ಕನ್ಯಾಕುಮಾರಿಯ ಮತ್ತೊಂದು ಆಕರ್ಷಣೆ ಗ್ಲಾಸ್ ಬ್ರಿಡ್ಜ್ ಪ್ರವಾಸಿಗರಿಗೆ ಮುಕ್ತ
ಚೆನ್ನೈ, ಡಿಸೆಂಬರ್ 31: ತಮಿಳುನಾಡಿನ ಕನ್ಯಾಕುಮಾರಿ ಪ್ರವಾಸ ಹೋಗುವ ಜನರಿಗೆ ಸಿಹಿಸುದ್ದಿಯೊಂದಿದೆ. ಗಾಜಿನ ಬ್ರಿಡ್ಜ್ ಈಗ ಲೋಕಾರ್ಪಣೆಗೊಂಡಿದ್ದು, ಕನ್ಯಾಕುಮಾರಿ ಪ್ರವಾಸಕ್ಕೆ ಹೊಸ ಆಕರ್ಷಣೆ ಸೇರ್ಪಡೆಯಾಗಿದೆ. ಪ್ರವಾಸ ಕೈಗೊಳ್ಳುವ ಜನರು ಈಗ ಗ್ಲಾಸ್ ಬ್ರಿಡ್ಜ್ ಮೇಲೆ ಹೆಜ್ಜೆ ಹಾಕಬಹುದು. ಸುಮಾರು 37 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಕನ್ಯಾಕುಮಾರಿಯ ಗಾಜಿನ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾಸ್ಮಾರಕದಿಂದ ಈ ಸೇತುವೆ ತಿರುವಳ್ಳುರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ. 77 ಮೀಟರ್ ಉದ್ದದ ಸೇತುವೆ ಇದಾಗಿದ್ದು, ತಮಿಳುನಾಡು ಸರ್ಕಾರದ ಪೂರ್ಣ ಅನುದಾನದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಕನ್ಯಾಕುಮಾರಿಗೆ ಈಗ ಭೇಟಿ ನೀಡುವ ಪ್ರವಾಸಿಗರು ಈ ಗಾಜಿನ ಸೇತುವೆ ಮೂಲಕ ವಿವೇಕಾನಂದ ಶಿಲಾಸ್ಮಾರಕದಿಂದ ತಿರುವಳ್ಳುರ್ ಪ್ರತಿಮೆಗೆ ಸುಲಭವಾಗಿ ಸಂಚಾರ ನಡೆಸಬಹುದಾಗಿದೆ. ಸಮುದ್ರದ ನಡುವಿನ ಈ ಗಾಜಿನ ಬ್ರಿಡ್ಜ್ ಕನ್ಯಾಕುಮಾರಿಯ ಪ್ರಮುಖ ಆಕರ್ಷಣೆಯಾಗಲಿದೆ.
ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ, ತಿರುವಳ್ಳುರ್ ಪ್ರತಿಮೆ, ಸುತ್ತಲೂ ಸಮುದ್ರ, ಸಂಜೆ ಮತ್ತು ಮುಂಜಾಣೆ ಕಣ್ಮನ ಸೆಳೆಯುವ ಹವಾಮಾನ ಕನ್ಯಾಕುಮಾರಿಗೆ ಮತ್ತಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುವ ನಿರೀಕ್ಷೆ ಇದೆ. ಕೆಳಗೆ ಮತ್ತು ಸುತ್ತಲೂ ಸಮುದ್ರ ನೋಡುತ್ತಾ ಗಾಜಿನ ಸೇತುವೆ ಮೇಲೆ ನಡೆಯುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡಲಿದೆ.
ಗಾಜಿನ ಸೇತುವೆ ಯೋಜನೆ: ತಿರುವಳ್ಳುರ್ ಪ್ರತಿಮೆ ನಿರ್ಮಾಣ ಮಾಡಿದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರ 37 ಕೋಟಿ ರೂ.ಗಳ ವೆಚ್ಚದ ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದೆ. ಲವಣಯುಕ್ತ ಗಾಳಿಯ ಹೊಡೆತವನ್ನು ಸಹ ತಡೆದುಕೊಳ್ಳುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಸೇತುವೆ ನಿರ್ಮಾಣ ಮಾಡಲಾಗಿದೆ.
ಕನ್ಯಾಕುಮಾರಿಯ ಕರಾವಳಿ ತೀರದಲ್ಲಿ 133 ಅಡಿ ಎತ್ತರದ ತಿರುವಳ್ಳುರ್ ಪ್ರತಿಮೆಯನ್ನು 2000ನೇ ಇಸವಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಪ್ರತಿಮೆ ಮುಂಭಾಗದಲ್ಲಿ 1970ರಿಂದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕವಿದೆ. ದಡದಿಂದ ಈ ಶಿಲಾಸ್ಮಾರಕ ವೀಕ್ಷಣೆ ಮಾಡಲು ಬೋಟ್ನಲ್ಲಿ ತೆರಳಬೇಕಿದೆ.
ವಿವೇಕಾನಂದ ಶಿಲಾ ಸ್ಮಾರಕ, ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆ ಮಾಡಲು ಸಾವಿರಾರು ಪ್ರವಾಸಿಗರು ಪ್ರತಿದಿನ ಕನ್ಯಾಕುಮಾರಿಗೆ ಭೇಟಿ ನೀಡುತ್ತಾರೆ. ಈ ಗಾಜಿನ ಸೇತುವೆಯು ಈ ಪ್ರವಾಸಿತಾಣದ ಇನ್ನೊಂದು ಪ್ರವಾಸಿ ಆಕರ್ಷಣೆಯಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಪ್ರಸ್ತುತ ಕನ್ಯಾಕುಮಾರಿಯಿಂದ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪೂಂಪುಹಾರ್ ಶಿಪ್ಪಿಂಗ್ ಕಾರ್ಪೊರೇಷನ್ ಲಿಮಿಟೆಡ್ ಬೋಟ್ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ಸ್ಮಾರಕ ನೋಡಲು ಹೋದವರು ಗಾಜಿನ ಬ್ರಿಡ್ಜ್ ಮೂಲಕ ತಿರುವಳ್ಳುರ್ ಪ್ರತಿಮೆಯನ್ನು ವೀಕ್ಷಣೆ ಮಾಡಿ ಬರಬಹುದು.
ಗಾಜಿನ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಚಿವರು, ಅಧಿಕಾರಿಗಳ ಜೊತೆ ವಿವೇಕಾನಂದ ಶಿಲಾ ಸ್ಮಾರಕದಿಂದ ಗಾಜಿನ ಬ್ರಿಡ್ಜ್ ಮೂಲಕ ತಿರುವಳ್ಳುರ್ ಪ್ರತಿಮೆ ತನಕ ಹೆಜ್ಜೆ ಹಾಕಿದರು. ತಿರುವಳ್ಳುರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಕೆ ಮಾಡಿದರು. ಗಾಜಿನ ಸೇತುವೆ ಲೋಕಾರ್ಪಣೆ ಬಳಿಕ ಲೇಸರ್ ಶೋ, ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.












Click it and Unblock the Notifications