ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ಅಸ್ವಸ್ಥ ಸುದ್ದಿ ಸುಳ್ಳು!!
ಇತ್ತೀಚೆಗೆ, ಖಾದರ್ ಖಾನ್ ತೀವ್ರ ಅಸ್ವಸ್ಥರಾಗಿದ್ದು ಅವರು ಹೆಚ್ಚಿನ ಚಿಕಿತ್ಸೆಗಾಗಿ ಕೆನಡಾಕ್ಕೆ ಕಳುಹಿಸಿರುವುದಾಗಿ ಸುದ್ದಿ ಹರಡಿತ್ತು. ಆ ಸುದ್ದಿಗಳನ್ನು ಅವರ ಕುಟುಂಬ ಮೂಲಗಳು ಹಾಗೂ ಆಪ್ತರು ಅಲ್ಲಗಳೆದಿದ್ದಾರೆ.
ಮುಂಬೈ, ಮಾರ್ಚ್ 1: ಹಿಂದಿ ಚಿತ್ರರಂಗದ ಹಿರಿಯ ನಟ ಖಾದರ್ ಖಾನ್ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆನಡಾಕ್ಕೆ ಕೊಂಡೊಯ್ಯಲಾಗಿದೆ ಎಂಬ ಸುದ್ದಿಗಳನ್ನು ಅವರ ಕುಟುಂಬದ ಮೂಲಗಳು ಅಲ್ಲಗಳೆದಿವೆ.
ಖಾದರ್ ಖಾನ್ ಅವರಿಗೀಗ 80 ವರ್ಷ ವಯಸ್ಸಾಗಿದ್ದು, ವಯೋ ಸಂಬಂಧಿ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಸ್ಪಷ್ಟವಾಗಿ ಮಾತಾಡದ, ನಡೆಯಲೂ ಆಗದ ಪರಿಸ್ಥಿತಿಯಲ್ಲಿರುವ ಅವರು, ವ್ಹೀಲ್ ಚೇರ್ ನ ಮೇಲೆಯೇ ಓಡಾಡುವ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ, ಮಂಗಳವಾರ ಅವರ ಬಗ್ಗೆ ಹರಡಿದ್ದ ಸುದ್ದಿಗಳು ಚಿತ್ರ ಪ್ರಿಯರಲ್ಲಿ ಕುತೂಹಲ ಹಾಗೂ ಕೊಂಚ ಶಾಕ್ ಅನ್ನೂ ನೀಡಿದ್ದವು.[ಶಾರುಖ್ ಮುಂದಿನ ಚಿತ್ರದಲ್ಲಿ ರಣಬೀರ್ ಮಾಜಿ ಪ್ರಿಯತಮೆಯರು?]
ವಿಲನ್, ಪೋಷಕ ನಟ, ಕಾಮಿಡಿಯನ್ ಆಗಿ ಮಾತ್ರವಲ್ಲ ಚಿತ್ರಕಥೆ, ಸಂಭಾಷಣೆಕಾರರಾಗಿ ಸಾಕಷ್ಟು ಜನಮನ್ನಣೆ ಗಳಿಸಿರುವ ಖಾದರ್ ಖಾನ್ ಅವರಿಗೆ ಚಿತ್ರರಂಗ ಸೇರಿದಂತೆ ದೇಶಾದ್ಯಂತ ಅಭಿಮಾನಿಗಳ ಬಳಗವೇ ಇದೆ.[ಪ್ಲಾಸ್ಟಿಕ್ ಸರ್ಜರಿ ತಂದ ಎಡವಟ್ಟು: ಹೆಂಗಿದ್ದ ನಟಿ ಹೆಂಗಾಗಿದ್ದಾರೆ ನೋಡಿ.!]
ಆದರೂ ನಿತ್ಯಜೀವನ ಉತ್ತಮವಾಗಿದೆ
ಈ ಬಗ್ಗೆ ಅವರ ಕುಟುಂಬದ ಮೂಲಗಳು ಸ್ಪಷ್ಟನೆ ನೀಡಿದ್ದು, ಖಾದರ್ ಖಾನ್ ಅವರು ವಯೋ ಸಹಜ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವುದು ಸಹಜ. ಆದರೆ, ಅವರು ತೀರಾ ಅಸ್ವಸ್ಥರಾಗಿಲ್ಲ. ಅವರ ನಿತ್ಯಜೀವನ ಉತ್ತಮವಾಗಿಯೇ ಸಾಗುತ್ತಿದೆ ಎಂದು ಹೇಳಿವೆ.
ಕೆನಡಾಕ್ಕೆ ಹೋಗುವುದು ಸಾಮಾನ್ಯ
ಬಾಲಿವುಡ್ ನ ನಿರ್ದೇಶಕಿ ಫೌಜಿಯಾ ಅರ್ಷಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಕೆನಡಾದಲ್ಲಿ ಖಾದರ್ ಖಾನ್ ಅವರ ಪುತ್ರ ನೆಲೆಸಿರುವುದರಿಂದ ಅವರು ಆಗಾಗ ಕೆನಡಾಕ್ಕೆ ಹೋಗುವುದು ವಾಡಿಕೆ. ಈ ಬಾರಿಯೂ ಅವರು ಕೆನಡಾಕ್ಕೆ ಹೋಗಿದ್ದಾರೆ ಅಷ್ಟೇ. ವ್ಹೀರ್ ಚೇರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕೆನಡಾಕ್ಕೆ ತೆರಳಿದ್ದನ್ನು ನೋಡಿರುವ ಯಾರೋ ಈ ಬಗ್ಗೆ ತಪ್ಪು ಮಾಹಿತಿ ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
2015ರಲ್ಲಿ ತೆರೆಕಂಡಿದ್ದ ಚಿತ್ರದ ನಿರ್ದೇಶಕಿ
ಫೌಜಿಯಾ ಅವರು ಈ ಹಿಂದೆ ಹೋಗಯಾ ದಿಮಾಖ್ ಕಾ ದಾಹಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಖಾದರ್ ಖಾನ್ ಕೂಡ ನಟಿಸಿದ್ದರು. ಅಲ್ಲಿಂದ ಈವರೆಗೆ ಯಾವುದೇ ಚಿತ್ರದಲ್ಲಿ ಖಾದರ್ ಖಾನ್ ಕಾಣಿಸಿಕೊಂಡಿಲ್ಲ.
ಖಾದರ್ ಬಗ್ಗೆ ಅಳಲು ತೋಡಿಕೊಂಡಿದ್ದ ಹಿರಿಯ ನಟ
ಇತ್ತೀಚೆಗೆ, ಬಾಲಿವುಡ್ ನ ಮತ್ತೊಬ್ಬ ಹಿರಿಯ ನಟ ಶಕ್ತಿ ಕಪೂರ್ (ನಟಿ ಶ್ರದ್ಧಾ ಕಪೂರ್ ತಂದೆ) ಅವರು, ಖಾದರ್ ಖಾನ್ ಅವರು ವ್ಹೀಲ್ ಚೇರಿನಲ್ಲೇ ದಿನದೂಡುತ್ತಿದ್ದಾರೆ. ಬಾಲಿವುಡ್ ನ ಹಿರಿಯ ನಟರನ್ನು ಭೇಟಿ ಮಾಡಲು ಅವರು ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಅವರಿಂದ ಭೇಟಿ ಸಾಧ್ಯವಾಗಿಲ್ಲ. ಆ ಮಟ್ಟಿಗೆ ಅಸ್ವಸ್ಥರಾಗಿದ್ದಾರೆಂದು ತಿಳಿಸಿದ್ದರು. ಅವರ ಈ ಮಾತುಗಳನ್ನು ಕೇಳಿದ್ದ ಕೆಲ ದಿನಗಳಲ್ಲೇ ಖಾದರ್ ಖಾನ್ ಚಿಕಿತ್ಸೆಗಾಗಿ ಬಾಲಿವುಡ್ ಗೆ ಹೋಗಿದ್ದಾರೆಂಬುದು ಸಹಜವಾಗಿ ಚಿತ್ರ ರಸಿಕರಲ್ಲಿ ದಿಗಿಲು ಮೂಡಿಸಿತ್ತು.
ದೊಡ್ಡ ಕಲಾವಿದ ಅವರು
1937ನೇ ಡಿಸೆಂಬರ್ 11ರಂದು ಜನಿಸಿದ್ದ ಖಾದರ್ ಖಾನ್, 1979ರ ದಶಕದಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. 1974ರಲ್ಲಿ ರೋಟಿ ಎಂಬ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರಸಾಹಿತಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಖಾದರ್ ಖಾನ್, ಆನಂತರ ಬಹುಬೇಡಿಕೆಯ ಸಂಭಾಷಣೆಕಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಗಲೇ ಅವರಿಗೆ ಸ್ಟಾರ್ ವ್ಯಾಲ್ಯೂ ಬಂದಿತ್ತು.
ನಾಲ್ಕು ತಲೆಮಾರುಗಳೊಂದಿಗೆ ಕೆಲಸ
ಹಿಂದಿ ಚಿತ್ರರಂಗದ ಹಿರಿಯ ನಟರಾದ ಜೀತೇಂದ್ರ, ಫಿರೋಜ್ ಖಾನ್, ಅಮಿತಾಭ್ ಬಚ್ಚನ್, ಗೋವಿಂದಾ ಮುಂತಾದ ಸುಮಾರು ನಾಲ್ಕು ತಲೆಮಾರುಗಳ ನಟರ ಚಿತ್ರಗಳಿಗೆ ಚಿತ್ರ ಸಾಹಿತಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು. 80ರ ದಶಕದಲ್ಲೇ ನಟರಾಗಿ ತಮ್ಮ ಪ್ರತಿಭೆಯ ಮತ್ತೊಂದು ಮುಖ ಪ್ರದರ್ಶಸಿದ ಅವರು, ಅಲ್ಲೂ ಯಶಸ್ಸು ಕಂಡರು. ನಟರಾದ ಆರಂಭಿಕ ದಿನಗಳಲ್ಲಿ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಆನಂತರ ಹಾಸ್ಯನಟರಾಗಿ ಜನಪ್ರಿಯರಾದರು. 90ರ ದಶಕದಲ್ಲಿ ಅವರು ನಟ ಗೋವಿಂದಾ ಅವರ ಕಾಂಬಿನೇಷನ್ ನಲ್ಲಿ ಅನೇಕ ಹಾಸ್ಯ ಚಿತ್ರಗಳಲ್ಲಿ ಕಾಣಿಸಿಕೊಂಡು, ಗೋವಿಂದಾ ಅವರ ಪ್ರತಿ ಚಿತ್ರದಲ್ಲೂ ಖಾಯಂ ಸಹ ನಟರಾಗಿ ಖಾದರ್ ಖಾನ್ ಇರಲೇಬೇಕೆನ್ನುವಷ್ಟು ಮಾರುಕಟ್ಟೆ ಸೃಷ್ಟಿಯಾಗಿತ್ತು.