದ ಕರ್ಮ ನಿಮಗೆ ವಾಪಸ್ ಹೊಡೆಯುತ್ತಿದೆ. ನೀವು ಶಾ ಅವರನ್ನು ನಕಲಿ ಆರೋಪಗಳೊಂದಿಗೆ ಬಂಧಿಸಿದ್ದೀರಿ, ಅವರು ಈಗ ನಿಮ್ಮನ್ನು ನಿಜವಾದ ಆರೋಪದೊಂದಿಗೆ ಬಂಧಿಸುತ್ತಿದ್ದಾರೆ" ಎಂದು ದೋವಲ್ ಟ್ವೀಟ್ ಮಾಡಿದ್ದಾರೆ.
ಪ್ರಗ್ಯಾ ಠಾಕೂರ್ ಅವರ ಫೋಟೋದೊಂದಿಗೆ ದೋವಲ್ ಬರೆದ ಒಕ್ಕಣೆ ಹೀಗಿತ್ತು, " ಭಾರತವನ್ನು ಕೊಳ್ಳೆ ಹೊಡೆದದ್ದು ಹಾಗಿರಲಿ, ಕೇಸರಿ ಭಯೋತ್ಪಾದನೆ ಎನ್ನುವ ಪದವನ್ನು ಹುಟ್ಟುಹಾಕಿದ್ದಕ್ಕೆ, ನೂರು ಕೋಟಿ ಭಾರತೀಯರು ಎಂದಿಗೂ ನಿಮ್ಮನ್ನು ಕ್ಷಮಿಸಲಾರರು" ಎಂದು ಚಿದಂಬರಂ ವಿರುದ್ದ ದೋವಲ್ ಕಿಡಿಕಾರಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಪತ್ರಕರ್ತೆ ಬರ್ಖಾ ದತ್ ಅವರು ಯಾರ ಸಂದರ್ಶನ ಮಾಡುತ್ತಾರೋ ಅವರೆಲ್ಲರೂ, ರಾಜಕೀಯದಲ್ಲಿ ನೇಪಥ್ಯಕ್ಕೆ ಸರಿಯುತ್ತಾರೆ ಎನ್ನುವ ಅರ್ಥ ಬರುವಂತೆ, ಲಾಲೂ ಪ್ರಸಾದ್, ಊರ್ಮಿಳಾ, ಅಖಿಲೇಶ್ ಯಾದವ್ ಮತ್ತು ಚಿದಂಬರಂ ಜೊತೆ, ಬರ್ಖಾ ಸಂದರ್ಶನ ನಡೆಸುವ ಫೋಟೋ ಅನ್ನು ದೋವಲ್ ಹಾಕಿದ್ದಾರೆ.












Click it and Unblock the Notifications