ಬೆಳಿಗ್ಗೆ ತೀರ್ಪು, ಸಂಜೆ ರಾಜೀನಾಮೆ: ಚರ್ಚೆಗೆ ಗ್ರಾಸವಾದ ಜಡ್ಜ್ ತೀರ್ಮಾನ
ನವದೆಹಲಿ, ಏಪ್ರಿಲ್ 16: ಹೈದರಾಬಾದ್ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ಬೆನ್ನಲ್ಲೇ, ತೀರ್ಪು ನೀಡಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಎಲ್ಲ ಐವರು ಆರೋಪಿಗಳ ಖುಲಾಸೆ
ಹನ್ನೊಂದು ವರ್ಷಗಳ ಹಿಂದೆ ನಡೆದ ಮೆಕ್ಕಾ ಮಸೀದಿ ಬಾಂಬ್ ಸ್ಫೋಟದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಎನ್ಐಎ ವಿಶೇಷ ನ್ಯಾಯಾಲಯ ಸ್ವಾಮಿ ಅಸೀಮಾನಂದ ಸೇರಿದಂತೆ ಐವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಧೀಶ ರವೀಂದ್ರ ರೆಡ್ಡಿ ಸೋಮವಾರ ಬೆಳಿಗ್ಗೆ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.
2007ರಲ್ಲಿ ಮೆಕ್ಕಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 9 ಮಂದಿ ಮೃತಪಟ್ಟಿದ್ದರು. ಬಲಪಂಥೀಯ ಸಂಘಟನೆಗಳಿಗೆ ಸೇರಿದ ಹತ್ತು ಮಂದಿಯನ್ನು ಆರೋಪಿಗಳೆಂದು ನಮೂದಿಸಲಾಗಿತ್ತು. ಅವರಲ್ಲಿ ಐವರು ವಿಚಾರಣೆ ಎದುರಿಸಿದ್ದರು.
Judge who gave acquittal to all accused in Mecca Masjid Blast RESIGNS very intriguing and I am surprised with the Lordship decision
— Asaduddin Owaisi (@asadowaisi) 16 April 2018
ನ್ಯಾಯಾಧೀಶರ ರಾಜೀನಾಮೆ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತೀರ್ಪು ಪ್ರಕಟಿಸುವ ವಿಚಾರದಲ್ಲಿ ಅವರ ಮೇಲೆ ಒತ್ತಡಗಳು ಇರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.