2013ರಲ್ಲಿಯೂ ದಾಳಿ ಆಗಿತ್ತು, ಆಗ ಇಲ್ಲದ ವಿವಾದ ಈಗೇಕೆ?: ನಿರ್ಮಲಾ ಸೀತಾರಾಮನ್
ನವದೆಹಲಿ, ಮಾರ್ಚ್ 5: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮೇಲೆ 2013ರಲ್ಲಿಯೂ ದಾಳಿಗಳಾಗಿದ್ದವು. ಆದರೆ ಈಗಿನಂತೆ ಆಗ ಯಾವುದೇ ವಿವಾದ ಸೃಷ್ಟಿಮಾಡಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
ವೈಯಕ್ತಿಕ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕೆಲವು ವಂಚನೆಗಳು ನಡೆಯುತ್ತಿದೆ ಎಂಬುದನ್ನು ತಿಳಿಯುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ತಿಳಿಸಿದ್ದಾರೆ.
'ಮೊದಲನೆಯದಾಗಿ, ನಾನು ಯಾವುದೇ 'ಎ' ಅಥವಾ 'ಬಿ' ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುತ್ತಿರುವುದರಿಂದ, ಇದೇ ಹೆಸರುಗಳ ಮೇಲೆ 2013ರಲ್ಲಿಯೂ ದಾಳಿ ನಡೆದಿತ್ತು' ಎಂದು ಅವರು ಹೇಳಿದ್ದಾರೆ.

2013ರ ದಾಳಿಗಳ ಫಲಿತಾಂಶದ ಬಗ್ಗೆ ಅವರು ಮಾತನಾಡಲಿಲ್ಲ. ಹಾಗೆಯೇ ಈ ಏಳು ವರ್ಷಗಳಲ್ಲಿ ದಾಳಿಗೆ ಸಂಬಂಧಿಸಿದಂತೆ ಬೇರೆ ತನಿಖೆ ನಡೆದಿದ್ದರ ಬಗ್ಗೆ ಪ್ರಸ್ತಾಪಿಸಲಿಲ್ಲ.
'2013ರ ದಾಳಿಗಳು ಆಗ ವಿವಾದ ಆಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಈಗ ವಿವಾದ ಸೃಷ್ಟಿಯಾಗಿದೆ. ನನಗೆ ಗೊತ್ತಿಲ್ಲ. ನಾನು ಯಾವುದೇ ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಆದರೆ ಇದು ನಿರ್ದಿಷ್ಟ ಹೆಸರುಗಳಿಗೆ ಸಂಬಂಧಿಸಿದರೆ, ಓ ಅದು ಈಗ ಆಗುತ್ತದೆಯೇ ಎಂಬ ಪ್ರಶ್ನೆಯನ್ನು ಇರಿಸಬೇಕೇ?. ದಯವಿಟ್ಟು ಹಿಂದೆ ತಿರುಗಿ ನೋಡಿ. ಅದು 2013ರಲ್ಲಿಯೂ ಸಂಭವಿಸಿತ್ತು' ಎಂದರು.
ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಹಾಗು ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಸುಮಾರು 650 ಕೋಟಿ ರೂ ಹಣಕಾಸು ವಹಿವಾಟಿನಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದರು. ಮೋದಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.












Click it and Unblock the Notifications