ಮುಂದಿನ ವಾರ ಜಯಲಲಿತಾಗೆ ಅಗ್ನಿ ಪರೀಕ್ಷೆ
ಬೆಂಗಳೂರು, ಮೇ 09 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಮಂದಿನ ವಾರ ಅಗ್ನಿ ಪರೀಕ್ಷೆ ಎದುರಾಗಿದೆ. ಸೋಮವಾರ ಮೇಲ್ಮನವಿ ಅರ್ಜಿಯ ತೀರ್ಪು ಪ್ರಕಟವಾಗಲಿದ್ದು, ಮಂಗಳವಾರ ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ಮೇಲ್ಮನವಿಯ ವಿಚಾರಣೆಯನ್ನು ಮಾ.11ರಂದು ಮುಕ್ತಾಯಗೊಳಿಸಿದ್ದಾರೆ. ಮೇ 11ರ ಸೋಮವಾರ ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟಗೊಳ್ಳಲಿದೆ. [ಆಸ್ತಿಗಳಿಕೆ ಪ್ರಕರಣದ timeline]

2014ರ ಸೆ. 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಕುನ್ಹ ಅವರು, ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ತಪ್ಪಿತಸ್ಥರು ಎಂದು ಆದೇಶ ನೀಡಿದ್ದರು. ಸುಪ್ರೀಂ ಮೊರೆ ಹೋಗಿ ಜಯಲಲಿತಾ ಜಾಮೀನು ಪಡೆದಿದ್ದರು.[ಜಯಲಲಿತಾ ಜಾಮೀನು ವಿಸ್ತರಣೆ]
ಸುಪ್ರೀಂಕೋರ್ಟ್ ಎಲ್ಲರಿಗೂ ಜಾಮೀನು ನೀಡಿತ್ತು ಮತ್ತು ಪ್ರಕರಣದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಲು ವಿಶೇಷ ಪೀಠವನ್ನು ರಚನೆ ಮಾಡುವಂತೆ ಕರ್ನಾಟಕ ಹೈಕೋರ್ಟ್ಗೆ ಸೂಚಿಸಿತ್ತು. ಆದರಂತೆ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕ ಸದಸ್ಯ ಪೀಠ ರಚನೆಯಾಗಿತ್ತು.[ಬಿವಿ ಆಚಾರ್ಯ ಸಂದರ್ಶನ]
ಜಾಮೀನು ಅರ್ಜಿ ವಿಚಾರಣೆ : ಮೇ 12ರ ಮಂಗಳವಾರ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಸುಪ್ರೀಂಕೋರ್ಟ್ ನೀಡಿರುವ ಜಾಮೀನು ಅವಧಿ ಮುಕ್ತಾಯಗೊಳ್ಳಲಿದೆ. ತೀರ್ಪು ಪ್ರಕಟಗೊಂಡ ಮರುದಿನವೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಒಂದು ವೇಳೆ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದರೆ, ಇತ್ತ ಸುಪ್ರೀಂಕೋರ್ಟ್ ಜಯಲಲಿತಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರೆ, ಅವರು ಮತ್ತೆ ಜೈಲು ಸೇರುವ ಸಾಧ್ಯತೆ ಇದೆ. ಪುನಃ ಅವರು ಜಾಮೀನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. [ಪಿಟಿಐ ಚಿತ್ರ]












Click it and Unblock the Notifications