ಬೇಗನೆ ಔಷಧಿ ಹಚ್ಚಿ, ಯುದ್ದಕ್ಕೆ ಹೋಗಬೇಕು
ಕಾರ್ಗಿಲ್,ಜು.26: ಕಾರ್ಗಿಲ್ ಯುದ್ಧದಲ್ಲಿ ದೇಶದ 527 ಸೈನಿಕರು ಪ್ರಾಣ ತ್ಯಾಗ ಮಾಡಿದರೆ, 1,363 ಯೋಧರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಬಹಳಷ್ಟು ಸೈನಿಕರ ಪ್ರಾಣವನ್ನು ಉಳಿಸಿದವರು ಸೇನಾ ವೈದ್ಯರು. ಈ ಹಿನ್ನಲೆಯಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೈನಿಕರ ಪ್ರಾಣವನ್ನು ರಕ್ಷಿಸಿದ ಸೇನಾ ವೈದ್ಯ ಡಾ. ಅನಿಲ್ ಒನ್ಇಂಡಿಯಾದ ಜೊತೆ ಯುದ್ಧದ ನೆನಪನ್ನು ಹಂಚಿಕೊಂಡಿದ್ದು ಹೀಗೆ:
"ಬಹಳ ಎತ್ತರದ ಪ್ರದೇಶದಲ್ಲಿ ಯುದ್ಧ ನಡೆಯುತಿತ್ತು. ನಮ್ಮ ಸೈನಿಕರು ಕೆಳಗಡೆಯಿಂದ ಹೋರಾಟ ಮಾಡುತ್ತಿದ್ದರೆ, ಪಾಕ್ ಸೈನಿಕರು ಮೇಲುಗಡೆಯಿಂದ ಸುಲಭವಾಗಿ ದಾಳಿ ಮಾಡುತ್ತಿದ್ದರು. ಭಾರತೀಯ ಸೈನಿಕರು ಹಂತ ಹಂತವಾಗಿ ಮೇಲುಗಡೆ ಹೋಗುತ್ತಿದ್ದಂತೆ ನಾವು ಅವರನ್ನು ಹಿಂಬಾಲಿಸಿಕೊಂಡು ಕ್ಯಾಂಪ್ ಹಾಕುತ್ತಿದ್ದೇವು" ಎಂದು ಅವರು ಯುದ್ಧದ ಮೆಲುಕು ಹಾಕುತ್ತಾರೆ.

"ಕೆಳಗಡೆಯಿಂದ ಮೇಲುಗಡೆಯಲ್ಲಿ ಸ್ಥಾಪಿಸಿದ್ದ ಕ್ಯಾಂಪ್ಗೆ ವೈದ್ಯಕೀಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವುದೇ ಬಹಳ ಕಷ್ಟದ ಕೆಲಸ. ಹೋರಾಟದಲ್ಲಿ ಬಹಳಷ್ಟು ಸೈನಿಕರ ದೇಹದೊಳಗೆ ಬುಲೆಟ್ ಹೋಗಿತ್ತು. ನಮ್ಮ ಆರಂಭದ ಕೆಲಸ ಆ ಬುಲೆಟ್ನ್ನು ತೆಗೆದು, ಸೋರುತ್ತಿರುವ ರಕ್ತವನ್ನು ತಡೆದು ಬ್ಯಾಂಡೇಜ್ ಹಾಕುತ್ತಿದ್ದೇವು"
ಗಂಭೀರವಾಗಿ ಗಾಯಗೊಂಡ ಸೈನಿಕರಿಗೆ ಹೇಗೆ ಚಿಕಿತ್ಸೆ ನೀಡಿದ್ದಿರಿ ಎಂದು ಕೇಳಿದರೆ ," ಗಂಭೀರವಾಗಿ ಗಾಯಗೊಂಡ ಸೈನಿಕರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಹೆಲಿಕಾಪ್ಟರ್ ಮೂಲಕ ಮಿಲಿಟರ್ ಆಸ್ಪತ್ರೆಗೆ ಸಾಗಿಸುತ್ತಿದ್ದೇವು. ಒಂದು ದಿನ ಗಂಭೀರವಾಗಿ ಗಾಯಗೊಂಡ 23 ಜನರಿಗೆ ಚಿಕಿತ್ಸೆ ನೀಡಿದ್ದೇವು" ಅಂತ ನೆನಪು ಮಾಡುತ್ತಾರೆ.
ಕೆಲಸಕ್ಕೆ ಸೈನಿಕರೇ ಸ್ಪೂರ್ತಿ:
ನಮಗೆ ಸೈನಿಕರ ಹೋರಾಟವೇ ಕೆಲಸಕ್ಕೆ ಸ್ಪೂರ್ತಿಯಾಗಿತ್ತು. ಗಂಭೀರವಾಗಿ ಗಾಯಗೊಂಡ ಸೈನಿಕರು ಮೆಡಿಕಲ್ ಕ್ಯಾಂಪ್ಗೆ ಬಂದ ಕೂಡಲೇ "ಡಾಕ್ಟರ್, ಬೇಗನೆ ಔಷಧಿ ಹಚ್ಚಿ, ಯುದ್ದಕ್ಕೆ ಹೋಗಬೇಕು" ಅಂತ ಹೇಳುತ್ತಿದ್ದರಂತೆ. "ನಿಮ್ಮ ಗಾಯ ಗಂಭೀರವಾಗಿದೆ ಹೆಚ್ಚಿನ ಚಿಕಿತ್ಸೆಗೆ ಕೆಳಗಡೆ ಇರುವ ಮಿಲಿಟರಿ ಆಸ್ಪತ್ರೆಗೆ ತೆರಳಬೇಕು" ಎಂದು ಸೈನಿಕರಿಗೆ ಸೂಚನೆ ನೀಡಿದರೆ, ಸೈನಿಕರು "ಯಾವುದೇ ಕಾರಣಕ್ಕೂ ಕೆಳಗಡೆಗೆ ಕಳುಹಿಸಬೇಡಿ. ಶತ್ರುವಿನ ಜೊತೆ ಹೊರಾಡಬೇಕು, ಬೇಗನೆ ಇಲ್ಲಿಂದ ಕಳುಹಿಸಿ" ಅಂತ ಬೇಡಿಕೊಳ್ಳುತ್ತಿದ್ದರು ಎಂದು ಸೇನಾ ವೈದ್ಯ ಡಾ. ಅನಿಲ್ ಸಾಹಸಿ ಸೈನಿಕರ ಹೋರಾಟವನ್ನು ಮೆಲುಕು ಹಾಕುತ್ತಾರೆ.
ಕಾರ್ಗಿಲ್ ವಿಜಯ್ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಕಾರ್ಗಿಲ್ ವಿಜಯ ದಿವಸ












Click it and Unblock the Notifications