ಕಾನ್ಪುರ ರೈಲು ದುರಂತದಲ್ಲಿ ಗಡಿಯಾಚೆಗಿನವರ ಕೈವಾಡ: ಮೋದಿ
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಗೊಂಡಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.
ಗೊಂಡಾ (ಉತ್ತರ ಪ್ರದೇಶ), ಫೆಬ್ರವರಿ 24: ಕಳೆದ ವರ್ಷ ನವೆಂಬರ್ 20ರಂದು ಸಂಭವಿಸಿದ್ದ ಕಾನ್ಪುರ ರೈಲು ದುರಂತದಲ್ಲಿ ಗಡಿಯಾಚೆಗಿನವರ ಕೈವಾಡವಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಶುಕ್ರವಾರ, ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೊಂಡಾದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮೋದಿ, ''ನೂರಾರು ಜೀವಗಳನ್ನು ಬಲಿ ಪಡೆದ ಕಾನ್ಪುರ ರೈಲು ದುರಂತದ ಹಿಂದೆ ಗಡಿಯಾಚೆಗಿನ ವ್ಯಕ್ತಿಗಳ ಕೈವಾಡವಿತ್ತು. ಹಾಗೆ ಯಾವುದೇ ಅಡೆತಡೆಯಿಲ್ಲದೆ ನೆರೆ ದೇಶಗಳ ವ್ಯಕ್ತಿಗಳು ಭಾರತಕ್ಕೆ ನುಸುಳಿಬಂದು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆಂದರೆ, ಗೊಂಡಾದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕಾದ ಅವಶ್ಯತೆಯಿದೆಯಲ್ಲವೇ ?'' ಎಂದು ಅವರು ಮತದಾರರನ್ನು ಕೇಳಿದರು.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]

''ಗೊಂಡಾದಲ್ಲಿ ಸುಭದ್ರತೆಯ ವಾತಾವರಣ ಸೃಷ್ಟಿಯಾಗಬೇಕಾದರೆ ನೀವು (ಮತದಾರರು) ಸೂಕ್ತವಾದ ವ್ಯಕ್ತಿಯನ್ನು ಆರಿಸಿಕಳುಹಿಸಬೇಕು'' ಎಂದು ಅವರು ತಿಳಿಸಿದರು.
ಗೊಂಡಾ ಪ್ರದೇಶವು ನೇಪಾಳ ದೇಶದ ಗಡಿ ಪ್ರದೇಶದಲ್ಲಿದ್ದು, ಮೋದಿಯವರ ಈ ಮಾತುಗಳು ನೇಪಾಳದಲ್ಲಿ ನೆಲೆಯೂರಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಪ್ರೇರಿತ ಉಗ್ರವಾದಿಗಳ ಬಗ್ಗೆ ಸೂಚ್ಯವಾಗಿ ಹೇಳಿದಂತಾಗಿತ್ತು.[ಪಾಟ್ನಾ- ಇಂದೋರ್ ರೈಲು ದುರಂತ: ಪಾಕ್ ಕೈವಾಡ]
ಯಾವುದೀ ಕಾನ್ಪುರ ರೈಲು ದುರ್ಘಟನೆ ?
ಕಳೆದ ವರ್ಷ ನವೆಂಬರ್ 20ರಂದು ಕಾನ್ಪುರ ಜಿಲ್ಲೆಯ ಪುಖ್ರಾಯ ಎಂಬಲ್ಲಿ ಇಂದೋರ್- ಪಾಟ್ನಾ ಎಕ್ಸೆಪ್ರೆಸ್ ನ ರೈಲಿನ 14 ಬೋಗಿಗಳು ಹಳಿ ತಪ್ಪಿದ್ದವು. ಈ ಘಟನೆಯಲ್ಲಿ 150ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖಾ ವರದಿಯಲ್ಲಿ, ನೇಪಾಳದಲ್ಲಿದ್ದುಕೊಂಡು ಪಾಕಿಸ್ತಾನದ ಐಎಸ್ಐನ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗಿರುವ ಶಂಶೀರ್ ಹೂಡಾ ಅವನನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಆನಂತರದ ಕಾರ್ಯಾಚರಣೆಯಲ್ಲಿ ಈ ವರ್ಷ ಫೆ. 7ರಂದು ಆತನನ್ನು ಕಠ್ಮಂಡುವಿನಲ್ಲಿ ನೇಪಾಳ ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರ ರೈಲು ದುರಂತದ ನಂತರ, ಕಾನ್ಪುರದ ಗ್ರಾಮಾಂತರ ಜಿಲ್ಲೆಯ ರೈಲ್ವೇ ನಿಲ್ದಾಣದ ಬಳಿ ಡಿಸೆಂಬರ್ 28ರಂದು ಸೆಲ್ಡಾ - ಅಜ್ಮೀರ್ ಎಕ್ಸೆಪ್ರೆಸ್ ರೈಲಿನ 15 ಬೋಗಿಗಳು ದುರಂತಕ್ಕೀಡಾಗಿದ್ದವು. ಈ ದುರಂತದಲ್ಲಿ 62 ಜನರು ಗಾಯಗೊಂಡಿದ್ದರು.












Click it and Unblock the Notifications